ಮುತಾಲಿಕ್ ಸ್ಪರ್ಧೆಗೆ ಬಿಜೆಪಿ ಆಫರ್ ; ಸಿಎಂ ಬೊಮ್ಮಾಯಿ ಸಮ್ಮುಖದಲ್ಲೇ ಮಾತುಕತೆ, ಶ್ರೀರಾಮ ಸೇನೆಗೆ ಎರಡು ಟಿಕೆಟ್ ನೀಡಲು ಒಪ್ಪಿದ್ದ ನಾಯಕರು!

06-04-23 06:06 pm       Giridhar Shetty   ಕರಾವಳಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ಪ್ರಮೋದ್ ಮುತಾಲಿಕ್ ಜೊತೆಗೆ ಎರಡು ಬಾರಿ ಮುಖಾಮುಖಿ ಮಾತುಕತೆ ನಡೆಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಪ್ರಮೋದ್ ಮುತಾಲಿಕ್ ಮತ್ತು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರಿಗೆ ಉತ್ತರ ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ನೀಡುವ ಆಫರ್ ನೀಡಿದ್ದರೆಂದೂ ತಿಳಿದುಬಂದಿದೆ.

ಉಡುಪಿ, ಎ.6: ಕಾರ್ಕಳ ಕ್ಷೇತ್ರದಲ್ಲೇ ಬಿಜೆಪಿ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಶ್ರೀರಾಮ ಸೇನೆ ಸಂಸ್ಥಾಪಕ, ಪ್ರಬಲ ಹಿಂದುತ್ವವಾದಿ ಪ್ರಮೋದ್ ಮುತಾಲಿಕ್ ಕಳೆದ ಎರಡು ತಿಂಗಳಿನಿಂದ ಕಾರ್ಕಳದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಸುನಿಲ್ ಕುಮಾರ್ ಬದಲಿಗೆ ತನಗೆ ಸೀಟು ನೀಡಬೇಕೆಂಬ ಮುತಾಲಿಕ್ ಆಗ್ರಹಕ್ಕೆ ರಾಜ್ಯ ಬಿಜೆಪಿ ಮಣಿದಿಲ್ಲ. ಸಚಿವ ಸುನಿಲ್ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದರೂ, ಅದಕ್ಕೆ ಜಿಲ್ಲಾಡಳಿತ ಆಗಲೀ, ರಾಜ್ಯ ಸರಕಾರ ಆಗಲೀ ಕ್ಯಾರೆಂದಿಲ್ಲ. ಲೋಕಾಯುಕ್ತಕ್ಕೆ ದೂರು ನೀಡಿದ್ದರೂ, ಆ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿಲ್ಲ.

ಇವೆಲ್ಲದರ ನಡುವೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ಪ್ರಮೋದ್ ಮುತಾಲಿಕ್ ಜೊತೆಗೆ ಎರಡು ಬಾರಿ ಮುಖಾಮುಖಿ ಮಾತುಕತೆ ನಡೆಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಪ್ರಮೋದ್ ಮುತಾಲಿಕ್ ಮತ್ತು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರಿಗೆ ಉತ್ತರ ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ನೀಡುವ ಆಫರ್ ನೀಡಿದ್ದರೆಂದೂ ತಿಳಿದುಬಂದಿದೆ. ಆದರೆ, ಮುತಾಲಿಕ್ ಮಾತ್ರ ಬಿಜೆಪಿ ಆಫರ್ ತಿರಸ್ಕರಿಸಿದ್ದು, ತಾನು ಬಯಸುವ ಕಾರ್ಕಳ ಅಥವಾ ಚಿಕ್ಕಮಗಳೂರು ಕ್ಷೇತ್ರದಲ್ಲಿಯೇ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಕೇಳಿದ್ದಾರೆ ಎನ್ನಲಾಗಿದೆ.

