Mangalore Kondana temple: ಕೊಂಡಾಣ ಕ್ಷೇತ್ರದ ಆರು ಸಿಸಿ ಕ್ಯಾಮೆರಾ ಕಳವು ; ಭಂಡಾರ ಮನೆ ಪುಡಿಗೈದ ಆರೋಪಿಯ ಸಹೋದರನಿಂದ ಕೃತ್ಯ, ಕ್ಯಾಮೆರ ಕಳ್ಳ ಮಾನಸಿಕನೆಂದು ಉಳ್ಳಾಲ ಇನ್ಸ್ ಪೆಕ್ಟರ್ ಸಬೂಬು ! 

05-04-24 09:46 pm       Mangalore Correspondent   ಕರಾವಳಿ

ಪುರಾಣ ಪ್ರಸಿದ್ಧ ಕೋಟೆಕಾರು ಗ್ರಾಮದ ಕಾರಣಿಕ ಕೊಂಡಾಣ ಕ್ಷೇತ್ರದ ಭಂಡಾರ ಮನೆ ಧ್ವಂಸ ಪ್ರಕರಣದ ಬೆನ್ನಲ್ಲೇ ಕ್ಷೇತ್ರಕ್ಕೆ ಅಳವಡಿಸಲಾಗಿದ್ದ ಆರು ಸಿಸಿ ಕ್ಯಾಮೆರಾಗಳನ್ನ ಕಳವುಗೈಯಲಾಗಿದೆ.

ಉಳ್ಳಾಲ, ಎ.5: ಪುರಾಣ ಪ್ರಸಿದ್ಧ ಕೋಟೆಕಾರು ಗ್ರಾಮದ ಕಾರಣಿಕ ಕೊಂಡಾಣ ಕ್ಷೇತ್ರದ ಭಂಡಾರ ಮನೆ ಧ್ವಂಸ ಪ್ರಕರಣದ ಬೆನ್ನಲ್ಲೇ ಕ್ಷೇತ್ರಕ್ಕೆ ಅಳವಡಿಸಲಾಗಿದ್ದ ಆರು ಸಿಸಿ ಕ್ಯಾಮೆರಾಗಳನ್ನ ಕಳವುಗೈಯಲಾಗಿದೆ. ವಿಶೇಷವೆಂದರೆ ಭಂಡಾರ ಮನೆ ಧ್ವಂಸಗೈದ ಆರೋಪಿಯ (ಸಹೋದರ) ಚಿಕ್ಕಪ್ಪನ ಮಗನೇ ಸಿಸಿ ಕ್ಯಾಮೆರಾ ಕಳವುಗೈದಿದ್ದು, ಉಳ್ಳಾಲ ಠಾಣಾ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರು ಸಮಗ್ರ ತನಿಖೆ ನಡೆಸದೇ ಏಕಾಏಕಿ ಆರೋಪಿ ಮಾನಸಿಕ ಅಸ್ವಸ್ಥನೆಂದು ಹೇಳಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. 

ಕಳೆದ ಮಾರ್ಚ್ 3 ರಂದು ಮುಂಜಾನೆ ಕೋಟೆಕಾರು ಗ್ರಾಮದ ಪುರಾಣ ಪ್ರಸಿದ್ಧ ಕಾರಣಿಕ ಕ್ಷೇತ್ರ ಕೊಂಡಾಣ ಪಿಲಿಚಾಮುಂಡಿ, ಬಂಟ ,ವೈದ್ಯನಾಥ ಕ್ಷೇತ್ರದಲ್ಲಿ ನಿರ್ಮಾಣ ಹಂತದಲ್ಲಿದ್ದ ಭಂಡಾರ ಮನೆಯನ್ನ ಕಿಡಿಗೇಡಿಗಳು ಜೆಸಿಬಿ ಯಂತ್ರದಿಂದ ಕೆಡವಿ ಹಾಕಿದ್ದರು. ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮತ್ತು ಸಾರ್ವಜನಿಕರ ದೂರಿನನ್ವಯ ವಿಕೃತಿ ಮೆರೆದಿದ್ದ ಆರೋಪಿಗಳಾದ ಮುತ್ತಣ್ಣ ಶೆಟ್ಟಿ, ಧೀರಜ್ ಮತ್ತು ಶಿವರಾಜ್ ಎಂಬವರನ್ನ ಪೊಲೀಸರು ಕ್ಷಿಪ್ರವಾಗಿ ಬಂಧಿಸಿದ್ದರು. ಆದರೆ ಅರೋಪಿಗಳು ಅದೇ ದಿನ ರಾತ್ರಿಯೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಆರೋಪಿಗಳ ವಿರುದ್ಧ ಸಡಿಲ ಕೇಸ್ ದಾಖಲಿಸಿದ್ದ ಉಳ್ಳಾಲ ಠಾಣಾ ಪಿಐ ಬಾಲಕೃಷ್ಣ ಅವರ ಕಾರ್ಯವೈಖರಿಗೆ ಹಿಂದೂ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಕೋಟೆಕಾರು ಪಟ್ಟಣ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.

