Ullal News, Mangalore, BJP, Police: ಉಳ್ಳಾಲ ಶಾರದೋತ್ಸವ ಗಲಾಟೆಗೆ ಇಬ್ಬರು ಪಿಎಸ್ಐಗಳೇ ಕಾರಣ, ಕಾಂಗ್ರೆಸ್ ಸರ್ಕಾರ ಪೊಲೀಸರನ್ನ ಛೂಬಿಟ್ಟು ಹಿಂದೂಗಳನ್ನ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ; ಬಿಜೆಪಿ ನಾಯಕರ ಆರೋಪ 

07-10-25 05:17 pm       Mangalore Correspondent   ಕರಾವಳಿ

ಉಳ್ಳಾಲ ಶಾರದೋತ್ಸವ ಗಲಾಟೆಗೆ ಪಿಎಸ್ಐಗಳಾದ ಕೃಷ್ಣ ಮತ್ತು ಸಂತೋಷ್ ಅವರೇ ನೇರ ಕಾರಣ. ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದಲ್ಲೂ ಇವರ ದುರ್ವರ್ತನೆಯಿಂದಲೇ ಗಲಾಟೆ ನಡೆದಿತ್ತು.

ಉಳ್ಳಾಲ, ಅ.7 : ಉಳ್ಳಾಲ ಶಾರದೋತ್ಸವ ಗಲಾಟೆಗೆ ಪಿಎಸ್ಐಗಳಾದ ಕೃಷ್ಣ ಮತ್ತು ಸಂತೋಷ್ ಅವರೇ ನೇರ ಕಾರಣ. ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದಲ್ಲೂ ಇವರ ದುರ್ವರ್ತನೆಯಿಂದಲೇ ಗಲಾಟೆ ನಡೆದಿತ್ತು. ಈ ಇಬ್ಬರು ಅಧಿಕಾರಿಗಳ ವಿರುದ್ಧ ಪೊಲೀಸ್ ಅಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮುಖಂಡರು, ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷರಾದ ಯಶವಂತ್ ಅಮೀನ್ ಆಗ್ರಹಿಸಿದ್ದಾರೆ.

ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ಬಲ್ಲಿ ಬಿಜೆಪಿ ಮಂಗಳೂರು ಮಂಡಲದ ವತಿಯಿಂದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯ ಗೈಡ್ ಲೈನ್ ಪ್ರಕಾರವೇ ನಾವು ಶಾರದೋತ್ಸವ ಮೆರವಣಿಗೆಯನ್ನ ನಡೆಸಿದ್ದೇವೆ. ಮೆರವಣಿಗೆಯಲ್ಲಿ ಟ್ಯಾಬ್ಲೋ ಮೈಕ್ ನ ಧ್ವನಿ ಏರಿಸಿದ್ದನ್ನ ಪ್ರಶ್ನಿಸಿದ ಪೊಲೀಸರ ಮೇಲೆ ಕೈ ಮಾಡಿದರೆಂದು ಆರೋಪಿಸಲಾಗಿದೆ. ಈ ವೇಳೆ ದುರ್ವರ್ತನೆ ತೋರಿದ ಪೊಲೀಸರು ಟ್ಯಾಬ್ಲೋ ಒಂದರ ಹುಲಿ ವೇಷದ ತಾಸೆ ಬಡಿಯುವ ಕೋಲುಗಳನ್ನ ಎಳೆದಾಡಿ ಮುರಿದು ಬಿಸಾಡಿದ್ದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ. ಇದೇ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ರಕ್ಷಿತ್ ಎಂಬ ಯುವಕನ ತಲೆಯಲ್ಲಿ ಸ್ಟಿಚ್ ಗಳಿದ್ದರೂ ಆತನ ಕೂದಲನ್ನ ಪೊಲೀಸರು ಎಳೆದಿದ್ದಾರೆ. ತಲೆಯ ಸ್ಟಿಚ್ ಒಡೆದು ರಕ್ತ ಸೋರಿದರೂ ಸಹ ನಾಲ್ಕೈದು ಪೊಲೀಸರು ರಾಕ್ಷಸರಂತೆ ವರ್ತಿಸಿ ಆತನನ್ನ ಎತ್ತಾಕಿ ಠಾಣೆಯಲ್ಲಿ ಕುಳ್ಳಿರಿಸಿದ್ದಾರೆ. 

ರಕ್ಷಿತ್ ಜೊತೆ ಮತ್ತಿಬ್ಬರನ್ನ ಪೊಲೀಸರು ಬಂಧಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷರು, ಮುಖಂಡರ ಮಧ್ಯ ಪ್ರವೇಶದಿಂದ ಶುಕ್ರವಾರ ಮುಂಜಾನೆ ಇಬ್ಬರು ಯುವಕರನ್ನ ಪೊಲೀಸರು ಬಿಟ್ಟು ಕಳುಹಿಸಿದ್ದರು. ಓರ್ವ ಪೊಲೀಸ್ ಅಧಿಕಾರಿ ಪ್ರತಿಭಟನೆ ನಡೆಸುತ್ತಿದ್ದ ಯುವಕರತ್ತ ಎದೆಯೊಡ್ಡಿ ಮುನ್ನುಗ್ಗಿ ನನ್ನ ಮೇಲೆ ಕೈ ಮಾಡ್ರೋ ಎಂದು ಪ್ರಚೋದಿಸಿದ್ದಾನೆ. ರಾಜ್ಯದ ಎಲ್ಲಾ ಕಡೆಗಳಲ್ಲು ಪೊಲೀಸರನ್ನ ಛೂಬಿಟ್ಟು ಹಿಂದೂ ಧಾರ್ಮಿಕತೆಯನ್ನ ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಸರಕಾರ ಮಾಡುತ್ತಿದೆಯೆಂದು ಯಶವಂತ್ ಆರೋಪಿಸಿದರು.

