ಲೈಂಗಿಕ ಕಿರುಕುಳ ಪ್ರಕರಣ ; ಕೋರ್ಟಿಗೆ ಶರಣಾದ ವಕೀಲನಿಗೆ ಜೈಲು, ಜೈಲೂಟ ತಪ್ಪಿಸಿದ ವಕೀಲರು! ನಾಳೆ ಜಾಮೀನು ಅರ್ಜಿ ವಿಚಾರಣೆ 

20-12-21 07:18 pm       HK Desk news   ಕ್ರೈಂ

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನ ಭೀತಿಯಿಂದ ಎರಡು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ವಕೀಲ ಕೆ.ಎಸ್.ಎನ್. ರಾಜೇಶ್ ಮಂಗಳೂರಿನ ಕೋರ್ಟಿಗೆ ಹಾಜರಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

Photo credits : Headline Karnataka

ಮಂಗಳೂರು, ಡಿ.20: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನ ಭೀತಿಯಿಂದ ಎರಡು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ವಕೀಲ ಕೆ.ಎಸ್.ಎನ್. ರಾಜೇಶ್ ಮಂಗಳೂರಿನ ಕೋರ್ಟಿಗೆ ಹಾಜರಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಎರಡು ತಿಂಗಳಿನಿಂದ ಪೊಲೀಸರ ಕಣ್ತಪ್ಪಿಸಿ ಓಡಾಡಿದ್ದ ವಕೀಲ ಇಂದು ಮಧ್ಯಾಹ್ನ ಮೂರು ಗಂಟೆಗೆ ದಿಢೀರ್ ಆಗಿ ಮಂಗಳೂರಿನ ಮೂರನೇ ಜೆಎಂಎಫ್ ಕೋರ್ಟಿಗೆ ಹಾಜರಾಗಿದ್ದರು. ಹಿರಿಯ ವಕೀಲ ಎಸ್.ಪಿ.ಚೆಂಗಪ್ಪ ಅವರು ಕೆ.ಎಸ್.ಎನ್. ರಾಜೇಶ್ ಅವರನ್ನು ನ್ಯಾಯಾಲಯಕ್ಕೆ ಶರಣಾಗಿಸಿ, ಮಧ್ಯಂತರ ಜಾಮೀನಿಗೆ ಅರ್ಜಿ ಹಾಕಿದ್ದರು. ಈ ವಿಚಾರ ತಿಳಿಯದ ಪೊಲೀಸರು ಕೋರ್ಟಿನತ್ತ ಹೌಹಾರಿಕೊಂಡು ಧಾವಿಸಿ ಬಂದಿದ್ದರು.

ಸಂಜೆ 5 ಗಂಟೆ ವೇಳೆಗೆ ಮಧ್ಯಂತರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್, ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದ್ದಲ್ಲದೆ, ಆರೋಪಿ ವಕೀಲನಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದೇ ವೇಳೆ, ವಕೀಲರು ತನ್ನ ಕಕ್ಷಿದಾರ ಕೆ.ಎಸ್.ಎನ್. ರಾಜೇಶ್ ಗೆ ಅನಾರೋಗ್ಯ ಇರುವುದರಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಅನುವು ಮಾಡಬೇಕೆಂದು ಕೇಳಿಕೊಂಡಿದ್ದಾರೆ. ಅದರಂತೆ, ವಕೀಲ ಜೈಲೂಟದಿಂದ ಸದ್ಯಕ್ಕೆ ತಪ್ಪಿಸಿಕೊಂಡಿದ್ದಾರೆ. ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಕೀಲ ಎಸ್.ಪಿ.ಚೆಂಗಪ್ಪ, ಕೋರ್ಟ್ ಸದ್ಯಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆದರೆ, ನಾಳೆ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು ಮುಂದಿನದ್ದು ನಿರ್ಧಾರ ಆಗಲಿದೆ ಎಂದು ಹೇಳಿದ್ದಾರೆ.

ಏನಿದು ವಕೀಲನ ಕಿರುಕುಳ ಪ್ರಕರಣ ?

