ಕಲ್ಲಾಪಿನಲ್ಲಿ ಅತ್ಯಾಧುನಿಕ ಸಂಕೀರ್ಣ ; ವಿಶಾಲ ಪ್ರಾಂಗಣದಲ್ಲಿ ಗ್ಲೋಬಲ್ ಕಮರ್ಷಿಯಲ್ ಮಾರುಕಟ್ಟೆ ರೆಡಿ !

10-04-21 05:25 pm       Mangalore Correspondent   ಕರಾವಳಿ

ವಿಶಾಲ ಮಾರುಕಟ್ಟೆಯಲ್ಲಿ ವಾಹನ ಚಾಲಕರಿಗೆ ವಿಶ್ರಾಂತಿ ಕೊಠಡಿ, ಒಂದು ಡಿಸ್ಪೆನ್ಸರಿ, ಬಡವರ ಬಂಧು ಮಾದರಿಯ ರಿಯಾಯಿತಿ ದರದ ಕ್ಯಾಂಟೀನ್, ಸ್ನಾನ ಗೃಹ, ಆಧುನಿಕ ಮಾದರಿಯ 30 ಶೌಚಾಲಯ ನಿರ್ಮಿಸಲಾಗುತ್ತಿದೆ.

ಉಳ್ಳಾಲ, ಎ. 10: ವ್ಯಾಪಾರಿಗಳ ಅನುಕೂಲ ಮತ್ತು ಗ್ರಾಹಕರ ಸ್ನೇಹಿ ವ್ಯವಸ್ಥೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಆತ್ಮ ನಿರ್ಭರ್ ಗೆ ಪೂರಕ ಎಂಬಂತೆ ರಾ.ಹೆ. 66ರ ಕಲ್ಲಾಪು ಬಳಿ ವಿಶಾಲ, ಸುಸಜ್ಜಿತವಾದ ಗ್ಲೋಬಲ್ ಕಮರ್ಷಿಯಲ್ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. 

ರಾ.ಹೆ.66 ರ ಕಲ್ಲಾಪಿನಲ್ಲಿರುವ ಸುಮಾರು 5 ಎಕರೆ ವಿಶಾಲ ಪ್ರದೇಶದಲ್ಲಿ 1.5 ಎಕರೆ ಪ್ರದೇಶವನ್ನು ಮಾರುಕಟ್ಟೆ ವ್ಯಾಪಾರೋದ್ಯಮಕ್ಕೆ ಬಳಸಲಾಗಿದೆ. ಈ ವಿಶಾಲ ಮಾರುಕಟ್ಟೆಯಲ್ಲಿ 200 ರಷ್ಟು ತಾತ್ಕಾಲಿಕ ಶೆಡ್ ರೂಪದ ಅಂಗಡಿ ಮಳಿಗೆಗಳನ್ನು ನಿರ್ಮಿಸಿದ್ದು, ಹೊರ ಆವರಣದಲ್ಲಿ ರಖಂ ಮತ್ತು ಒಳ ಆವರಣದಲ್ಲಿ ಚಿಲ್ಲರೆ ಅಂಗಡಿಗಳು ವಹಿವಾಟು ನಡೆಸಲಿವೆ. ಉಳಿದ ಭಾಗವನ್ನು ವಾಹನಗಳ ಸಂಚಾರ ಮತ್ತು ಪಾರ್ಕಿಂಗ್ ಕೆಲಸಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ವ್ಯಾಪಾರಿಗಳಿಗೂ ಅನುಕೂಲ ಮತ್ತು ಕೈಗೆಟಕುವ ಬಾಡಿಗೆ ಆಧಾರದಲ್ಲಿ ಎಲ್ಲ ರೀತಿಯ ವ್ಯಾಪಾರ, ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕಲ್ಲಾಪು ಗ್ಲೋಬಲ್ ಕಮರ್ಷಿಯಲ್ ಮಾರುಕಟ್ಟೆಯ ಪ್ರಮೋಟರ್ ಅಬೂಬಕ್ಕರ್ ಸಿದ್ಧಿಕ್ ಮಾಹಿತಿ ನೀಡಿದ್ದಾರೆ. 

ವಿಶಾಲ ಮಾರುಕಟ್ಟೆಯಲ್ಲಿ ವಾಹನ ಚಾಲಕರಿಗೆ ವಿಶ್ರಾಂತಿ ಕೊಠಡಿ, ಒಂದು ಡಿಸ್ಪೆನ್ಸರಿ, ಬಡವರ ಬಂಧು ಮಾದರಿಯ ರಿಯಾಯಿತಿ ದರದ ಕ್ಯಾಂಟೀನ್, ಸ್ನಾನ ಗೃಹ, ಆಧುನಿಕ ಮಾದರಿಯ 30 ಶೌಚಾಲಯ ನಿರ್ಮಿಸಲಾಗುತ್ತಿದೆ. ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮೆರಾ, ಎಂಟು ಮಂದಿ ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಪ್ರತಿ ಮಳಿಗೆಗೂ ವಿದ್ಯುತ್ ದೀಪ, ಸುತ್ತಮುತ್ತಲ ಪರಿಸರಕ್ಕೆ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ನೆಲಕ್ಕೆ ಇಂಟರ್ ಲಾಕ್ ಅಳವಡಿಸಲಾಗಿದೆ. ಎಟಿಎಂ ಸಹಿತ ಬ್ಯಾಂಕಿಂಗ್ ವ್ಯವಸ್ಥೆಗಾಗಿ ಬ್ಯಾಂಕ್ ಜತೆ ಮಾತುಕತೆ ನಡೆಸಲಾಗಿದೆ. 

ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಯಾವುದೇ ಕಸವನ್ನು ಮಾರುಕಟ್ಟೆ ಹೊರ ಭಾಗಕ್ಕೆ ಹಾಕುವುದಿಲ್ಲ. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಿದ್ದು, ಇಂಥಹ ಯೋಜನೆ ಬೇರಾವ ಮಾರುಕಟ್ಟೆಯಲ್ಲೂ ಕಾಣಲು ಸಿಗದು. ದಿನಕ್ಕೆರಡು ಬಾರಿ ಶುಚಿತ್ವ , ಸ್ಯಾನಿಟೈಶೇಷನ್ ಮಾಡಲಾಗುತ್ತದೆ. ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡಿ ಸುತ್ತಮುತ್ತ ಹಸಿರ ಸಂಪತ್ತು ಹೆಚ್ಚಿಸುವ ಯೋಜನೆ ಇದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ಶಾಸಕ ಯು.ಟಿ ಖಾದರ್ ,ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಮೊದಲಾದವರು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅತ್ಯಾಧುನಿಕ ವ್ಯವಸ್ಥಿತ ಯೋಜನೆಯನ್ನು ಪ್ರಶಂಸಿಸಿದ್ದಾರೆ.

Spacious complex for business purpose inaugurated by in Ullal by Global Commercial. Mangalore DC Rajendra Kumar and other leaders have praised their the companies work.