ಭಂಡಾರ ಮನೆ ಧ್ವಂಸಗೈದ ಪ್ರಕರಣದ ಪ್ರಮುಖ ಆರೋಪಿ ಶಿವರಾಜ್ ಎಂಬಾತನ (ಸಹೋದರ) ಚಿಕ್ಕಪ್ಪನ ಮಗ ಇದೀಗ ಕೊಂಡಾಣ ಕ್ಷೇತ್ರದ ಒಳಗಡೆ ಮತ್ತು ಹೊರಗಡೆ ಅಳವಡಿಸಲಾಗಿದ್ದ ಆರು ಸಿಸಿ ಕ್ಯಾಮೆರಾಗಳನ್ನು ಕಳಚಿ ಕಳವುಗೈದಿರುವ ಪ್ರಕರಣ ಎ.4ರಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಅವರು‌ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಕ್ಯಾಮೆರಾ ಕಳವುಗೈದ ಆರೋಪಿಯ ಚಹರೆ ಕೊಂಡಾಣ ಕ್ಷೇತ್ರದ ಕಚೇರಿಯಲ್ಲಿದ್ದ ಸಿಸಿ ಕ್ಯಾಮೆರಾದ ಡಿವಿಆರ್ ನಲ್ಲಿ ಸೆರೆಯಾಗಿದೆ. ಆರೋಪಿಯನ್ನ ಕೊಂಡಾಣ ನಿವಾಸಿ ಸುಭಾಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಆತ ಮಾನಸಿಕ ಅಸ್ವಸ್ಥನೆಂದು ಕೆಲವರು ಹೇಳುತ್ತಿದ್ದು, ಕದ್ದ ಕ್ಯಾಮೆರಾಗಳನ್ನ ಆತನ ಮನೆಯಲ್ಲಿ ಇಟ್ಟಿರೋದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರಲ್ಲಿ ತನಿಖೆ ಮಾಡುವಂತೆ ಕೋರಲಾಗಿದೆ ಎಂದು ಮುಖ್ಯಾಧಿಕಾರಿ ಆನಂದ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಬಗ್ಗೆ ಉಳ್ಳಾಲ ಠಾಣಾ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರಲ್ಲಿ ಕೇಳಿದಾಗ ಕ್ಯಾಮೆರಾ ಕಳವುಗೈದ ಆರೋಪಿ ಮಾನಸಿಕ ಅಸ್ವಸ್ಥ, ಅವನ ವಿರುದ್ದ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದ್ದಾರೆ. ಇ‌ನ್ಸ್ ಪೆಕ್ಟರ್ ಅವರಲ್ಲಿ ಆರೋಪಿಯ ಮಾನಸಿಕತೆಯ ಬಗೆಗಿನ ದಾಖಲೆಗಳನ್ನ ಕೇಳಿದಾಗ ಕೊಡುತ್ತೇನೆಂದು ಹೇಳಿದ್ದಾರೆ.

ಸಿಸಿ ಕ್ಯಾಮೆರಾ ಕಳವುಗೈದ ಆರೋಪಿ ಮಾನಸಿಕನಾಗಿದ್ದರೆ ಕ್ಯಾಮೆರಾಗಳನ್ನ ಪುಡಿಗೈಯುತ್ತಿದ್ದ. ಆರೋಪಿ ವೃತ್ತಿಪರ ಇಲೆಕ್ಟ್ರೀಷಿಯನ್ ಆಗಿದ್ದು ಆರೂ ಕ್ಯಾಮೆರಾಗಳನ್ನ ಯಥಾವತ್ತಾಗಿ ಕಳಚಿ ತನ್ನ ಮನೆಯಲ್ಲಿ ಇಟ್ಟಿರೋದಾಗಿ ಸ್ಥಳೀಯರು ತಿಳಿಸಿದ್ದಾರೆ. ಇದು ಕ್ಷೇತ್ರದ ವಿರೋಧಿಗಳು ನಡೆಸಿರುವ ಷಡ್ಯಂತರ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಭಂಡಾರ ಮನೆ ಪುಡಿಗೈದ ಆರೋಪಿಯ ಸಹೋದರನೇ ಸಿಸಿ ಕ್ಯಾಮೆರಾ ಕಳವುಗೈದಿದ್ದು, ಕ್ಷೇತ್ರದಲ್ಲಿ ಮತ್ತೊಂದು ಕುಕೃತ್ಯ ನಡೆಯುವ ಬಗ್ಗೆ ಮುನ್ಸೂಚನೆ ದೊರೆತಂತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಕೊಂಡಾಣ ಕ್ಷೇತ್ರದಲ್ಲಿ ನೂತನ ಭಂಡಾರ ಮನೆ ನಿರ್ಮಾಣದ ಬಗ್ಗೆ ಸಾರ್ವಜನಿಕರಲ್ಲಿ ವಿಜ್ಞಾಪನೆಗಾಗಿ ಕೋಟೆಕಾರಿನ ಬೀರಿಯಲ್ಲಿ ಹಾಕಿದ್ದ ಫ್ಲೆಕ್ಸನ್ನು ಸಿಸಿ ಕ್ಯಾಮೆರಾ ಕದ್ದೊಯ್ದ ವ್ಯಕ್ತಿಯೇ ಕಿತ್ತೆಸೆದಿದ್ದಾನೆ. ಈ ಬಗ್ಗೆ ಸಿಸಿ ಟಿವಿ ದಾಖಲೆನೂ ದೊರೆತಿತ್ತು. ಭಂಡಾರ ಮನೆ ಧ್ವಂಸದ ಬಳಿಕ ಕೊಂಡಾಣ ಕ್ಷೇತ್ರಕ್ಕೆ ಅಳವಡಿಸಿದ ಮೇಲ್ಛಾವಣಿಯನ್ನೂ ಕೆಡವಲು ಕಿಡಿಗೇಡಿಗಳು ಷಡ್ಯಂತ್ರ ನಡೆಸಿದ್ದು ಅದಕ್ಕಾಗಿಯೇ ಸಿಸಿ ಕ್ಯಾಮೆರಗಳನ್ನ ಕಳವು ನಡೆಸಲಾಗಿದೆ ಎಂದು ಕೊಂಡಾಣ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ತಿಳಿಸಿದ್ದಾರೆ.

Mangalore Kondana temple six Cctv camera stolen, inspector says thief is mentally unstable.