ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ ವಿರುದ್ಧ, ಆಕೆ ಮತಾಂತರ ಆದರೆ ಮಾತ್ರ ಇಸ್ಲಾಂನಲ್ಲಿ ಅನುಮತಿ ; ಮೂರನೇ ಮದುವೆಯಾದ ಅಮಿರ್ ಖಾನ್ ವಿರುದ್ಧ ಫತ್ವಾ ಹೊರಡಿಸಿದ ದಾರುಲ್ ಇಫ್ತಾ ಮುಖ್ಯಸ್ಥ

15-07-26 10:59 am       HK News Staffer   ಕರಾವಳಿ

ಬಾಲಿವುಡ್ ನಟ ಆಮಿರ್ ಖಾನ್ ಇತ್ತೀಚೆಗೆ ತನ್ನ 61ನೇ ವಯಸ್ಸಿನಲ್ಲಿ ಹಿಂದೂ ಮಹಿಳೆ ಗೌರಿ ಸ್ಪ್ರಾಟ್ ಜೊತೆಗೆ ಮೂರನೇ ಮದುವೆಯಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿರುವಾಗಲೇ ಮುಸ್ಲಿಂ ದಾರುಲ್ ಇಫ್ತಾದ ಮುಖ್ಯಸ್ಥ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಅವರು, ಆಮಿರ್ ಖಾನ್ ವಿರುದ್ಧ ಫತ್ವಾ ಹೊರಡಿಸಿದ್ದಾರೆ.

ಮುಂಬೈ, ಜುಲೈ 15 : ಬಾಲಿವುಡ್ ನಟ ಆಮಿರ್ ಖಾನ್ ಇತ್ತೀಚೆಗೆ ತನ್ನ 61ನೇ ವಯಸ್ಸಿನಲ್ಲಿ ಹಿಂದೂ ಮಹಿಳೆ ಗೌರಿ ಸ್ಪ್ರಾಟ್ ಜೊತೆಗೆ ಮೂರನೇ ಮದುವೆಯಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿರುವಾಗಲೇ ಮುಸ್ಲಿಂ ದಾರುಲ್ ಇಫ್ತಾದ ಮುಖ್ಯಸ್ಥ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಅವರು, ಆಮೀರ್‌ ಖಾನ್ ವಿರುದ್ಧ ಫತ್ವಾ ಹೊರಡಿಸಿದ್ದಾರೆ.

ಇಸ್ಲಾಮಿಕ್ ಬೋಧನೆಗಳ ಪ್ರಕಾರ, ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗಲು ಅನುಮತಿ ಇಲ್ಲ. ಷರಿಯಾ ಕಾನೂನಿ‌ನ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ. ಆಮಿರ್ ಖಾನ್ ಮತ್ತು ಉದ್ಯಮಿ ಗೌರಿ ಸ್ಪ್ರಾಟ್ ಅವರು ವಿಶೇಷ ವಿವಾಹ ಕಾಯ್ದೆಯಡಿ ಮುಂಬೈನ ಮನೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಜುಲೈ 5 ರಂದು ದಂಪತಿಯಾಗಿದ್ದರು. ಈ ಹಿನ್ನೆಲೆಯಲ್ಲಿ, ಮುಸ್ಲಿಮೇತರರನ್ನು ಮದುವೆಯಾಗುವುದು ಶರಿಯಾಕ್ಕೆ ವಿರುದ್ಧವಾಗಿದೆ. ಹಾಗೆ ಮಾಡುವವರು ಅಲ್ಲಾಹನ ಮುಂದೆ ಪಶ್ಚಾತ್ತಾಪ ಪಡಬೇಕು ಎಂದು ಹುಸೇನ್ ಹೇಳಿದ್ದಾರೆ.

