Mangalore Bus Protest, Assult: ಪ್ರಯಾಣಿಕ - ಬಸ್ ಸಿಬಂದಿಗೆ ಹಲ್ಲೆ ; ಅಡ್ಯಾರ್ ಕಣ್ಣೂರಿನಲ್ಲಿ ಖಾಸಗಿ ಬಸ್ ತಡೆದು ಪ್ರತಿಭಟನೆ, ಪೊಲೀಸರ ಜಮಾವಣೆ  

27-09-23 12:57 pm       Mangalore Correspondent   ಕರಾವಳಿ

ಬಸ್ ನಿಲ್ಲಿಸಿಲ್ಲ ಎಂದು ಕಂಡಕ್ಟರ್ ಮೇಲೆ ಯುವಕರ ತಂಡ ಹಲ್ಲೆಗೈದಿದ್ದಾರೆಂದು ಆರೋಪಿಸಿ ಅಡ್ಯಾರ್- ಕಣ್ಣೂರಿನಲ್ಲಿ ಬಸ್ ಚಾಲಕರು, ಮಾಲಕರು ಖಾಸಗಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಮಂಗಳೂರು, ಸೆ.27: ಬಸ್ ನಿಲ್ಲಿಸಿಲ್ಲ ಎಂದು ಕಂಡಕ್ಟರ್ ಮೇಲೆ ಯುವಕರ ತಂಡ ಹಲ್ಲೆಗೈದಿದ್ದಾರೆಂದು ಆರೋಪಿಸಿ ಅಡ್ಯಾರ್- ಕಣ್ಣೂರಿನಲ್ಲಿ ಬಸ್ ಚಾಲಕರು, ಮಾಲಕರು ಖಾಸಗಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ನಿನ್ನೆ ಸಂಜೆ ಹಲ್ಲೆ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಆ ರೂಟಿನಲ್ಲಿ ಬಸ್ ಗಳನ್ನು ತಡೆದು ಸಿಬಂದಿಯೇ ಪ್ರತಿಭಟನೆ ನಡೆಸಿದ್ದಾರೆ.

ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಎರಡೂ ಕಡೆಯವರು ದೂರು ನೀಡಿದ್ದಾರೆ. ಅಡ್ಯಾರ್ ಕಣ್ಣೂರು ನಿವಾಸಿ ಅಬ್ದುಲ್ ಖಾದರ್ ಎಂಬವರು ಸಂಜೆ ವೇಳೆಗೆ ಎಸ್.ಕೆ. ಟ್ರಾವೆಲ್ಸ್ ಎಂಬ ಖಾಸಗಿ ಬಸ್ಸಿನಲ್ಲಿ ಬಂದಿದ್ದರು. ಕಣ್ಣೂರು ಸ್ಟಾಪ್ ನಲ್ಲಿ ಇಳಿಯಲಿದೆ, ಬಸ್ ನಿಲ್ಲಿಸುವಂತೆ ಹೇಳಿದರೂ, ಬಸ್ ಸಿಬಂದಿ ಮುಂದಕ್ಕೆ ಒಯ್ದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತಿಗೆ ಮಾತು ಬೆಳೆದಿದ್ದು ಬಸ್ ನಿರ್ವಾಹಕನೇ ತನ್ನ ಮೇಲೆ ಹಲ್ಲೆಗೈದಿದ್ದಾನೆಂದು ಅಬ್ದುಲ್ ಖಾದರ್ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಬಸ್ ನಿರ್ವಾಹಕ ಯಶವಂತ್ ಮೇಲೆ ಅಬ್ದುಲ್ ಖಾದರ್ ಮತ್ತು ಅವರ ಸಹವರ್ತಿ ಯುವಕರು ಸೇರಿ ಹಲ್ಲೆ ನಡೆಸಿದ್ದಾರೆ ಎನ್ನುವ ದೂರು ಸಿಬಂದಿ ಕಡೆಯದ್ದು.

ಬಸ್ ನಿರ್ವಾಹಕ ಯಶವಂತ್ ಹಲ್ಲೆಗೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಖಂಡಿಸಿ ಖಾಸಗಿ ಬಸ್ಸಿನ ಸಿಬಂದಿ ಸೇರಿ ಇಂದು ಅಡ್ಯಾರ್ ನಲ್ಲಿ ಪ್ರತಿಭಟನೆ ನಡೆಸಿದ್ದು, ಬಸ್ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಡ್ಯಾರ್, ಕಣ್ಣೂರಿನಲ್ಲಿ ಪೊಲೀಸರನ್ನು ನಿಯೋಜಿಸಿದ್ದು ಗಲಾಟೆ ನಡೆಸದಂತೆ ಸಿಬಂದಿಯನ್ನು ಚದುರಿಸಿದ್ದಾರೆ. ಟೈಮಿಂಗ್ ಕಾರಣಕ್ಕೆ ಬಸ್ ನಿಲ್ಲಿಸಲು ಆಗಿರಲಿಲ್ಲ. ಅದಕ್ಕಾಗಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಿಬಂದಿ ಹೇಳುತ್ತಿದ್ದಾರೆ. ಹೀಗಾಗಿ ಖಾಸಗಿ ಬಸ್ ಗಳ ಅವಾಂತರಕ್ಕೆ ಕಾರಣವಾಗಿರುವ ಟೈಮಿಂಗ್ ಪದ್ಧತಿಯನ್ನೇ ಕೈಬಿಡಬೇಕೆಂದು ಸಿಬಂದಿ ಒತ್ತಾಯಿಸಿದ್ದಾರೆ.

Passneger assults bus conductor over trival issue at Kannur in Mangalore, Protest held. A counter case has been registered at Kankandy Town Police Station.