ಉನ್ನತ ಶಿಕ್ಷಣಕ್ಕಾಗಿ ಜರ್ಮನಿ ತೆರಳಿದ್ದ ಮಂಗಳೂರಿನ ಯುವಕ ಚಾರಣಕ್ಕೆ ತೆರಳಿ ಸಾವು ; ನಾಲ್ವರು ಸ್ನೇಹಿತರ ವಿಚಾರಣೆ

05-07-26 09:34 pm       HK News Staffer   ಕರಾವಳಿ

ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ ತೆರಳಿದ್ದ ಮಂಗಳೂರು ಮೂಲದ 21 ವರ್ಷದ ವಿದ್ಯಾರ್ಥಿಯೊಬ್ಬ ಚಾರಣಕ್ಕೆ ತೆರಳಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಘಟನೆ ಜರ್ಮನಿಯ ಲೀಪ್‌ಜಿಗ್ ಪ್ರಾಂತ್ಯದಲ್ಲಿ ನಡೆದಿದೆ.

ಮಂಗಳೂರು, ಜುಲೈ 5: ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ ತೆರಳಿದ್ದ ಮಂಗಳೂರು ಮೂಲದ 21 ವರ್ಷದ ವಿದ್ಯಾರ್ಥಿಯೊಬ್ಬ ಚಾರಣಕ್ಕೆ ತೆರಳಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಘಟನೆ ಜರ್ಮನಿಯ ಲೀಪ್‌ಜಿಗ್ ಪ್ರಾಂತ್ಯದಲ್ಲಿ ನಡೆದಿದೆ.

ಮಂಗಳೂರಿನ ಮರಕಡ- ಕುಂಜತ್‌ಬೈಲ್ ನಿವಾಸಿ ಮೊಹಮ್ಮದ್ ಅನಿಜ್ ಅಬೂಬಕ್ಕರ್ (21) ಮೃತಪಟ್ಟ ದುರ್ದೈವಿ. ಈತ ಜರ್ಮನಿಯ ಹಾಲೆಯ ರಹ್ ಶಿಕ್ಷಣ ಸಂಸ್ಥೆಯಲ್ಲಿ ಬಿಬಿಎ ಮೂರನೇ ಸೆಮಿಸ್ಟರ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಸದ್ಯ ಘಟನೆಗೆ ಸಂಬಂಧಿಸಿದಂತೆ ಜರ್ಮನಿಯ ಸ್ಥಳೀಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮೃತನ ಜೊತೆಯಲ್ಲಿದ್ದ ಇಬ್ಬರು ಭಾರತೀಯರು ಸೇರಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸ್ ಹಾಗೂ ರಾಯಭಾರ ಕಚೇರಿಯ ಮೂಲಗಳ ಪ್ರಕಾರ, ಜುಲೈ 2ರ ಬೆಳಗ್ಗೆ ಅನಿಜ್ ತನ್ನ ಸಹಪಾಠಿಗಳೊಂದಿಗೆ ಲೀಪ್‌ಜಿಗ್‌ ಹೊರವಲಯದಲ್ಲಿ ಟ್ರಕ್ಕಿಂಗ್ ಹೊರಟಿದ್ದ. ಚಾರಣ ಮುಗಿದ ಬಳಿಕ ಸ್ನೇಹಿತರೊಂದಿಗೆ ಜೊತೆಗೂಡಿದ ಲೀಪ್‌ಜಿಗ್‌ನ 'ರೆಡ್ ಬುಲ್ ಅರೆನಾ' ಕ್ರೀಡಾಂಗಣದ ಬಳಿ ನೀರಿನಲ್ಲಿ ಆಡಲು ತೆರಳಿದ್ದರು. ಅಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾಗ ಹಠಾತ್ ಆಗಿ ಅನಿಜ್ ನಾಪತ್ತೆಯಾಗಿದ್ದಾನೆ.

ಯುವಕ ಕಾಣೆಯಾಗಿರುವುದು ಬೆಳಕಿಗೆ ಬರುತ್ತಿದ್ದಂತೆ ಸ್ನೇಹಿತರು ಲ್ಯಾಂಡೌರ್‌ ಸೇತುವೆ ಪ್ರದೇಶದ ತುರ್ತು ಸೇವೆಗಳ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಜರ್ಮನಿಯ ವಿಪತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ನಡೆಸಿ, ನೀರಿನಲ್ಲಿ ಮುಳುಗಿದ್ದ ಅನಿಜ್‌ ಶವವನ್ನು ಹೊರತೆಗೆದಿವೆ. ಮೃತ ಅನಿಜ್ ತಂದೆ ಮರಕಡ ಅಬೂಬಕ್ಕರ್ ಸಿದ್ದಿಕ್ ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ. ಮಗನ ಸಾವಿನ ಸುದ್ದಿಯಿಂದ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ.

A young man from Mangaluru, who had moved to Germany for higher education, died after reportedly falling during a trekking expedition. Authorities in Germany have launched an investigation into the incident and are questioning the four friends who accompanied him on the trek.