ಕೇಂದ್ರೀಕೃತ ಸಾಫ್ಟ್‌ವೇರ್ ಬಳಸಿ ಬೂತ್‌ಗಳಿಂದಲೇ ಮತದಾರರ ಹೆಸರು ಅಳಿಸಿದ್ದಾರೆ ; ಅಳಂದ ಕ್ಷೇತ್ರದ ಮತದಾರರನ್ನು ಕುಳ್ಳಿರಿಸಿ ರಾಹುಲ್ ಗಾಂಧಿ ಸುದ್ದಿಗೋಷ್ಟಿ, ಚುನಾವಣೆ ಆಯೋಗದ ವಿರುದ್ಧ ವಾಗ್ದಾಳಿ 

18-09-25 08:14 pm       HK News Desk   ದೇಶ - ವಿದೇಶ

ಭಾರತೀಯ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಗುರುವಾರ ನವದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಚುನಾವಣಾ ಆಯೋಗದ ವಿರುದ್ಧ ತಾವು ನಡೆಸುತ್ತಿರುವ ಮತ ಕಳ್ಳತನದ ಆರೋಪಗಳನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. 

ನವದೆಹಲಿ, ಸೆ.18 : ಭಾರತೀಯ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಗುರುವಾರ ನವದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಚುನಾವಣಾ ಆಯೋಗದ ವಿರುದ್ಧ ತಾವು ನಡೆಸುತ್ತಿರುವ ಮತ ಕಳ್ಳತನದ ಆರೋಪಗಳನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. 

ಮತಗಳ್ಳತನ ಆರೋಪಕ್ಕೆ ಸಂಬಂಧಿಸಿ, ರಾಹುಲ್‌ ಗಾಂಧಿಯವರು ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಆರೋಪ ಮಾಡಿದ್ದು, ಅಳಂದದಲ್ಲಿ 6,018 ಮತಗಳನ್ನು ಕಳವು ಮಾಡಲಾಗಿದೆ ಎಂದು ಗಂಬೀರ ಆರೋಪ ಮಾಡಿದರಲ್ಲದೆ, ಅಳಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಪಟ್ಟಿಯಿಂದ ಹೆಸರು ತೆಗೆದವರು ಎನ್ನಲಾದ ಕೆಲವರನ್ನು ತಮ್ಮ ಸುದ್ದಿಗೋಷ್ಠಿಯಲ್ಲಿ ಕೂರಿಸಿ ಅವರಿಂದಲೇ ತಮ್ಮ ಆರೋಪಗಳನ್ನು ಹೇಳಿಸಿಕೊಂಡರು. 

2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಭದ್ರಕೋಟೆಗಳಿಂದ ಮತದಾರರ ಹೆಸರುಗಳನ್ನು ಕೇಂದ್ರೀಕೃತ ಸಾಫ್ಟ್‌ವೇರ್‌ ಬಳಸಿ ಸಾಮೂಹಿಕವಾಗಿ ಅಳಿಸಲಾಗಿದೆ ಎಂದು ಆರೋಪಿಸಿದ ರಾಹುಲ್‌ ಗಾಂಧಿ, ಈ ಮತದಾರರ ಗುರುತಿನ ಚೀಟಿಗಳನ್ನು ರಾಜ್ಯದ ಹೊರಗಿನಿಂದ ನಕಲಿ ಲಾಗಿನ್‌ಗಳು ಮತ್ತು ಫೋನ್ ಸಂಖ್ಯೆಗಳನ್ನು ಬಳಸಿ ಅಳಿಸಲಾಗಿದೆ ಎಂದು ಹೇಳಿದರು. ಜನರ ಗುಂಪೊಂದು ದೇಶಾದ್ಯಂತ ಲಕ್ಷಾಂತರ ಮತದಾರರ ಹೆಸರು ಅಳಿಸಲು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಕೆಲವೊಂದು ಸಮುದಾಯಗಳು, ಮುಖ್ಯವಾಗಿ ಪ್ರತಿಪಕ್ಷಗಳಿಗೆ ಮತ ಹಾಕುತ್ತಿರುವ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಇದು ಕಾರ್ಯನಿರತವಾಗಿದೆ. ಇದಕ್ಕೆ ನಮ್ಮಲ್ಲಿ 100 ಪ್ರತಿಶತ ಪುರಾವೆ ಇದೆ. 100 ಪ್ರತಿಶತ ಪುರಾವೆ ಇಲ್ಲದೆ ಯಾವುದನ್ನೂ ನಾನು ಇಲ್ಲಿ ಹೇಳುವುದಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದರು.

