ಮಂಜೇಶ್ವರ ; ಲೀಗ್, ಸಿಪಿಎಂ ಅಭ್ಯರ್ಥಿ ಫೈನಲ್, ಬಿಜೆಪಿಯಿಂದ ಸುರೇಂದ್ರನ್ - ಶ್ರೀಕಾಂತ್ ಮಧ್ಯೆ ಫೈಟ್ !

12-03-21 08:34 pm       Mangaluru correspondent   ಕರಾವಳಿ

ಕೇರಳದಲ್ಲಿ ಚುನಾವಣಾ ಅಖಾಡ ರಂಗೇರುತ್ತಿದೆ. ಎಪ್ರಿಲ್ 6ರಂದು ಒಂದೇ ಹಂತದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ರಾಜಕೀಯ ಅಖಾಡದಲ್ಲಿ ಅಭ್ಯರ್ಥಿಗಳು ಟಿಕೆಟಿಗಾಗಿ ಕಸರತ್ತು ನಡೆಸುತ್ತಿದ್ದಾರೆ.

ಕಾಸರಗೋಡು, ಮಾ.12: ಕೇರಳದಲ್ಲಿ ಚುನಾವಣಾ ಅಖಾಡ ರಂಗೇರುತ್ತಿದೆ. ಎಪ್ರಿಲ್ 6ರಂದು ಒಂದೇ ಹಂತದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ರಾಜಕೀಯ ಅಖಾಡದಲ್ಲಿ ಅಭ್ಯರ್ಥಿಗಳು ಟಿಕೆಟಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಗಡಿಜಿಲ್ಲೆಯ ಕಾಸರಗೋಡು ಮತ್ತು ಮಂಜೇಶ್ವರ ಕಳೆದ ಚುನಾವಣೆಗಳಲ್ಲಿ ತೀವ್ರ ಹಣಾಹಣಿ ಏರ್ಪಟ್ಟ ಮತ ಕ್ಷೇತ್ರಗಳು. ಆದರೆ, ಕಳೆದ ಎರಡು ಅವಧಿಗಳಲ್ಲಿ ಇವರೆಡು ಕ್ಷೇತ್ರಗಳಲ್ಲೂ ಲೀಗ್ ಶಾಸಕರೇ ಆಯ್ಕೆಯಾಗಿ ಬಂದಿದ್ದರು. ಈ ಬಾರಿಯೂ ಲೀಗ್ ತನ್ನ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ.

ಇದೇ ವೇಳೆ, ಮಂಜೇಶ್ವರ ಕ್ಷೇತ್ರದಲ್ಲಿ ಯುಡಿಎಫ್ ಒಕ್ಕೂಟದ ಲೀಗಿನಿಂದ ಎ.ಕೆ. ಅಶ್ರಫ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸಿಪಿಎಂನಿಂದ ಮೊದಲು ಕೆ.ಆರ್. ಜಯಾನಂದ ಹೆಸರು ಕೇಳಿಬಂದಿತ್ತು. ಆದರೆ, ಪಕ್ಷದ ಒಳಗಿನಿಂದಲೇ ಜಯಾನಂದ ಹೆಸರಿನ ಬಗ್ಗೆ ಅಪಸ್ವರ ಬಂದಿದ್ದರಿಂದ ಈಗ ಕಾಸರಗೋಡು ಹೊರಭಾಗದ ಬಿ.ವಿ.ರಮೇಶ್ ಎಂಬ ಹೆಸರನ್ನು ಫೈನಲ್ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಕಳೆದ ಬಾರಿ ಮಂಜೇಶ್ವರ ಕ್ಷೇತ್ರದಲ್ಲಿ ಗೆಲುವಿನ ಸನಿಹ ಬಂದಿದ್ದ ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.

