ಶ್ರಮದಾನದ ವೇಳೆ ಗೋಡೆ ಕುಸಿದು ವ್ಯಕ್ತಿ ಸಾವು

31-08-20 11:32 am       Mangalore Reporter   ಕರಾವಳಿ

ಶ್ರಮದಾನ ನಡೆಸುತ್ತಿದ್ದ ವೇಳೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದದಲ್ಲಿ ನಡೆದಿದೆ.

ಮಂಗಳೂರು, ಆಗಸ್ಟ್ 31: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿ ಎಂಬಲ್ಲಿ ಶ್ರಮದಾನ ನಡೆಸುತ್ತಿದ್ದ ವೇಳೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಮೃತರನ್ನು ಸ್ಥಳೀಯ  ನಿವಾಸಿ ಜನಾದ೯ನ ಪೂಜಾರಿ (35) ಎಂದು ಗುರುತಿಸಲಾಗಿದೆ.

ಅಂಮುಂಜೆ ಗ್ರಾಮ ಧಾರ್ಮಿಕ ಕ್ಷೇತ್ರದಲ್ಲಿ ಹಳೆಯ ಕಟ್ಟಡದ ಗೋಡೆಯನ್ನು ತೆಗೆಯುವ ಕೆಲಸ ಶ್ರಮದಾನದ ಮೂಲಕ ನಡೆಯುತಿತ್ತು. ಈ  ವೇಳೆ ಹಳೆಯ ಕಟ್ಟಡದ ಗೋಡೆಯ ಕಲ್ಲು ಜನಾರ್ಧನ ಅವರ ಮೈ ಮೇಲೆ ಬಿದ್ದ ಪರಿಣಾಮ ಗಂಭೀರ ಸ್ವರೂಪದ ಗಾಯಗಳಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಕೊನೆಯುಸಿರೆಳೆದರೆಂದು ಸ್ಥಳೀಯರು ತಿಳಿಸಿದ್ದಾರೆ. 

ಘಟನೆಯಲ್ಲಿ ಬಾಲಕ ವೃಷಭ (11) ಹಾಗು ಸೂರಜ್ (20) ಅಲ್ಪ ಸ್ವಲ್ಪ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಅಪರಾಧ ವಿಭಾಗದ ಎಸ್.ಐ. ಸಂಜೀವ ಕೆ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.