ಲೋಕಾಯುಕ್ತದ ಪರವಾಗಿ ಸರಕಾರಿ ವಕೀಲರೂ ಆಗಿದ್ದ ಕೆ.ಎಸ್.ಎನ್ ರಾಜೇಶ್ ಕರಂಗಲ್ಪಾಡಿಯಲ್ಲಿ ಕಚೇರಿ ಹೊಂದಿದ್ದರು. ಅಲ್ಲಿಗೆ ಇಂಟರ್ನ್ ಶಿಪ್ ಮಾಡುವುದಕ್ಕಾಗಿ ಎಸ್ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಬರುತ್ತಿದ್ದು ಆಕೆಯ ಮೇಲೆ ಸೆಪ್ಟಂಬರ್ ತಿಂಗಳಲ್ಲಿ ವಕೀಲ ರಾಜೇಶ್ ಲೈಂಗಿಕ ಕಿರುಕುಳ ನೀಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿದ್ಯಾರ್ಥಿನಿ ಮತ್ತು ವಕೀಲ ಮಾತನಾಡಿದ್ದು ಎನ್ನಲಾದ ಆಡಿಯೋ ಕೂಡ ವೈರಲ್ ಆಗಿತ್ತು. ವಕೀಲ ತನ್ನ ತಪ್ಪೊಪ್ಪಿಗೆ ಮಾಡುವ ರೀತಿಯಲ್ಲಿ ಆಡಿಯೋ ಇತ್ತು. ಆನಂತರ, ಅ.18ರಂದು ಮಂಗಳೂರಿನ ಮಹಿಳಾ ಠಾಣೆಯಲ್ಲಿ ವಿದ್ಯಾರ್ಥಿನಿ ದೂರು ದಾಖಲಿಸಿದ್ದು, ಅತ್ಯಾಚಾರ ಯತ್ನ ಸೇರಿದಂತೆ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿತ್ತು. ಎಫ್ಐಆರ್ ದಾಖಲಾಗುತ್ತಿದ್ದಂತೆ, ವಕೀಲ ಕೆ.ಎಸ್.ಎನ್. ರಾಜೇಶ್ ನಾಪತ್ತೆಯಾಗಿದ್ದು, ಮಾಧ್ಯಮದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿತ್ತು.

ಇದಕ್ಕೂ ಮುನ್ನ ಪ್ರಕರಣ ಮುಚ್ಚಿ ಹಾಕಲು ವಿದ್ಯಾರ್ಥಿನಿಯನ್ನು ಉರ್ವಾ ಠಾಣೆಗೆ ಕರೆಸಿ, ಮಾತುಕತೆ ನಡೆಸಿದ್ದು ಸಂತ್ರಸ್ತೆಯ ಬಳಿ ಕ್ಷಮಾಪಣಾ ಪತ್ರ ಬರೆಯುವಂತೆ ಒತ್ತಡ ಹೇರಲಾಗಿತ್ತು ಅನ್ನುವ ಆರೋಪ ಕೇಳಿಬಂದಿತ್ತು. ಉರ್ವಾ ಪೊಲೀಸರು ವಕೀಲನ ಜೊತೆ ಸೇರಿ ಈ ಕೃತ್ಯ ನಡೆಸಿದ್ದರು ಅನ್ನುವ ಆರೋಪ ಸುದ್ದಿಯಾಗುತ್ತಿದ್ದಂತೆ, ಪೊಲೀಸ್ ಕಮಿಷನರ್ ಶಶಿಕುಮಾರ್ ಉರ್ವಾ ಠಾಣೆಯ ಇಬ್ಬರು ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಿದ್ದರು. ಇವೆಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸಾಮಾನ್ಯ ಅತ್ಯಾಚಾರ ಯತ್ನ ಕೇಸು ಆಗಿರುತ್ತಿದ್ದ ವಕೀಲ ಕೆಎಸ್ಎನ್ ರಾಜೇಶ್ ಪ್ರಕರಣ ಹೈಪ್ರೊಫೈಲ್ ಆಗಿ ಮಾರ್ಪಟ್ಟಿತ್ತು. ಆನಂತರ ಬೆಂಗಳೂರು, ಹೈದ್ರಾಬಾದ್ ನಲ್ಲಿ ತಲೆಮರೆಸಿಕೊಂಡಿದ್ದಾನೆ ಅನ್ನುವ ಮಾಹಿತಿಗಳಿದ್ದವು. ಆತನಿಗೆ ತಪ್ಪಿಸಿಕೊಳ್ಳಲು ಮತ್ತು ಹಣಕಾಸು ಸಹಕಾರ ನೀಡಿದ್ದಾರೆ ಎಂಬ ಆರೋಪದಲ್ಲಿ ಪತ್ನಿ ಸೇರಿದಂತೆ ಮೂರು ಮಂದಿ ಸಂಬಂಧಿಕರನ್ನೂ ಬಂಧಿಸಲಾಗಿತ್ತು.

ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ; ಲೋಕಾಯುಕ್ತ ವಿಶೇಷ ಸರಕಾರಿ ಅಭಿಯೋಜಕರ ವಿರುದ್ಧ ಎಫ್ಐಆರ್ ! 

ವಕೀಲನ ಪ್ರಕರಣ ಮುಚ್ಚಿ ಹಾಕಲು ಯತ್ನ ; ಮಹಿಳಾ ಎಸ್ಐ ಸೇರಿ ಇಬ್ಬರು ಸಸ್ಪೆಂಡ್, ಸಂತ್ರಸ್ತ ಯುವತಿಗೆ ಬೆದರಿಸಿದ್ದ ಮಹಿಳೆ ಬಂಧನ

ಲೈಂಗಿಕ ಕಿರುಕುಳ ಆರೋಪ ; ಬಾರ್ ಕೌನ್ಸಿಲ್‌ನಿಂದ ವಕೀಲ ಕೆಎಸ್ಎನ್ ರಾಜೇಶ್ ಗೆ ಅಮಾನತು ಶಿಕ್ಷೆ ! ವಕಾಲತು ಹಕ್ಕನ್ನೇ ಕಳಕೊಂಡ ವಕೀಲ !!

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ; ಆರೋಪಿ ವಕೀಲನ ಅಜ್ಞಾತ ಸ್ಥಳಕ್ಕೆ ಬಿಟ್ಟು ಬಂದಿದ್ದ ವ್ಯಕ್ತಿಯ ಬಂಧನ

ಲೈಂಗಿಕ ಕಿರುಕುಳ ಪ್ರಕರಣ ; ಆರೋಪಿ ವಕೀಲನ ನಿರೀಕ್ಷಣಾ ಜಾಮೀನು ಅರ್ಜಿ ವಜಾ, ವಕೀಲನಿಗೆ ಬಂಧನ ಭೀತಿ !

ಲೈಂಗಿಕ ಕಿರುಕುಳ ; ತಲೆಮರೆಸಿಕೊಂಡ ವಕೀಲ ಕೆ.ಎಸ್.ಎನ್ ರಾಜೇಶ್ ಪತ್ತೆಗೆ ದೇಶಾದ್ಯಂತ ಲುಕೌಟ್ ನೋಟೀಸ್ !

ಲೈಂಗಿಕ ಕಿರುಕುಳ ಪ್ರಕರಣ ; ಆರೋಪಿ ವಕೀಲ ಕೆಎಸ್ಎನ್ ರಾಜೇಶ್ ಮಂಗಳೂರಿನ ಕೋರ್ಟಿಗೆ ಶರಣು !

Mangalore Sexual Harrasment case Lawyer KSN Rajesh sent to 14 days Judicial custody. Sexual Harrasment case Lawyer KSN Rajesh who was absconding since months Surrenders before Mangalore court. The Mangalore police had also issued a Look Out notice against KSN Rajesh. It may be recalled, complaints in the women's police station here were filed against special public prosecutor, K S N Rajesh of the Lokayukta division here, accusing him of sexual harassment and threat.