ಬಿಜೆಪಿಯಿಂದ ಪಕ್ಷದ ರಾಜ್ಯಾಧ್ಯಕ್ಷ ಸುರೇಂದ್ರನ್ ಅಥವಾ ಜಿಲ್ಲಾಧ್ಯಕ್ಷರಾಗಿರುವ ಕೆ.ಶ್ರೀಕಾಂತ್ ಅವರನ್ನು ಕಣಕ್ಕಿಳಿಸಬೇಕು ಎಂಬ ಮಾತು ಕೇಳಿಬರುತ್ತಿದೆ. ಪಕ್ಷದ ಕಾರ್ಯಕರ್ತರು ಕೂಡ ಇವೆರಡು ಹೆಸರಲ್ಲಿ ಒಬ್ಬರನ್ನು ಆಯ್ಕೆ ಮಾಡುವಂತೆ ಹೇಳುತ್ತಿದ್ದಾರೆ. ಆದರೆ, ಪಕ್ಷದ ಹೈಕಮಾಂಡ್ ಈ ಬಗ್ಗೆ ಇನ್ನೂ ಹೆಸರು ಫೈನಲ್ ಮಾಡಿಲ್ಲ. ಇದೇ ವೇಳೆ, ಸ್ಥಳೀಯ ಕೆಲವು ಪುಢಾರಿಗಳು ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ನೆಲೆಯಲ್ಲಿ ತಮ್ಮದೇ ರೀತಿಯಲ್ಲಿ ಲಾಬಿ ನಡೆಸುತ್ತಿದ್ದಾರೆ.

ಕಳೆದ ಬಾರಿ ಬೈಎಲೆಕ್ಷನ್ ಸಂದರ್ಭ ಕೊನೆಕ್ಷಣದಲ್ಲಿ ಕುಂಟಾರು ರವೀಶ ತಂತ್ರಿ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಅದಕ್ಕೂ ಮೊದಲು ಕೇವಲ 89 ಮತಗಳಿಂದ ಸೋಲು ಕಂಡಿದ್ದ ಬಿಜೆಪಿ, ಕುಂಟಾರು ಕಣಕ್ಕಿಳಿದಾಗ ಸೋಲಿನ ಅಂತರ ಹತ್ತು ಸಾವಿರಕ್ಕೆ ಹೋಗಿತ್ತು. ಅದಕ್ಕೆ ಕಾರ್ಯಕರ್ತರ ಕಡೆಯಿಂದ ಬಂದಿರುವ ಕಾರಣಗಳು ಹಲವಿದ್ದವು. ಆದರೆ, ಬಿಜೆಪಿ ನಾಯಕರು ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ್ದೂ ಅದಕ್ಕೆ ಕಾರಣವಾಗಿತ್ತು.

ಪ್ರಯೋಗಕ್ಕೆ ಅವಕಾಶ ಇಲ್ಲ !

ಕಾಸರಗೋಡು ಜಿಲ್ಲೆಯ ಚುನಾವಣಾ ಕಣ ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯ ರೀತಿ ಅಲ್ಲ. ಒಂದ್ಕಡೆ ಅತಿ ಹೆಚ್ಚು ಮುಸ್ಲಿಂ ವೋಟರ್ ಇರುವುದು, ಮತ್ತೊಂದ್ಕಡೆ ತ್ರಿಕೋನ ಸ್ಪರ್ಧೆ ನಡೆಯುವುದರಿಂದ ಬಿಜೆಪಿಗೆ ಇಲ್ಲಿ ಪ್ರಯೋಗ ಮಾಡುವ ಸಾಧ್ಯತೆ ಇಲ್ಲ. ಕಣದಲ್ಲಿ ನೇರಾನೇರ ಸ್ಪರ್ಧೆ ನಡೆಯುವುದರಿಂದ ತಮ್ಮ ಮತಗಳನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಹೆಚ್ಚುವರಿ ಮತಗಳನ್ನು ಸೆಳೆಯಬಲ್ಲ ಅಭ್ಯರ್ಥಿಗಳ ಆಯ್ಕೆಯೇ ಇಲ್ಲಿ ಪ್ರಮುಖ ಸವಾಲು.

