ದೇರಳಕಟ್ಟೆ ; ಎಸ್ಡಿಪಿಐ ರ್ಯಾಲಿ ವೇಳೆ ಕಾಂಗ್ರೆಸ್ ಪ್ರಚಾರ ವಾಹನದ ಚಾಲಕನಿಗೆ ಹಲ್ಲೆ, ಎಸ್ಡಿಪಿಐ ಕಾರ್ಯಕರ್ತ ಪೊಲೀಸರ ವಶಕ್ಕೆ 

07-05-23 10:13 pm       Mangalore Correspondent   ಕರಾವಳಿ

ಎಸ್ಡಿಪಿಐ ರ್ಯಾಲಿ ವೇಳೆ ಎಂಟ್ರಿ ನೀಡಿದ ಕಾಂಗ್ರೆಸ್ ಚುನಾವಣಾ ಪ್ರಚಾರದ ವಾಹನದ ಚಾಲಕ ಹಾರ್ನ್ ಹಾಕಿದ್ದಕ್ಕೆ ಆಕ್ರೋಶಗೊಂಡ ಎಸ್ಡಿಪಿಐ ಕಾರ್ಯಕರ್ತರು ಚಾಲಕನ ಮೇಲೆ ಹಲ್ಲೆಗೈದ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ. 

ಉಳ್ಳಾಲ, ಮೇ 7 : ಎಸ್ಡಿಪಿಐ ರ್ಯಾಲಿ ವೇಳೆ ಎಂಟ್ರಿ ನೀಡಿದ ಕಾಂಗ್ರೆಸ್ ಚುನಾವಣಾ ಪ್ರಚಾರದ ವಾಹನದ ಚಾಲಕ ಹಾರ್ನ್ ಹಾಕಿದ್ದಕ್ಕೆ ಆಕ್ರೋಶಗೊಂಡ ಎಸ್ಡಿಪಿಐ ಕಾರ್ಯಕರ್ತರು ಚಾಲಕನ ಮೇಲೆ ಹಲ್ಲೆಗೈದ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ. 

ಎಸ್ಡಿಪಿಐ ಪಕ್ಷದ ವತಿಯಿಂದ ಭಾನುವಾರ ಸಂಜೆ ಉಳ್ಳಾಲದಿಂದ ದೇರಳಕಟ್ಟೆಯ ವರೆಗೆ ವಾಹನ ಜಾಥಾ ಹಮ್ಮಿಕೊಳ್ಳಲಾಗಿತ್ತು. ವಾಹನ ಜಾಥಾದಲ್ಲಿ ಸಾವಿರಾರು ಎಸ್ಡಿಪಿಐ ಕಾರ್ಯಕರ್ತರು ಪಾಲ್ಗೊಂಡಿದ್ದು ತೊಕ್ಕೊಟ್ಟು, ದೇರಳಕಟ್ಟೆ ರಸ್ತೆಯಲ್ಲಿ ಸಂಚಾರ ವ್ಯತ್ಯಯಗೊಂಡಿತ್ತು. ಎಸ್ಡಿಪಿಐ ರ್ಯಾಲಿಯು ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮುಂಭಾಗ ತಲುಪಿದಾಗ ಅಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದ ವಾಹನವು ಎದುರಾಗಿ ಚಾಲಕ ಹಾರ್ನ್ ಹೊಡೆದಿದ್ದ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಎಸ್ಡಿಪಿಐ ಕಾರ್ಯಕರ್ತರು ಪ್ರಶ್ನಿಸಿದಾಗ ಸಂಘರ್ಷ ಉಂಟಾಗಿದ್ದು ವಾಹನ ಚಾಲಕ ನೌಫಾಲ್ ಮೇಲೆ ಹಲ್ಲೆ ನಡೆದಿದೆ. ಅಲ್ಲದೆ ಎರಡು ಪಕ್ಷಗಳ ಕಾರ್ಯಕರ್ತರ ನಡುವೆಯೂ ಹೊಯ್ ಕೈ ನಡೆದಿದೆ. 

ಹಲ್ಲೆಗೊಳಗಾದ ಕಾಂಗ್ರೆಸ್ ಪ್ರಚಾರ ವಾಹನದ ಚಾಲಕ ನೌಫಾಲ್ ಆಸ್ಪತ್ರೆಗೆ ದಾಖಲಾಗಿದ್ದು ಕೊಣಾಜೆ ಪೊಲೀಸರು ಎಸ್ಡಿಪಿಐ ಕಾರ್ಯಕರ್ತನೋರ್ವನನ್ನ ವಶಕ್ಕೆ ಪಡೆದಿದ್ದಾರೆ. ದೇರಳಕಟ್ಟೆಯಲ್ಲಿ ಎಸ್ಡಿಪಿಐ ಚುನಾವಣಾ ಪ್ರಚಾರ ಸಭೆ ನಡೆಯುತ್ತಿದ್ದು ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದಾರೆ.

Mangalore Deralakatte SDPI rally, congress campaign van driver assaulted by SDPI members, police take custody of SDPI youths.