ಬಿಜೆಪಿ ಮಂಡಲ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಮಾತನಾಡಿ ಉಳ್ಳಾಲ ಶಾರದೋತ್ಸವ ಗಲಾಟೆ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ಮನಸ್ಥಿತಿಯ ಮುಂದುವರಿದ ಭಾಗವಾಗಿದೆ. ಪೊಲೀಸರ ಷರತ್ತುಗಳನ್ನ ಪಾಲಿಸಿಯೇ ಮೊಸರು ಕುಡಿಕೆ, ಶಾರದೋತ್ಸವಗಳನ್ನ ಆಚರಿಸಲಾಗಿದೆ. ಉಳ್ಳಾಲದ ದಸರಾ ಮೆರವಣಿಗೆಯಲ್ಲಿ ಪೊಲೀಸರು ಅತಿರೇಕ ಪ್ರದರ್ಶಿಸಿದ ಪರಿಣಾಮ ಗೊಂದಲ ಉಂಟಾಗಿದೆ. ಶಾರದಾ ವಿಗ್ರಹವನ್ನ ರಸ್ತೆಯಲ್ಲಿರಿಸಿ ಹಿಂದೂಗಳ ಭಾವನೆಗೆ ಪೊಲೀಸರು ಧಕ್ಕೆ ತಂದಿದ್ದಾರೆ.

ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ರಕ್ಷಿತ್ ಸೇರಿ ಮೂವರು ಯುವಕರನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ರಕ್ಷಿತ್ ಮೇಲೆ ಮೋಟಾರು ವಾಹನ ಕಾಯ್ದೆ ಸಂಬಂಧಿಸಿ ಪ್ರಕರಣ ಇದ್ದು, ಅದನ್ನೇ ಮುಂದಿಟ್ಟು ಆತನನ್ನ ದೊಡ್ಡ ಕ್ರಿಮಿನಲ್ ತರ ಬಿಂಬಿಸಲಾಗಿದೆ. ಸುಪ್ರೀಮ್ ಕೋರ್ಟ್ ನಿರ್ದೇಶನ ಪ್ರಕಾರ ಆರೋಪಿಗೆ ನೋಟೀಸು ಕೊಟ್ಟು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕೇಸು ದಾಖಲಿಸಬೇಕು. ಆದರೆ ರಕ್ಷಿತ್ ನನ್ನು ಮುಂಜಾನೆ ಎರಡು ಗಂಟೆಗೆ ಏಕಾಏಕಿ ಬಂಧಿಸಿ, ಏಳು ಗಂಟೆಗೆ ತರಾತುರಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ಮತ್ತಿಬ್ಬರು ಯುವಕರನ್ನ ಮಧ್ಯರಾತ್ರಿಯೇ ಬಿಟ್ಟು ಕಳುಹಿಸಿದ್ದು, ಘಟನೆ ಖಂಡಿಸಿ ಠಾಣೆ ಮುಂದೆ ಜಮಾಯಿಸಿದ್ದ ಮೂವತ್ತು ಮಂದಿ ಮತ್ತು ಇತರರ ಮೇಲೆ ಕೇಸು ದಾಖಲಿಸಲಾಗಿದೆ. ವಾರದೊಳಗೆ ಈ ಎಲ್ಲಾ ಕೇಸುಗಳನ್ನ ಹಿಂಪಡೆಯಬೇಕು. ಇಲ್ಲವಾದಲ್ಲಿ ಬಿಜೆಪಿ ಇದರ ವಿರುದ್ಧ ಗಂಭೀರ ಹೋರಾಟ ನಡೆಸುತ್ತದೆ. ಉಳ್ಳಾಲ ಶಾರದೋತ್ಸವ ಘಟನೆ ಕುರಿತಂತೆ ಆಯಿಷಾ ಮೊಹಮ್ಮದ್ ಎಂಬ ಹೆಸರಲ್ಲಿ ಹಿಂದೂಗಳನ್ನ ಅಣಕಿಸಿರುವ ಉದ್ರೇಕಕಾರಿ ಪೋಸ್ಟ್ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ ಪೊಲೀಸರು ಇದರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹಿಂದೂಗಳು ಮಾತ್ರ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ ಕೂಡಲೇ ಪೊಲೀಸರು ಸುಮೊಟೊ ಕೇಸು ಹಾಕುತ್ತಾರೆಂದು ಮೋಹನ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲ್, ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಉಳ್ಳಾಲ ಮೊಗವೀರ ಸಮಾಜದ ಮುಖಂಡರಾದ ಬಾಬು ಬಂಗೇರ, ಬಿಜೆಪಿ ಯುವಮೋರ್ಚದ ಜಿಲ್ಲಾ ಉಪಾಧ್ಯಕ್ಷರಾದ ನಿಶಾಂತ್ ಪೂಜಾರಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Tensions continue in Ullal following the Sharadotsava procession clash, with BJP leaders accusing two police sub-inspectors — Krishna and Santosh — of directly causing the incident. Speaking at a press meet in Ullal, Yashwanth Amin, president of the Ullal Mogaveera Samaj and BJP leader, alleged that the officers acted provocatively and disrespected Hindu sentiments during the festival.