ಸುರೇಂದ್ರನ್ ಕಾಸರಗೋಡು ಹೊರಭಾಗದ ಅಪ್ಪಟ ಮಲೆಯಾಳಿ ಆಗಿದ್ದರೂ, ಕಳೆದ ಬಾರಿ ಮಂಜೇಶ್ವರ ಮತ್ತು ಕಾಸರಗೋಡಿನಲ್ಲೇ ಉಳಿದುಕೊಂಡು ಕಾರ್ಯಕರ್ತರ ಒಡನಾಟ ಬೆಳೆಸಿಕೊಂಡಿದ್ದು ಅವರನ್ನು ಗೆಲುವಿನ ಹತ್ತಿರಕ್ಕೆ ಒಯ್ದಿತ್ತು. ಪ್ರಖರ ಭಾಷಣ ಮತ್ತು ಅತ್ಯಲ್ಪ ಅವಧಿಯಲ್ಲಿ ಕನ್ನಡವನ್ನು ಕಲಿತು ಮಾತನಾಡಲಾರಂಭಿಸಿದ್ದು ಪ್ರತಿ ಮನೆಗೂ ಭೇಟಿ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದು ಅವರಿಗೆ ಪ್ಲಸ್ ಆಗಿತ್ತು. ಅದೇ ರೀತಿ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಸೆಳೆಯುವಲ್ಲಿ ಸುರೇಂದ್ರನ್ ಸಫಲವಾಗಿದ್ದರು.

ಕೊನೆಕ್ಷಣದಲ್ಲಿ ವಾಲುವ ಮತಗಳೇ ನಿರ್ಣಾಯಕ

ಯಾವುದೇ ಪಕ್ಷದ ಸಾಂಪ್ರದಾಯಿಕ ಮತಗಳ ಜೊತೆಗೆ ಕೊನೆಕ್ಷಣದಲ್ಲಿ ಆ ಕಡೆ, ಈ ಕಡೆ ವಾಲುವ 25 ಶೇ. ಮತಗಳು ಪ್ರತಿ ಬಾರಿ ಗೆಲುವನ್ನು ನಿರ್ಣಯಿಸುತ್ತವೆ. ಈ ನಿರ್ಣಾಯಕ ಮತಗಳನ್ನು ಸೆಳೆಯುವುದೇ ರಾಜಕೀಯ ಪಕ್ಷಗಳಿಗೆ ಸವಾಲಿನದ್ದು. ಆ ಗೆರೆಯನ್ನು ದಾಟಲು ಹಣದ ಜೊತೆಗೆ ಬೇರೆ ಬೇರೆ ರೀತಿಯ ಕಸರತ್ತುಗಳನ್ನು ರಾಜಕೀಯ ನಾಯಕರು ಮಾಡುತ್ತಾರೆ. ಕಳೆದ ಬಾರಿ 89 ಮತಗಳಿಂದ ಗೆದ್ದ ಅಬ್ದುಲ್ ರಜಾಕ್ ಕಳ್ಳ ಮತದಾನವನ್ನೂ ಮಾಡಿದ್ದ ಆರೋಪಕ್ಕೀಡಾಗಿದ್ದರು. ಕಳ್ಳ ಮತದಾನ ಬಿಟ್ಟು ಇತರೇ ಸಕ್ರಮ ರೀತಿಯ ಪಟ್ಟುಗಳನ್ನು ಉರುಳಿಸಿ, ಮತಗಳನ್ನು ಸೆಳೆಯುವುದಕ್ಕೆ ಅಷ್ಟೇ ಛಾತಿ ಇರಬಲ್ಲ ಅಭ್ಯರ್ಥಿಗಳು ಕಣದಲ್ಲಿರಬೇಕು. ಈ ಬಾರಿಯೂ ಗೆಲುವಿಗಾಗಿ ಹಾತೊರೆಯುತ್ತಿರುವ ಬಿಜೆಪಿಗೆ ರಾಜ್ಯದಲ್ಲಿ ಅಭ್ಯರ್ಥಿಗಳ ಆಯ್ಕೆ ಜೊತೆಗೆ ಪಟ್ಟುಗಳನ್ನು ಹಾಕಬಲ್ಲ ಚಾಣಾಕ್ಷರು ಇದ್ದರಷ್ಟೇ ಗೆಲುವು ಸಾಧ್ಯ.

CPM party announces it's final candidates for elections from Manjeshwar Constitency for Kerala Elections 2021 and State President Surendran may contest from BJP says sources.