ಕುರಾನ್‌ನ ಬೋಧನೆಗಳ ಹಿನ್ನೆಲೆಯಲ್ಲಿ ಫತ್ವಾ-ಎ-ಆಮ್ (fatwa-e-aam) ಹೊರಡಿಸಿರುವುದಾಗಿ ಮುಫ್ತಿ ಹೇಳಿದ್ದಾರೆ. ಸಾರ್ವಜನಿಕ ಫತ್ವಾವನ್ನು ಹೊರಡಿಸಿದ್ದೇನೆ. ಕುರಾನ್‌ನಲ್ಲಿ ಹೇಳಿರುವಂತೆ ಅಲ್ಲಾಹನ ಆದೇಶವನ್ನು ವಿವರಿಸಿದ್ದೇನೆ. ನಂಬಿಕೆಯುಳ್ಳ ಮುಸ್ಲಿಂ ಪುರುಷರಿಗೆ, ಮುಸ್ಲಿಂ ಮಹಿಳೆಯರು ಮತ್ತು ನಂಬಿಕೆಯುಳ್ಳ ಮಹಿಳೆಯರೊಂದಿಗೆ ಮಾತ್ರ ವಿವಾಹವಾಗಲು ಅನುಮತಿಸಲ್ಪಡುತ್ತದೆ. ಒಂದು ಮುಸ್ಲಿಂ ಪುರುಷ ಬೇರೆ ಧರ್ಮದವರನ್ನು ವಿವಾಹವಾದರೆ, ಆಕೆ ಆ ಧರ್ಮವನ್ನು ಸ್ವೀಕರಿಸುವವರೆಗೂ ಅದಕ್ಕೆ ಅನುಮತಿ ನೀಡುವುದಿಲ್ಲ, ಮುಸ್ಲಿಮೇತರ ವ್ಯಕ್ತಿಯನ್ನು ಮದುವೆಯಾಗುವುದು "ಪಾಪ" ಎಂದು ಅವರು ಹೇಳಿದ್ದಾರೆ.

"ಇದು ಕಾನೂನುಬಾಹಿರ (ಹರಾಮ್) ಕೃತ್ಯ, ಮತ್ತು ಹಾಗೆ ಮಾಡುವ ವ್ಯಕ್ತಿಯು ಪಾಪ ಮಾಡಿದಂತೆ. ಅಂತಹ ವ್ಯಕ್ತಿಯು ಅಲ್ಲಾಹನ ಮುಂದೆ ಪಶ್ಚಾತ್ತಾಪ ಪಡಬೇಕು. ಈ ಪಾಪದಿಂದ ದೂರ ಸರಿಯಬೇಕು. ಈ ಬಹಿರಂಗ ಫತ್ವಾವನ್ನು ಹೊರಡಿಸಿ ಈ ಅಭಿಪ್ರಾಯವನ್ನು ಮಂಡಿಸಿದ್ದೇನೆ. ಇಂದು ಪ್ರಪಂಚದಾದ್ಯಂತ, ಇಸ್ಲಾಮಿಕ್ ಶರಿಯಾದ ಚಿತ್ರಣವು ಮುಸ್ಲಿಮರು ಮತ್ತು ಅವರ ಕ್ರಿಯೆಗಳೊಂದಿಗೆ ಸಂಬಂಧ ಹೊಂದಿರುವುದರಿಂದ ಇದನ್ನು ಸ್ಪಷ್ಟಪಡಿಸುವುದು ಅಗತ್ಯವಾಗಿತ್ತು ಎಂದಿದ್ದಾರೆ.

ಮುಸ್ಲಿಮೇತರ ಮುಖಂಡರು ಕೂಡಾ ಮುಸ್ಲಿಮರು ಏನು ಮಾಡ್ತಾರೆ ಎಂಬುದನ್ನು ನೋಡ್ತಾರೆ. ಅಲ್ಲಾಹನ ಆದೇಶದಂತೆ ನಡೆಯುತ್ತಾರೆ ಅಂದುಕೊಳ್ಳುತ್ತಾರೆ. ಹಾಗಾಗೀ ಯಾರೇ ಆದ್ರೂ ತಪ್ಪು ಕೃತ್ಯ ಮಾಡಿದಾಗ, ಅದು ತಪ್ಪು ಸಂದೇಶವಾಗುತ್ತದೆ. ಇಸ್ಲಾಂ ಮತ್ತು ಶರಿಯಾದ ಗುರಿ ಒಂದೇ ಆಗಿದೆ. ಮುಸ್ಲಿಮರು ತಮ್ಮ ಧಾರ್ಮಿಕ ಬೋಧನೆಗಳನ್ನು ಗೌರವಿಸಬೇಕು ಮತ್ತು ತಪ್ಪು ತಿಳುವಳಿಕೆಗಳನ್ನು ಉಂಟುಮಾಡುವ ಮತ್ತು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಕ್ರಿಯೆಗಳನ್ನು ತಪ್ಪಿಸಬೇಕು ಎಂದು ಅವರು ಮನವಿ ಮಾಡಿದರು.