ಒಂದು ಬಾರಿ ಸುನಿಲ್ ಕುಮಾರ್ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಜೊತೆಗೆ ಕುಳಿತು ಮುತಾಲಿಕ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಆನಂತರ, ಸಿಟಿ ರವಿ ಬೆಂಗಳೂರಿನ ಶಾಸಕರ ಭವನದಲ್ಲಿಯೇ ಮುತಾಲಿಕ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಬಾಗಲಕೋಟ ಮತ್ತು ಗುಲ್ಬರ್ಗ ಮತಕ್ಷೇತ್ರದಲ್ಲಿ ಇಬ್ಬರಿಗೆ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಆಫರ್ ನೀಡಿದ್ದರು ಎನ್ನಲಾಗಿದೆ. ಆದರೆ ಎರಡು ಬೇಡಿಕೆಯನ್ನೂ ಮುತಾಲಿಕ್ ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕಾರ್ಕಳದಲ್ಲಿ ಸಂಘ ಪರಿವಾರದ ವಿವೇಕಾನಂದ ಶೆಣೈ ಮತ್ತು ಸುನಿಲ್ ಕುಮಾರ್ ನಡುವೆ ವೈಯಕ್ತಿಕ ವೈಷಮ್ಯ ಇದೆ. ಪ್ರಮೋದ್ ಮುತಾಲಿಕ್ ಈಗ ವಿವೇಕಾನಂದ ಶೆಣೈ ಪರ ನಿಂತು ಇಬ್ಬರ ನಡುವಿನ ವೈಯಕ್ತಿಕ ವೈಷಮ್ಯಕ್ಕೆ ಬಲಿ ಬೀಳುತ್ತಿದ್ದಾರೆ ಎನ್ನುವ ಮಾತು ಸಂಘ ಪರಿವಾರದ ಒಳಗಿಂದ ಕೇಳಿಬರುತ್ತಿದೆ. ಸದ್ಯಕ್ಕೆ ಕಾರ್ಕಳದಲ್ಲಿ ಸುನಿಲ್ ಕುಮಾರ್ ಅವರೇ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ. ಅದರಲ್ಲಿ ಬದಲಾವಣೆ ಇರುವುದಿಲ್ಲ ಎನ್ನುವ ಮಾಹಿತಿಗಳಿವೆ. ಆದರೆ, ಮುತಾಲಿಕ್ ತನ್ನ ಪಟ್ಟು ಸಡಿಲಿಸದೆ ಕಾರ್ಕಳದಲ್ಲಿ ಪಕ್ಷೇತರ ನಿಲ್ಲುತ್ತೇನೆ ಎನ್ನುವ ವರಸೆಯಲ್ಲಿದ್ದಾರೆ. ಮುತಾಲಿಕ್ ಅಲ್ಲಿ ಸ್ಪರ್ಧಿಸಿದರೂ, ಸುನಿಲ್ ಕುಮಾರ್ ಅವರನ್ನು ಸೋಲಿಸುವುದು ಸಾಧ್ಯವಾಗದು ಎಂಬ ಮಾಹಿತಿ ಅಲ್ಲಿನವರದ್ದು. ಮುತಾಲಿಕ್ 10-15 ಸಾವಿರ ಮತ ಪಡೆದು ಕಾಂಗ್ರೆಸ್ ಅಭ್ಯರ್ಥಿ ಪ್ರಬಲನಾಗಿದ್ದಲ್ಲಿ ಮಾತ್ರ ಸೋಲಿಸಬಹುದಂತೆ. ಆದರೆ ಕಾರ್ಕಳದಲ್ಲಿ ಕಾಂಗ್ರೆಸ್ ಅಷ್ಟರ ಮಟ್ಟಿಗೆ ಪ್ರಬಲವಾಗಿಯೂ ಇಲ್ಲ. ಇತ್ತ ಮುತಾಲಿಕ್ ಪರವಾಗಿ ಕ್ಷೇತ್ರದಲ್ಲಿ ಅಷ್ಟರ ಮಟ್ಟಿಗೆ ಪ್ರಾಬಲ್ಯವೂ ಇಲ್ಲವಂತೆ.

ಕಾಂಗ್ರೆಸಿನಲ್ಲಿ ಟಿಕೆಟ್ ಫೈಟ್

ಕಾರ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುತ್ತಿಗೆದಾರ ಮುನಿಯಾಲು ಉದಯಕುಮಾರ್ ಶೆಟ್ಟಿ ಮತ್ತು ಮಂಜುನಾಥ ಪೂಜಾರಿ ನಡುವೆ ಟಿಕೆಟಿಗಾಗಿ ಪೈಪೋಟಿ ಇದೆ. ಮಂಜುನಾಥ ಪೂಜಾರಿ ಅವರು ವೀರಪ್ಪ ಮೊಯ್ಲಿ ಗುಂಪಿನಲ್ಲಿದ್ದು, ಮೊಯ್ಲಿ ಕೃಪೆಯಿಂದಲೇ ಸೀಟು ಪಡೆಯುತ್ತಾರೆ ಎನ್ನಲಾಗುತ್ತಿದೆ. ಇದೇ ವೇಳೆ, ಉದಯಕುಮಾರ್ ಶೆಟ್ಟಿ ಕಣಕ್ಕಿಳಿದರೆ ಬಿಜೆಪಿಯ ಸುನಿಲ್ ಕುಮಾರ್ ವಿರುದ್ಧ ಪ್ರಬಲ ಪ್ರತಿಸ್ಪರ್ಧಿ ಆಗಬಹುದು ಅನ್ನುವ ಲೆಕ್ಕಾಚಾರವೂ ಇದೆ. ಆದರೆ ಈ ಹಿಂದೆ ಬಿಲ್ಲವ ಸಮುದಾಯದ ಗೋಪಾಲ ಪೂಜಾರಿ, ಸುನಿಲ್ ಕುಮಾರ್ ಅವರನ್ನು ಸೋಲಿಸಿದ್ದ ಇತಿಹಾಸ ಇರುವುದರಿಂದ ಬಿಲ್ಲವರೇ ಅಭ್ಯರ್ಥಿಯಾಗಬೇಕೆಂದು ಮತ್ತೊಂದು ಬಣ ಪಟ್ಟು ಹಿಡಿದಿದೆ

Bjp offers two tickets to Pramod Muthalik of Sri Rama Sene. CM Bommai and CT ravi have made face to face discussions along with Pramod Muthalik in reagrds to BJP ticket says sources.