Manipur violence Christians protest in Mangalore: ಮಣಿಪುರ ಗಲಭೆ ಕ್ರೈಸ್ತರನ್ನು ಹೊರಕ್ಕಟ್ಟುವ ಷಡ್ಯಂತ್ರ ಇದ್ದಂತಿದೆ ; ಕೆಥೋಲಿಕ್ ಸಭಾದಿಂದ ಬೃಹತ್ ಪ್ರತಿಭಟನೆ  

27-07-23 09:45 pm       Mangalore Correspondent   ಕರಾವಳಿ

ಮಣಿಪುರದಲ್ಲಿ ಸರಣಿ ಅತ್ಯಾಚಾರ, ಮಹಿಳೆಯರ ಬೆತ್ತಲೆ ಮೆರವಣಿಗೆ, ಹತ್ಯಾಕಾಂಡ ವಿಚಾರದಲ್ಲಿ ಕೇಂದ್ರ ಮತ್ತು ಮಣಿಪುರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಮಂಗಳೂರಿನಲ್ಲಿ ಕೆಥೋಲಿಕ್ ಸಭಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಮಂಗಳೂರು, ಜುಲೈ 27: ಮಣಿಪುರದಲ್ಲಿ ಸರಣಿ ಅತ್ಯಾಚಾರ, ಮಹಿಳೆಯರ ಬೆತ್ತಲೆ ಮೆರವಣಿಗೆ, ಹತ್ಯಾಕಾಂಡ ವಿಚಾರದಲ್ಲಿ ಕೇಂದ್ರ ಮತ್ತು ಮಣಿಪುರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಮಂಗಳೂರಿನಲ್ಲಿ ಕೆಥೋಲಿಕ್ ಸಭಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಟೌನ್ ಹಾಲ್ ಮುಂಭಾಗದಲ್ಲಿ ಸೇರಿದ ಎರಡು ಸಾವಿರಾರು ಜನರು, ಬಿಜೆಪಿ ಸರಕಾರದ ಇಬ್ಬಗೆ ನೀತಿಯ ಬಗ್ಗೆ ಖಂಡನೆ, ಧಿಕ್ಕಾರ ಕೂಗಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಯ್ ಕ್ಯಾಸ್ಟಲಿನೋ, ಮಣಿಪುರದಲ್ಲಿ ಕುಕ್ಕಿ ಮತ್ತು ಮೈಥಿ ಸಮುದಾಯಗಳ ನಡುವೆ ಬಿಕ್ಕಟ್ಟು, ಕಲಹ 40 ವರ್ಷಗಳಿಂದಲೂ ನಡೀತಿದೆ. ಆದರೆ, ಅದನ್ನೀಗ ರಾಜಕೀಯಕ್ಕೆ ಬಳಸುತ್ತಿದ್ದಾರೆ. ಮೊನ್ನೆ ಮಹಿಳೆಯರ ಬೆತ್ತಲೆ ಮೆರವಣಿಗೆ ಹೊರಬಂದಾಗ ಇಡೀ ದೇಶ ಕಂಬನಿ ಹಾಕಿತ್ತು. ಆದರೆ ಒಬ್ಬರು ಮಾತ್ರ ಕನಿಕರ ತೋರಲಿಲ್ಲ. ನಿರ್ಲಕ್ಷ್ಯ ನೋಡಿದರೆ, ಕ್ರೈಸ್ತರನ್ನು ಹೊರಗಟ್ಟುವ ಷಡ್ಯಂತ್ರ ಇರುವಂತೆ ಕಾಣುತ್ತಿದೆ. ಇಂಟರ್ನೆಟ್ ಬ್ಯಾನ್ ಮಾಡಿ, ಅಲ್ಲಿನ ಹೆಣ್ಮಕ್ಕಳ ಚಿತ್ರಹಿಂಸೆ, ಹತ್ಯೆ ಘಟನೆಗಳು ಹೊರಬರದಂತೆ ಮಾಡಿದ್ದಾರೆ. ಪ್ರಧಾನಿಯ 56 ಇಂಚಿನ ಎದೆಯ ಬಗ್ಗೆ ಟೆಲಿಗ್ರಾಫ್ ಪತ್ರಿಕೆ ಮೊಸಳೆಯ ಫೋಟೋ ತೋರಿಸಿ ಅಣಕಿಸಿದೆ. ಡಬಲ್ ಇಂಜಿನ್ ಸರ್ಕಾರದಿಂದ ಲಾಭ ಎನ್ನುವವರು ಮಣಿಪುರದಲ್ಲಿ ಯಾಕೆ ಮೂರು ತಿಂಗಳಿನಿಂದ ಗಲಭೆ ಹತ್ತಿಕ್ಕಲು ಸಾಧ್ಯವಾಗಿಲ್ಲ. 70 ದಿನಗಳ ಇಂಟರ್ನೆಟ್ ಸ್ಥಗಿತ ಕೊನೆಗೊಂಡಾಗಲೇ ಒಂದು ವಿಡಿಯೋ ಹೊರಬಂದಿತ್ತು. ಆ ವಿಡಿಯೋ ಉದ್ದೇಶಪೂರ್ವಕ ಹೊರಬಿಟ್ಟಿದ್ದು, ಇಡೀ ದೇಶದ ಜನರನ್ನು ಭಯ ಪಡಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.

