ಹರೇಕಳದಲ್ಲಿ ಕೊಡಮಣಿತ್ತಾಯ ಜಾತ್ರೆ ; ನೆಂಟರೊಂದಿಗೆ ನದಿ ಬಳಿಗೆ ತೆರಳಿದ್ದ ವ್ಯಕ್ತಿ ನೀರುಪಾಲು 

26-03-23 10:37 pm       Mangalore Correspondent   ಕರಾವಳಿ

ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದು ಹರೇಕಳ ಬೈತಾರ್ ನಿವಾಸಿ ಪ್ರಕಾಶ್ ಗಟ್ಟಿ (46) ಎಂಬವರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. 

ಉಳ್ಳಾಲ, ಮಾ.26 : ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದು ಹರೇಕಳ ಬೈತಾರ್ ನಿವಾಸಿ ಪ್ರಕಾಶ್ ಗಟ್ಟಿ (46) ಎಂಬವರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. 

ಹರೇಕಳದ ಉಳಿದೊಟ್ಟು ಬಳಿಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದ್ದು, ಅದಕ್ಕಾಗಿ ಪ್ರಕಾಶ್ ಅವರು ಸ್ನೇಹಿತರು ಹಾಗೂ  ಸಂಬಂಧಿಕರನ್ನು ಮನೆಗೆ ಕರೆದಿದ್ದರು. ಸುಮಾರು 20 ರಷ್ಟು ನೆಂಟರು ಮತ್ತು ಸ್ನೇಹಿತರನ್ನು ಕರೆದುಕೊಂಡು ಪ್ರಕಾಶ್ ಅವರು ತಮ್ಮ ತೋಟದ ಬಳಿಯಿರುವ  ನೇತ್ರಾವತಿ ನದಿ ತೀರಕ್ಕೆ ತೆರಳಿದ್ದರು. ಅಲ್ಲಿ ನದಿ ನೀರಿಗೆ ಅಡಿಕೆ ಮರವನ್ನು (ಬಂಬು) ಅಡ್ಡವಾಗಿ ಹಾಕಿದ್ದರು. ಅದರಲ್ಲಿ ನಡೆದುಕೊಂಡು ಹೋಗುವ ಸಂದರ್ಭ ಆಕಸ್ಮಿಕ ಕಾಲುಜಾರಿ ಬಿದ್ದು , ನದಿ ನೀರಿನ ಹೂಳಿನಲ್ಲಿ ಹೂತುಹೋಗಿದ್ದರು. ಈಜಲು ಪರಿಣತರಾಗಿದ್ದರೂ ಮೇಲೆ ಬರಲು ಸಾಧ್ಯವಾಗದೇ, ನದಿ ನೀರಿನಲ್ಲಿ ಮುಳುಗಿದ್ದಾರೆ.

ಸ್ಥಳೀಯ ಈಜುಗಾರರು ಅವರನ್ನು ಮೇಲಕ್ಕೆತ್ತಲು ಪ್ರಯತ್ನಿಸಿದ್ದು ಸಾಧ್ಯವಾಗದೇ ಇದ್ದಾಗ, ಉತ್ತರಪ್ರದೇಶ ಮೂಲದ ಮರಳು ತೆಗೆಯುವ ಕಾರ್ಮಿಕರು ಶೋಧ ನಡೆಸಿ ಮೇಲಕ್ಕೆ ಎತ್ತಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಪ್ರಕಾಶ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಮೃತರು ಬೈಕಂಪಾಡಿಯ ಎಂ.ಸಿ.ಎಫ್‌ನಲ್ಲಿ ಹಲವು ವರ್ಷಗಳಿಂದ ಉದ್ಯೋಗ ನಡೆಸುತ್ತಿದ್ದರು. ಉದ್ಯೋಗದ ಜೊತೆಗೆ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಪ್ರಗತಿ ಪರ ಕೃಷಿಕರೂ ಆಗಿದ್ದರು.  ಮೃತರು   ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Prakash Gatti (46), a resident of Harekala Baitar, died after a footbridge collapsed into the Nethravati river on Sunday, March 26. Prakash had invited his friends and relatives to his home for an annual fair being held at the Kodamanittaya deity near Satottu in Harekala. Along with about 20 friends, he had gone to the banks of the Nethravati river near his garden where tree logs had been placed across the water.