ಮಂಗಳೂರಿಗೆ ನೀರಿನ ಸಮಸ್ಯೆ ; ಆಡಳಿತದ ವೈಫಲ್ಯ, ಜನರಿಗೆ ಸಂಕಷ್ಟ ; ವಿಪಕ್ಷ ನಾಯಕರ ಆರೋಪ 

05-05-23 07:06 pm       Mangalore Correspondent   ಕರಾವಳಿ

ನೀರಿನ ಸಮಸ್ಯೆ ಎದುರಿಸುವಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಮೇಯರ್ ಆಗಲೀ, ಶಾಸಕ, ಸಂಸದರಾಗಲೀ ನೀರಿನ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ನವೀನ್ ಡಿಸೋಜ ದೂರಿದ್ದಾರೆ. 

ಮಂಗಳೂರು, ಮೇ 5 : ನೀರಿನ ಸಮಸ್ಯೆ ಎದುರಿಸುವಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಮೇಯರ್ ಆಗಲೀ, ಶಾಸಕ, ಸಂಸದರಾಗಲೀ ನೀರಿನ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ನವೀನ್ ಡಿಸೋಜ ದೂರಿದ್ದಾರೆ. 

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆಯವರಿಗೆ ಹೇಳಿ ತುಂಬೆ ಅಣೆಕಟ್ಟನ್ನು ಆರು ಮೀಟರ್ ಎತ್ತರಕ್ಕೆ ಏರಿಸಿದ್ದೆವು. ಆಮೂಲಕ ಮಂಗಳೂರು ನಗರಕ್ಕೆ ಕುಡಿಯುವ ನೀರೊದಗಿಸಲು ಆದ್ಯತೆ ನೀಡಿದ್ದೆವು. ಆದರೆ ಈಗಿ‌ನ ಬಿಜೆಪಿ ಆಡಳಿತ ತುಂಬೆ ಅಣೆಕಟ್ಟಿನಲ್ಲಿ ನೀರು ಖಾಲಿಯಾಗುತ್ತ ಬಂದರೂ, ಮುಂಜಾಗ್ರತೆ ವಹಿಸದೆ ಈಗ ಏಕಾಏಕಿ ನೀರು ಕಡಿತ ಮಾಡಿದ್ದಾರೆ. 

ನೀರಿನ ಪ್ರಮಾಣ ಕಡಿಮೆಯಾಗಿದೆ ಎನ್ನುವಾಗ ಕೈಗಾರಿಕೆಗೆ ನೀರು ಕೊಡುವುದನ್ನು ನಿಲ್ಲಿಸಬೇಕಿತ್ತು. ಅದನ್ನು ಮಾಡದೆ ನೀರು ಕಡಿಮೆಯಾಯ್ತು ಅಂದಾಗ ಪೂರೈಕೆಯಲ್ಲಿ ಕಡಿತ ಮಾಡಿದ್ದಾರೆ. ಹಿಂದೆ ನಾವು 24 ಸಾವಿರ ಲೀಟರ್ ನೀರನ್ನು 65 ರೂ.ಗೆ ಕೊಡ್ತಿದ್ದೆವು. ಅದನ್ನು ಎಂಟು ಸಾವಿರ ಲೀಟರ್ ಗೆ ಕಡಿಮೆ ಮಾಡಿದ್ದಾರೆ. ದರ ಮಾತ್ರ ಅಷ್ಟೇ ಇರಿಸಿ ಜನರಿಗೆ ಮೋಸ ಮಾಡಿದ್ದಾರೆ.‌ 

