ಹಿರಿಯಡ್ಕ ಕೊಲೆ ಪ್ರಕರಣ ; ರೌಡಿಶೀಟರ್‌ ಕೋಡಿಕೆರೆ ಮನೋಜ್‌ ತಂಡದ ಕೃತ್ಯ !

26-09-20 11:50 am       Udupi Correspondent   ಕ್ರೈಂ

ಹಿರಿಯಡ್ಕದಲ್ಲಿ ಕಿಶನ್‌ ಹೆಗ್ಡೆ ಕೊಲೆ ಪ್ರಕರಣದಲ್ಲಿ ಮಂಗಳೂರಿನ ರೌಡಿಶೀಟರ್ ಕೋಡಿಕೆರೆ ಮನೋಜ್ ಮತ್ತಾತನ ತಂಡ ನಡೆಸಿದ್ದಾಗಿ ಪೊಲೀಸರು ಖಚಿತಪಡಿಸಿದ್ದಾರೆ. 

ಉಡುಪಿ, ಸೆಪ್ಟಂಬರ್ 26: ಹಿರಿಯಡ್ಕದಲ್ಲಿ ಎರಡು ದಿನಗಳ ಹಿಂದೆ ನಡೆದ ಕಿಶನ್‌ ಹೆಗ್ಡೆ ಕೊಲೆ ಪ್ರಕರಣದಲ್ಲಿ ಮಂಗಳೂರಿನ ರೌಡಿಶೀಟರ್ ಕೋಡಿಕೆರೆ ಮನೋಜ್ ಮತ್ತಾತನ ತಂಡ ನಡೆಸಿದ್ದಾಗಿ ಪೊಲೀಸರು ಖಚಿತಪಡಿಸಿದ್ದಾರೆ. 

ಆರೋಪಿಗಳು ಕೃತ್ಯ ನಡೆಸಿ, ಪರಾರಿಯಾಗಿದ್ದ ಇನೋವಾ ಕಾರು ಕಾರ್ಕಳ ಸಮೀಪದ ಇರ್ವತ್ತೂರಿನಲ್ಲಿ ಪತ್ತೆಯಾಗಿತ್ತು. ಈ ಮಾಹಿತಿ ಆಧರಿಸಿ ಬೆನ್ನತ್ತಿದ ಪೊಲೀಸರು ಕೋಡಿಕೆರೆ ಟೀಮಿನ ಬಗ್ಗೆ ಸುಳಿವು ಪಡೆದಿದ್ದಾರೆ. 

ಕಿಶನ್ ಹೆಗ್ಡೆ ಅಂದು ಮಂಗಳೂರಿನ ದಿವ್ಯರಾಜ್‌ ಶೆಟ್ಟಿ ಹಾಗೂ ಹರಿಪ್ರಸಾದ್‌ ಶೆಟ್ಟಿ ಅವರ ಜೊತೆ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆಂದು ತೆರಳಿದ್ದ. ಆದರೆ, ಕಾರಿನಿಂದ ಇಳಿಯುವ ವೇಳೆ ಬೆನ್ನಟ್ಟಿ ಬಂದಿದ್ದ ರೌಡಿಗಳ ತಂಡ ಅಡ್ಡಗಟ್ಟಿದೆ. ಮಾರಕಾಯುಧಗಳ ಜೊತೆ ಬಂದಿದ್ದ ತಂಡ, ಕಿಶನ್ ಹೆಗ್ಡೆ ಜೊತೆ ವಾಗ್ವಾದ ನಡೆಸಿದ್ದಾರೆ. ಬಳಿಕ 4-5 ಮಂದಿ ಸೇರಿ ಕಿಶನ್‌ ಹೆಗ್ಡೆ ಕಾರಿನಿಂದ ಇಳಿಯುತ್ತಿದ್ದಾಗಲೇ ತಲವಾರಿನಿಂದ ಕಡಿದಿದ್ದಾರೆ. ಕಿಶನ್‌ ಹೆಗ್ಡೆ ಜತೆಯಲ್ಲಿದ್ದ ಹರಿಪ್ರಸಾದ್‌ ತಲೆಗೂ ಏಟು ಬಿದ್ದಿತ್ತು. 

ರೌಡಿಶೀಟರ್‌ಗಳಾದ ಕಿಶನ್‌ ಹೆಗ್ಡೆ ಹಾಗೂ ಮನೋಜ್‌ ಕೋಡಿಕೆರೆ ನಡುವೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಇತ್ತು. ಇದೇ ವೈಷಮ್ಯದಲ್ಲಿ ಮನೋಜ್‌ ಕೋಡಿಕೆರೆ ಇತರರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗ್ತಿದೆ. ಕೊಲೆಯ ಬಳಿಕ ರೌಡಿಗಳು ತಾವು ಬಂದಿದ್ದ ರಿಡ್ಜ್ ಹಾಗೂ ಇನೋವಾದಲ್ಲಿ ಪಲಾಯನ ಆಗಿದ್ದರು. ರಿಡ್ಜ್ ಕಾರು ಗುರುವಾರವೇ ಕಣಂಜಾರು ಬಳಿ ಪತ್ತೆಯಾಗಿತ್ತು. ಇನೋವಾ ಕಾರು ಪತ್ತೆಯಾಗಿದ್ದರಿಂದ ಆರೋಪಿಗಳು, ತಮ್ಮ ಕಾರು ನಿಲ್ಲಿಸಿ ಬೇರೆ ವಾಹನಗಳಲ್ಲಿ ಪರಾರಿಯಾಗಿರುವ ಶಂಕೆಯಿದೆ. ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

Join our WhatsApp group for latest news updates (2)