Mla Iqbal Hussain, Jds Kumaraswamy, Dr Manjunath: ಡಿಕೆ ಸುರೇಶ್ ವಿರುದ್ಧ ನಿಲ್ಲೋಕೆ ಎರಡು ಬಾರಿ ಸಿಎಂ ಆಗಿದ್ದ ನಿಮಗೆ ತಾಕತ್ತು, ಗಂಡಸ್ತನ ಇಲ್ವಾ?  ; ಡಾ. ಮಂಜುನಾಥ್ ರನ್ನು ಹರಕೆ ಕುರಿ ಮಾಡ್ತವ್ರೆ, ಶಾಸಕ ಇಕ್ಬಾಲ್ ಹುಸೇನ್ ಕಿಡಿ 

13-03-24 06:38 pm       HK News Desk   ಕರ್ನಾಟಕ

“ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ಮಂಜುನಾಥ್ ಅವರು ರಾಜಕೀಯವಾಗಿ ಅಮಾಯಕರು. ಅವರು ಒಳ್ಳೇ ಡಾಕ್ಟರ್ ಆಗಿರುವಂಥವರು. ರಾಜಕೀಯ ಅವರಿಗೆ ಒಗ್ಗುವಂಥದ್ದಲ್ಲ.

ರಾಮನಗರ, ಮಾ 13: “ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ಮಂಜುನಾಥ್ ಅವರು ರಾಜಕೀಯವಾಗಿ ಅಮಾಯಕರು. ಅವರು ಒಳ್ಳೇ ಡಾಕ್ಟರ್ ಆಗಿರುವಂಥವರು. ರಾಜಕೀಯ ಅವರಿಗೆ ಒಗ್ಗುವಂಥದ್ದಲ್ಲ. ಅಂಥ ಅಮಾಯಕರನ್ನು ಚುನಾವಣೆಗೆ ಎಳೆದು ತಂದು, ರಾಮನಗರದಲ್ಲಿ ಡಿಕೆ ಸುರೇಶ್ ವಿರುದ್ಧ ನಿಲ್ಲಿಸುವ ಮೂಲಕ ಜೆಡಿಎಸ್ ನವರು ಅವರನ್ನು ಬಲಿಪಶು ಮಾಡುತ್ತಿದ್ದಾರೆ’’ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ಇದೇ ವೇಳೆ, ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿಯವರಿಗೆ ಸವಾಲು ಹಾಕಿದ ಅವರು, “ಡಿಕೆ ಸುರೇಶ್ ವಿರುದ್ಧ ನಿಲ್ಲೋಕೆ ಎರಡು ಬಾರಿ ಸಿಎಂ ಆಗಿದ್ದ ನಿಮಗೆ ತಾಕತ್ತಿಲ್ಲವಾ’’ ಎಂದು ಪ್ರಶ್ನಿಸಿದ್ದಾರೆ. “ಹೆಚ್ಡಿಕೆಗೆ ತಾಕತಿಲ್ವಾ., ನಿಮಗೆ ಗಂಡಸ್ತನ ಇಲ್ವಾ.!?ಎರಡು ಬಾರಿ ಸಿಎಂ ಆದವ್ರು, ಮಾಜಿ ಸಿಎಂಗೆ ನಿಲ್ಲೋ ತಾಕತಿಲ್ವಾ.?’’ ಎಂದು ಕೇಳಿರುವ ಅವರು, “ಅಶ್ವತ್ಥ್ ನಾರಾಯಣ್ ಅವರು ಹಿಂದೆ ಇಲ್ಲಿ ಉಸ್ತುವಾರಿ ಮಂತ್ರಿ ಆಗ್ರಿದಲ್ಲ ಅವರನ್ನ, ನಿಲ್ಲಿಸಬಹದಿತ್ತಲ್ವಾ.? ಅಷ್ಟೆಲ್ಲಾ ಯಾಕೆ ಸಿ.ಪಿ.ಯೋಗೇಶ್ವರ್ ಅವರೇ ನಿಲ್ಲಬಹುದಿತ್ತಲ್ಲವಾ’’ ಎಂದು ಪ್ರಶ್ನಿಸಿದ್ದಾರೆ.

ಪಾಪ… ಡಿ.ಕೆ.ಸುರೇಶ್ ವಿರುದ್ಧ ಮಂಜುನಾಥ್ ಅವರನ್ನು ಹರಕೆ ಕುರಿ ಮಾಡುತ್ತಿದ್ದಾರೆ. ಡಿ ಕೆ ಸುರೇಶ್ ವಿರುದ್ಧ ನಿಮಗೆ ಅಭ್ಯರ್ಥಿ ಇಲ್ಲ ಅನ್ನೋದು ಗೊತ್ತಾಗ್ತಿದೆ ಎಂದು ಹುಸೇನ್ ಕಿಡಿಕಾರಿದ್ದಾರೆ. ಇದೇ ವೇಳೆ, ಎಚ್ಡಿಕೆಯವರ ಕಿರಾತಕರನ್ನ ಸೋಲಿಸಬೇಕು ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ನಿಮ್ಮನ್ನು ಕಾಂಗ್ರೆಸ್ಸಿನವರು ಮುಖ್ಯಮಂತ್ರಿ ಮಾಡಿದಾಗ ಕಾಂಗ್ರೆಸ್ಸಿನವರು ಕಿರಾತಕರಾಗಿರಲಿಲ್ಲವಾ.? ಎಂದು ಕೇಳಿರುವ ಅವರು, ಈಗ ಒಬ್ಬ ಮುಸ್ಲಿಂ ವ್ಯಕ್ತಿಯಲ್ಲಿ ಗೆಲ್ಲಿಸಿದಕ್ಕೆ ಅವರು ಕಿರಾತಕ‌ರಾದ್ರಾ.? ಆ‌ ಪದ ನಿಮಗೆ ಅನ್ವಯಿಸುತ್ತದೆ, ನೀವು ಕಿರಾತಕರು. ಹೆಚ್ಡಿಕೆ ಸೋಲಿನ‌ ಹತಾಶೆಯಲ್ಲಿ‌ ಹೀಗೆ ಮಾತನಾಡ್ತಿದ್ದಾರೆ’’ ಎಂದು ಹೇಳಿದ್ದಾರೆ.

Mla Iqbal Hussain slams Jds Kumaraswamy of making Dr Manjunath contest against DK Suresh, says does Kumaraswamy have no guts t stand against DK Suresh ?