ಇದೇ ವೇಳೆ, ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, 56 ಇಂಚಿನ ಎದೆಗಾರರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ. ಮಣಿಪುರದ ಜನರು ಊಟಕ್ಕಾಗಿ ಪರದಾಡುತ್ತಿದ್ದರೆ ಪ್ರಧಾನಿಯ ಮನಸ್ಸು ಕರಗಲಿಲ್ಲ. ಸಂಸತ್ತಿನಲ್ಲಿ ಹೇಳಿಕೆ ಕೊಡಿ ಎಂದರೂ, ನಿರ್ಲಕ್ಷ್ಯ ತೋರುತ್ತಾರೆ. ಇದರ ನಡುವೆ, ಮುಂದಿನ ಪ್ರಧಾನಿ ನಾನೇ ಎಂದು ಅಬ್ಬರಿಸುತ್ತಾರೆ. 2024ರಲ್ಲಿ ಜನರು ಈ ರೀತಿಯ ಫ್ಯಾಸಿಸ್ಟ್ ಸರಕಾರವನ್ನು ಬದಲಾಯಿಸಬೇಕು ಎಂದು ಹೇಳಿದರು.

ಉಲೇಮಾ ಹಿಂದ್ ಸಂಘಟನೆಯ ಮಹಮ್ಮದ್ ದಾರಿಮಿ ಮಾತನಾಡಿ, ನಾವು ರಾಮಾಯಣ, ಮಹಾಭಾರತ ಓದಿಕೊಂಡು ಬೆಳೆದವರು. ದುಶ್ಶಾಸನ ದ್ರೌಪದಿಯ ಸೀರೆ ಎಳೆದಿದ್ದೇ ಮಹಾಭಾರತಕ್ಕೆ ಕಾರಣವಾಯಿತು. ಅದೇ ಕಾರಣಕ್ಕೆ ಶ್ರೀಕೃಷ್ಣ ಧರ್ಮದ ಪರವಾಗಿ ನಿಂತು ಅಧರ್ಮಿಗಳನ್ನು ವಧಿಸುವಂತೆ ಮಾಡಿದ. ರಾಮಾಯಣ, ಮಹಾಭಾರತ ಬರೀಯ ಹಿಂದುಗಳದ್ದಲ್ಲ. ಅದು ಈ ದೇಶದ ಅಸ್ಮಿತೆ. ನಾವೀಗ ಈ ದೇಶದ ನೈಜ ಹಿಂದುಗಳನ್ನು ಉಳಿಸುವುದಕ್ಕಾಗಿ ಹೋರಾಡಬೇಕಿದೆ. ಸಾವಿರಾರು ವರ್ಷಗಳಿಂದ ಈ ದೇಶದಲ್ಲಿರುವ ಹಿಂದುಗಳನ್ನು ಹಿಂದುತ್ವದ ಹೆಸರಲ್ಲಿ ವಿಭಜಿಸಲು, ಧ್ರುವೀಕರಣ ಮಾಡಲು ಹೊರಟಿದ್ದಾರೆ. ಕ್ರೈಸ್ತ, ಮುಸ್ಲಿಮರನ್ನು ಎತ್ತಿ ಕಟ್ಟಿ ಮತ ಗಳಿಸುತ್ತಿದ್ದಾರೆ. ನಾವೀಗ ಹಿಂದುಗಳ ಪರ ನಿಲ್ಲುವ ಅವಶ್ಯಕತೆಯಿದೆ. ನೈಜ ಹಿಂದು ಯಾವತ್ತೂ ಕೇಡು ಬಗೆಯಲ್ಲ. ಉದಾರಿ ವ್ಯಕ್ತಿತ್ವದವರು ಎಂದು ಹೇಳಿದರು.

ಪ್ರತಿಭಟನಾ ಸಭೆಯಲ್ಲಿ ಮಣಿಪುರದ ಜನರು ನಮ್ಮವರೇ, ಅವರೊಂದಿಗೆ ನಾವಿದ್ದೇವೆ ಎನ್ನುವ ಘೋಷಣೆ ಕೂಗಿದರು. ಅಲ್ಲದೆ, ನೂರಾರು ಪ್ಲೇಕಾರ್ಡ್ ಹಿಡಿದು ಮಣಿಪುರದ ಪರವಾಗಿ ಘೋಷಣೆ ಕೂಗಿದರು. ಮಂಗಳೂರು ಧರ್ಮಪ್ರಾಂತ್ಯದ ಎಲ್ಲ ಚರ್ಚ್ ಗಳಿಂದಲೂ ಧರ್ಮಗುರು ಸಹಿತ ಭಗಿನಿಯರು, ಶಿಕ್ಷಕರು, ವಿದ್ಯಾರ್ಥಿಗಳು, ಮುಸ್ಲಿಂ ಮಹಿಳೆಯರು ಕೂಡ ಸೇರಿದ್ದರು.

Large number of people gather at Town Hall in Mangalore organised by Catholic Sabha to protest against Manipur violence. Activist Vidya Dinkar criticized the government's decision to suspend internet services following the incident in Manipur.