ಅನ್ ಲಾಕ್ - 3ರ ಧಾರ್ಮಿಕ ನಿರ್ಬಂಧ ನೆಪ ; ಗಣೇಶನ ಉತ್ಸವಕ್ಕಿಲ್ಲ ಅವಕಾಶ !! 

16-08-20 07:41 pm       Mangalore Reporter   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತೊಮ್ಮೆ ಸಾರ್ವಜನಿಕ ಗಣೇಶೋತ್ಸವ ಕಟ್ಟುನಿಟ್ಟಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ದೇವಸ್ಥಾನ, ಮನೆಗಳಲ್ಲಿ ಗಣೇಶೋತ್ಸವ ಆಚರಣೆ ಮಾಡಬಹುದು. ಆದರೆ ಯಾವುದೇ ಬೀದಿ, ರಸ್ತೆ , ಮೈದಾನದಲ್ಲಿ ಗಣೇಶನ ಪೂಜೆ ಮಾಡುವಂತಿಲ್ಲ.

ಮಂಗಳೂರು, ಆಗಸ್ಟ್ 16: ಕರಾವಳಿಯಲ್ಲಿ ಗಣೇಶೋತ್ಸವ ಅಂದರೆ ಅದು ಸಾರ್ವಜನಿಕರ ಹಬ್ಬ. ಹಿಂದು - ಮುಸ್ಲಿಂ ಭೇದ ಇಲ್ಲದೆ ವಿಜೃಂಭಿಸುವ ಹಬ್ಬವೂ ಹೌದು. ಎಲ್ಲರಿಗೂ ವ್ಯಾಪಾರ, ಆದಾಯ ತರುವ ಹಬ್ಬವೂ ಹೌದು. ಆದರೆ, ಈ ಬಾರಿ ಮಾತ್ರ ಕೊರೊನಾ ಪೀಡೆ ಎಲ್ಲವನ್ನೂ ತಿಂದು ಹಾಕಿದೆ. ಗಣೇಶನ ಹಬ್ಬಕ್ಕೂ ಜನರು ಸಾರ್ವಜನಿಕವಾಗಿ ಉತ್ಸವ ನಡೆಸಲು ರಾಜ್ಯ ಸರಕಾರ ಆಸ್ಪದ ಕೊಟ್ಟಿಲ್ಲ. 

ಈಗ ಬಹುತೇಕ ವ್ಯಾಪಾರ ವಹಿವಾಟು ತೆರೆದುಕೊಂಡಿದ್ದರೂ, ಶಿಕ್ಷಣ ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳ ಮೇಲಿನ ನಿರ್ಬಂಧ‌ ಮುಂದುವರಿದಿದೆ. ಆಗಸ್ಟ್ 31ರ ವರೆಗೂ ಅನ್ ಲಾಕ್ - 3 ನಿರ್ಬಂಧ ಇರುವುದರಿಂದ ಅಲ್ಲೀ ವರೆಗೂ ಯಾವುದೇ ಹಬ್ಬ ಸಾರ್ವಜನಿಕ ಆಚರಿಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರ ಹೇಳ್ತಾ ಇದೆ. ಆದರೆ, ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗಣೇಶನ ಹಬ್ಬ ಸ್ವಾತಂತ್ರ್ಯ ಸಿಗುವುದಕ್ಕೂ ಮೊದಲೇ ಸಾರ್ವಜನಿಕ ಗಣೇಶೋತ್ಸವ ಆಗಿ ಆಚರಿಸಿಕೊಂಡು ಬಂದ ಹಿನ್ನೆಲೆ ಹೊಂದಿದೆ‌. ಹೀಗಾಗಿ ಭಾವನಾತ್ಮಕ ನೆಲೆಯಲ್ಲಿ ಬೆಸೆದುಕೊಂಡಿರುವ ಗಣೇಶನ ಹಬ್ಬ ಆಚರಿಸದೆ ನಿಲ್ಲಿಸುವುದು ಈ ಭಾಗದ ಮಂದಿಗೆ ಸಾಧ್ಯವೇ ಇಲ್ಲ ಎನ್ನುವಂಥ ಸ್ಥಿತಿ. ಆದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತೊಮ್ಮೆ ಸಾರ್ವಜನಿಕ ಗಣೇಶೋತ್ಸವ ಕಟ್ಟುನಿಟ್ಟಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಸಂಸದರು, ಶಾಸಕರಲ್ಲಿ ಒಂದು ದಿನವಾದ್ರೂ ಗಣೇಶನ ಪೂಜೆಗೆ ಅವಕಾಶ ಕೊಡಿ ಎಂದು ಈ ಭಾಗದ ಗಣೇಶೋತ್ಸವ ಸಮಿತಿಗಳು ಮನವಿ ಮಾಡಿವೆ. ಜಿಲ್ಲಾಡಳಿತಕ್ಕೂ ಅಂಥದ್ದೇ ಮನವಿಯನ್ನು ಮುಂದಿಟ್ಟಿದ್ದವು. ರಿಯಾಯ್ತಿ ಕೊಡಬಹುದು ಎಂಬ ನಿರೀಕ್ಷೆ ಇತ್ತಾದರೂ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಖಡಕ್ ಆದೇಶ ನೀಡಿರುವುದು ನಿರಾಸೆ ಮೂಡಿಸಿದೆ. 