ಹಿಂದೆ ಜಲಬಾವಿ ಅಂತ ಯೋಜನೆ ಇತ್ತು, ಬಿಪಿಎಲ್ ಇದ್ದವರಿಗೆ ನೀರು ಕೊಡಿಸುವ ಯೋಜನೆ. ಅದನ್ನು ಈಗ ಪೂರ್ತಿಯಾಗಿ ನಿಲ್ಲಿಸಿದ್ದಾರೆ. 
ನೀರಿನ ದರ ಏರಿಸಿ ಕಡಿಮೆ ಮಾಡುವ ನೆಪದಲ್ಲಿ ಸುಳ್ಳು ಭರವಸೆ ಕೊಟ್ಟಿದ್ದಾರೆ. ಒಂದು ವರ್ಷಕ್ಕೆ ಮಾತ್ರ ನೀರಿನ ದರ ಇಳಿಸಿದ್ದಾರೆ. ಇದು ಇಲೆಕ್ಷನ್ ಗಿಮಿಕ್, ಜನರನ್ನು ಮರುಳು ಮಾಡುವ ಯತ್ನ. ಜನರಿಗೆ ಬೇಸಿಕ್ ಆಗಿ ಬೇಕಿರುವುದು ನೀರು. ಅದನ್ನು ನಿರಾಕರಿಸಿದರೆ ಜನ ಹಾಗೇ ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು. 

ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತನಾಡಿ, ಈಗ ಇಂಡಸ್ಟ್ರಿಗೆ ನೀರು ಕಡಿತ ಮಾಡುವುದಲ್ಲ. ನೀರಿನ ಒಳಹರಿವು ನಿಂತ ಕೂಡಲೇ ಬಂದ್ ಮಾಡಬೇಕಿತ್ತು. ಮಂಗಳೂರಿನಲ್ಲಿ ಇಬ್ಬರು ಶಾಸಕರಿದ್ದು ಯಾಕೆ ಈ ಬಗ್ಗೆ ಸಭೆ ಮಾಡಿಲ್ಲ. ಈಗ ಕಂದುಕ, ಕುದ್ರೋಳಿ ಎಲ್ಲ ಕಡೆ ನೀರಿನ ಸಮಸ್ಯೆ ಆಗಿದೆ. ತಗ್ಗಿನ ಪ್ರದೇಶಗಳಿಗೇ ನೀರು ಹೋಗುತ್ತಿಲ್ಲ.‌ ಇದನ್ನು ಆಡಳಿತ ವೈಫಲ್ಯ ಎನ್ನದೆ ಬೇರೇನು ಹೇಳಬೇಕು ಎಂದು ಪ್ರಶ್ನಿಸಿದರು. 

2003-04 ರಲ್ಲಿ ನಾವು ಸ್ವಯಂಘೋಷಿತ ಆಸ್ತಿ ತೆರಿಗೆ ಹಾಕುವುದಿಲ್ಲ ಎಂದಿದ್ದೆವು. ಭರವಸೆಯಂತೆ 2007-08ರ ತನಕ ಆಸ್ತಿ ತೆರಿಗೆ ಹಾಕಿರಲಿಲ್ಲ. ಆನಂತರ ಬಿಜೆಪಿ ಅಧಿಕಾರ ಬಂದು ಆಸ್ತಿ ತೆರಿಗೆ ಹಾಕಿದ್ದರು. ಬಡವರು, ಮಧ್ಯಮ ವರ್ಗದವರಿಗಾಗಿ ಐನೂರು ರೂ.ಗೆ ನೀರು ಪೂರೈಕೆ ಮಾಡುವ ವ್ಯವಸ್ಥೆ ಇತ್ತು. ಅದನ್ನು ಕಡಿತ ಮಾಡಿದ್ದು ಬಿಜೆಪಿ ಎಂದು ಹೆಗ್ಡೆ ದೂರಿದರು.‌ ಸುದ್ದಿಗೋಷ್ಟಿಯಲ್ಲಿ ಪ್ರವೀಣ್ ಚಂದ್ರ ಆಳ್ವ, ದೀಪಕ್ ಪೂಜಾರಿ, ವಿನಯರಾಜ್ ಇದ್ದರು.

Congress MCC opposition leader Naveen Dsouza slams administration over water shortage in Mangalore city.