ಕೆದಂಬಾಡಿ ರಾಮಯ್ಯ ಗೌಡರ ಹೆಸರಲ್ಲಿ ಶೌರ್ಯ ಪ್ರಶಸ್ತಿ ; ಸುಬೇದಾರ್ ಏಕನಾಥ ಶೆಟ್ಟಿಗೆ ಪ್ರಶಸ್ತಿ ಘೋಷಣೆ 

03-04-23 04:46 pm       Mangalore Correspondent   ಕರಾವಳಿ

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಹೆಸರಲ್ಲಿ ರಾಜ್ಯ ಮಟ್ಟದ ಶೌರ್ಯ ಪ್ರಶಸ್ತಿ ಸ್ಥಾಪಿಸಲಾಗಿದ್ದು ಮೊದಲ ಪ್ರಶಸ್ತಿಯನ್ನು ಬೆಳ್ತಂಗಡಿ ಮೂಲದ ಯೋಧ ಸುಬೇದಾರ್‌ ಏಕನಾಥ ಶೆಟ್ಟಿ ಅವರಿಗೆ ಮರಣೋತ್ತರವಾಗಿ ನೀಡಲು ನಿರ್ಧರಿಸಲಾಗಿದೆ.

ಮಂಗಳೂರು, ಎ.3: ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಹೆಸರಲ್ಲಿ ರಾಜ್ಯ ಮಟ್ಟದ ಶೌರ್ಯ ಪ್ರಶಸ್ತಿ ಸ್ಥಾಪಿಸಲಾಗಿದ್ದು ಮೊದಲ ಪ್ರಶಸ್ತಿಯನ್ನು ಬೆಳ್ತಂಗಡಿ ಮೂಲದ ಯೋಧ ಸುಬೇದಾರ್‌ ಏಕನಾಥ ಶೆಟ್ಟಿ ಅವರಿಗೆ ಮರಣೋತ್ತರವಾಗಿ ನೀಡಲು ನಿರ್ಧರಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ  ಸಮಿತಿ ಅಧ್ಯಕ್ಷ ಎಂ.ಬಿ.ಕಿರಣ್‌ ಬುಡ್ಲೆಗುತ್ತು, 1834ರಿಂದ 1837ರ ವರೆಗೆ ಮೊದಲ ಬಾರಿಗೆ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ತುಳುನಾಡಿನ ಅನೇಕ ರೈತರು ಬಲಿದಾನ ಮಾಡಿದ್ದಾರೆ. ಹೋರಾಟಗಾರರು ಕೆದಂಬಾಡಿ ರಾಮಯ್ಯ ಗೌಡ ನೇತೃತ್ವದಲ್ಲಿ ಸುಳ್ಯದಿಂದ ಹೊರಟು ಮಂಗಳೂರಿಗೆ ಮುತ್ತಿಗೆ ಹಾಕಿ, ಬ್ರಿಟಿಷರನ್ನು ಓಡಿಸಿ ನಗರದ ಬಾವುಟಗುಡ್ಡೆಯಲ್ಲಿ 1837ರ ಎ. 5ರಂದು ವಿಜಯ ಪತಾಕೆ ಹಾರಿಸಿ ಹಾರಿಸಿದ್ದರು. ಅದು ಮೊದಲ ಬಾರಿಗೆ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಸಂಘಟಿತ ಹೋರಾಟವಾಗಿದ್ದು ಇದರ ಸ್ಮರಣಾರ್ಥ ಕಳೆದ ವರ್ಷ ಬಾವುಟಗುಡ್ಡೆಯಲ್ಲಿ ರಾಮಯ್ಯ ಗೌಡ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಅವರ ಹೆಸರಿನಲ್ಲಿ ಈ ವರ್ಷದಿಂದ ಶೌರ್ಯ ಪ್ರಶಸ್ತಿಯನ್ನು ಆರಂಭಿಸಲಾಗಿದೆ ಎಂದರು. 

ಭಾರತೀಯ ಭೂಸೇನೆ ಮತ್ತು ವಾಯು ಸೇನೆಗಳಲ್ಲಿ ಕರ್ತವ್ಯ ನಿರ್ವಹಿಸಿ ಮರೆಯಾಗಿದ್ದ ಸುಬೇದಾರ್‌ ಏಕನಾಥ ಶೆಟ್ಟಿ ಅವರನ್ನು ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಾಯು ಸೇನೆಯಲ್ಲಿದ್ದ ಏಕನಾಥ ಶೆಟ್ಟಿ ನಿಗೂಢ ಕಣ್ಮರೆಯಾಗಿದ್ದರು. 2016ರಲ್ಲಿ ಅಂಡಮಾನ್‌ ನಿಕೋಬಾರ್‌ನ ಪೋರ್ಟ್‌ಬ್ಲೇರ್‌ಗೆ ತೆರಳುತ್ತಿದ್ದ ವಿಮಾನ ಸಮುದ್ರದ ಮಧ್ಯೆ ನಿಗೂಢವಾಗಿ ಕಣ್ಮರೆಯಾಗಿತ್ತು. ಆ ವಿಮಾನದಲ್ಲಿ  ಸುಬೇದಾರ್‌ ಏಕನಾಥ ಶೆಟ್ಟಿ ಇದ್ದರು ಎಂದರು. 

ಸೇಂಟ್‌ ಅಲೋಷಿಯಸ್‌ ಪದವಿ ಪೂರ್ವ ಕಾಲೇಜಿನ ಲೊಯೋಲಾ ಸಭಾಂಗಣದಲ್ಲಿ ಇದೇ ಎ.5ರಂದು ಬೆಳಗ್ಗೆ 10.30ರಿಂದ ಅಮರ ಸುಳ್ಯ ಸಂಸ್ಮರಣಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಏಕನಾಥ ಶೆಟ್ಟಿ ಕುಟುಂಬಸ್ಥರಿಗೆ ₹ 50 ಸಾವಿರ ನಗದನ್ನು ಒಳಗೊಂಡ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ’ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಪಿ.ಎಚ್‌.ಆನಂದ್‌ ನೆರಿಯ, ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಪುತ್ತಿಲ, ಪ್ರಧಾನ ಸಂಚಾಲಕ ಭಾಸ್ಕರ ದೇವಸ್ಯ ಹಾಗೂ ಖಜಾಂಚಿ ಶಿವರಾಮ ಗೌಡ ನಿನ್ನಿಕಲ್‌ ಇದ್ದರು.

Mangalore Kedambadi Ramaiah Gowda award to Subedar Eknath Shetty.