ದೇವಸ್ಥಾನ, ಮನೆಗಳಲ್ಲಿ ಗಣೇಶೋತ್ಸವ ಆಚರಣೆ ಮಾಡಬಹುದು. ಆದರೆ ಯಾವುದೇ ಬೀದಿ, ರಸ್ತೆ , ಮೈದಾನದಲ್ಲಿ ಗಣೇಶನ ಪೂಜೆ ಮಾಡುವಂತಿಲ್ಲ. ಗಣೇಶನ ವಿಸರ್ಜನೆಯ ಸಂದರ್ಭದಲ್ಲಿಯೂ ಮೆರವಣಿಗೆ ನಡೆಸುವಂತಿಲ್ಲ. ಆಯಾ ದೇವಸ್ಥಾನದ ಕೆರೆಗಳಲ್ಲಿ ಮತ್ತು ಮನೆಗಳ ಬಾವಿಯಲ್ಲೇ ಗಣೇಶನ ಮೂರ್ತಿ ವಿಸರ್ಜನೆ ಮಾಡುವಂತೆ ನಿರ್ದೇಶನ ನೀಡಲಾಗಿದೆ. 

ಹೀಗಾಗಿ ಮಂಗಳೂರಿನ ನೆಹರು ಮೈದಾನದಲ್ಲಿ ಒಂದು ದಿನ ಗಣೇಶನ ಪೂಜೆಯನ್ನು ಮಾಡುವುದಕ್ಕೂ ಆಸ್ಪದ ಇಲ್ಲದಂತಾಗಿದೆ. ಅಲ್ಲದೆ, ನೂರು ವರ್ಷಗಳಿಂದಲೂ ಗಣೇಶನ ಪೂಜೆ ನಡೆಸಿಕೊಂಡು ಬಂದವರು ಈಗ ಚಿಂತೆಗೆ ಒಳಗಾಗಿದ್ದಾರೆ. ಹಿಂದು ಪರ ಪೋಸು ನೀಡುವ ಬಿಜೆಪಿ ಆಡಳಿತದಲ್ಲಿದ್ದರೂ ಸರಕಾರ ಗಣೇಶೋತ್ಸವಕ್ಕೆ ಅವಕಾಶ ನೀಡದಿರುವುದು ಕೆಲವು ಹಿಂದು ಸಂಘಟನೆಗಳ ಆಕ್ರೋಶಕ್ಕೂ ಕಾರಣವಾಗಿದೆ.