ಇದೇ ವೇಳೆ ತಮ್ಮ ಸುದ್ದಿಗೋಷ್ಠಿಯಲ್ಲಿ ರಾಹುಲ್‌ ಗಾಂಧಿ ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರನ್ನು ವೇದಿಕೆ ಮೇಲೆ ಕುಳ್ಳಿರಿಸಿ ಅವರಿಂದಲೇ ತಮ್ಮ ಆರೋಪಕ್ಕೆ ಪುಷ್ಟಿ ಕೊಡಿಸಿದರು. ಗೋದಾಭಾಯಿ ಎಂಬ ಮಹಿಳೆಯ ಹೇಳಿಕೆಯ ವಿಡಿಯೋ ಪ್ರದರ್ಶಿಸಿದ ರಾಹುಲ್‌ ಗಾಂಧಿ, ಅನಂತರ, ಮತದಾರರ ಪಟ್ಟಿಯಿಂದ ಕೈಬಿಡಲಾದ ಓರ್ವ ವ್ಯಕ್ತಿ ಮತ್ತು ಓರ್ವ ಯುವತಿಯನ್ನು ಪರಿಚಯಿಸಿದರು. ಅಳಂದದ ಸೂರ್ಯಕಾಂತ್‌ ಎಂಬುವವರು ಮಾತನಾಡಿ ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾದ ಸಂಗತಿ ನನಗೆ ತಡವಾಗಿ ಗೊತ್ತಾಯಿತು. ಆ ಕುರಿತು ದೂರು ದಾಖಲಿಸಿದ ಬಳಿಕವೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ" ಎಂದು ಆರೋಪಿಸಿದರು. ಇವರು ಕನ್ನಡದಲ್ಲಿ ಮಾತನಾಡಿದ್ದನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಗಾರ ಬಿ.ಆರ್‌ ಪಾಟೀಲ್‌, ಹಿಂದಿ ಭಾಷೆಗೆ ಭಾಷಾಂತರಿಸಿದರು. ಇದೇ ವೇಳೆ ಬಬಿತಾ ಚೌಧರಿ ಎಂಬ ಯುವತಿಯೂ ಜೊತೆಗಿದ್ದರು. ಆ ಬಳಿಕ ಮಾತನಾಡಿದ ರಾಹುಲ್‌ ಗಾಂಧಿ, ಈ ಚುನಾವಣಾ ಅಕ್ರಮಗಳ ವಿರುದ್ಧ ಕಿಡಿಕಾರಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ ರಾಹುಲ್‌ ಗಾಂಧಿ, ಮುಖ್ಯ ಚುನಾವಣಾ ಆಯುಕ್ತರು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ಶಕ್ತಿಗಳ ಪರವಾಗಿ ಕೆಲಸ ಮಾಡುತಿದ್ದಾರೆ ಎಂದು ಮತ್ತೊಮ್ಮೆ ಗಂಭೀರ ಆರೋಪ ಮಾಡಿದರು.  

ಕರ್ನಾಟಕದ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತಗಳ್ಳತನದ ಬಗ್ಗೆ ಸಿಐಡಿ ಒಟ್ಟು 18 ಬಾರಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಆದರೂ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕರ್ನಾಟಕದ ಸಿಐಡಿ ಮತದಾರರ ಡಿಲೀಟ್‌ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡರೂ, ಕೇಂದ್ರ ಚುನಾವಣಾ ಆಯೋಗ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದೂ ರಾಹುಲ್‌ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು.

Leader of Opposition in the Lok Sabha, Rahul Gandhi, launched a scathing attack on the Election Commission of India (ECI) on Thursday, alleging large-scale voter deletion using centralized software during the Karnataka Assembly elections, particularly targeting the Aland constituency.