ಕ್ರಿಕೆಟ್ ಬೆಟ್ಟಿಂಗ್ ನೆರಳು ; ಸಾಲದಿಂದ ಕೈಸುಟ್ಟುಕೊಂಡ ವ್ಯಕ್ತಿ ಆತ್ಮಹತ್ಯೆ, ತೊಕ್ಕೊಟ್ಟಿನ ತನ್ನ ಅಂಗಡಿಯಲ್ಲೇ ಸಾವಿಗೆ ಶರಣು 

10-04-23 12:00 pm       Mangalore Correspondent   ಕರಾವಳಿ

ಟೈಲರಿಂಗ್ ವಸ್ತುಗಳ ಮಳಿಗೆ 'ಥ್ರೆಡ್ ಹೌಸ್' ಒಳಗಡೆಯೇ ಅದರ ಮಾಲಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ. 

ಉಳ್ಳಾಲ, ಎ.10: ಟೈಲರಿಂಗ್ ವಸ್ತುಗಳ ಮಳಿಗೆ 'ಥ್ರೆಡ್ ಹೌಸ್' ಒಳಗಡೆಯೇ ಅದರ ಮಾಲಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ. 

ತೊಕ್ಕೊಟ್ಟಿನ ನ್ಯೂ ಥ್ರೆಡ್ ಹೌಸ್ ಮಾಲೀಕ ಕಣೀರು ತೋಟ, ಮಹಾಲಕ್ಷ್ಮಿ ಲೇ ಔಟ್ ನಿವಾಸಿ ಪ್ರವೀಣ್ ಆಳ್ವ( 44) ಆತ್ಮಹತ್ಯೆಗೈದ ದುರ್ದೈವಿ. ಇಂದು ಬೆಳಗ್ಗಿನ ಜಾವ ಸುಮಾರು 6 ಗಂಟೆಯ ಹೊತ್ತಿಗೆ ಅಂಗಡಿಗೆ ಬಂದ ಪ್ರವೀಣ್ ಎದುರಿನ ಶಟರ್ ಕೆಳಗೆಳೆದು ಶಾಲಿನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಪ್ರವೀಣ್ ಅವರ ಸ್ನೇಹಿತರೋರ್ವರು ಬಂದು ಶಟರ್ ಎತ್ತಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಘಟನಾ ಸ್ಥಳದಲ್ಲಿ ಪ್ರವೀಣ್ ಅವರು ಬರೆದಿರುವ ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ ನನ್ನ ಸಾಲಕ್ಕೆ ನಾನೇ ಕಾರಣ, ಅಮ್ಮ, ಪತ್ನಿ , ಮಗನಲ್ಲಿ ಸಾರಿ ಅಂತ ಉಲ್ಲೇಖಿಸಿದ್ದಾರೆ. ಪ್ರವೀಣ್ ಅವರು ಕ್ರಿಕೆಟ್ ಬೆಟ್ಟಿಂಗಲ್ಲಿ ತೊಡಗಿದ್ದು ನಿನ್ನೆ ರಾತ್ರಿಯ ಐಪಿಎಲ್ ಪಂದ್ಯದಲ್ಲಿ ಕೈಸುಟ್ಟುಕೊಂಡು ಆತ್ಮಹತ್ಯೆ ನಿರ್ಧಾರ ಕೈಗೊಂಡಿರಬಹುದೆಂದು ಅವರನ್ನ ಹತ್ತಿರದಿಂದ ಬಲ್ಲವರು ತಿಳಿಸಿದ್ದಾರೆ. ಮೃತರು ತಾಯಿ , ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.

Mangalore Man commits suicide inside his own shop at Ullal, cricket beating loss suspected. The deceased has been identified as Praveen Alva(44).