ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ ಪುನರ್ ನಿರ್ಮಿಸಲು ಕೋರಿದ್ದ ಅರ್ಜಿ ವಜಾ, ಸಿಟ್ಟಾದ ವಕೀಲನಿಂದ ಸಿಜೆಐ ಗವಾಯಿಗೆ ಶೂ ಎಸೆಯಲು ಯತ್ನ ! 

06-10-25 07:56 pm       HK News Desk   ದೇಶ - ವಿದೇಶ

ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಅವರು ಕೋರ್ಟ್ ಕಲಾಪ ನಡೆಸುತ್ತಿದ್ದಾಗ ದೆಹಲಿಯ ವಕೀಲರೊಬ್ಬರು ತನ್ನ ಶೂ ತೆಗೆದು ಅವರತ್ತ ಎಸೆಯಲು ಯತ್ನಿಸಿದ ಘಟನೆ ನಡೆದಿದೆ. ಸುಪ್ರೀಂ ಕೋರ್ಟ್ ಆವರಣದ ನ್ಯಾಯಾಲಯ ಸಂಖ್ಯೆ 1ರಲ್ಲಿ ಈ ಘಟನೆ ನಡೆದಿದ್ದು ವಿಚಾರಣೆ ಸಂದರ್ಭದಲ್ಲಿ 71 ವರ್ಷದ ಹಿರಿಯ ವಕೀಲ ಕಿಶೋರ್ ರಾಕೇಶ್ ಎಂಬವರು ಶೂ ಎಸೆಯಲು ಮುಂದಾಗಿದ್ದಾರೆ.

ನವದೆಹಲಿ, ಅ.6 : ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಅವರು ಕೋರ್ಟ್ ಕಲಾಪ ನಡೆಸುತ್ತಿದ್ದಾಗ ದೆಹಲಿಯ ವಕೀಲರೊಬ್ಬರು ತನ್ನ ಶೂ ತೆಗೆದು ಅವರತ್ತ ಎಸೆಯಲು ಯತ್ನಿಸಿದ ಘಟನೆ ನಡೆದಿದೆ. ಸುಪ್ರೀಂ ಕೋರ್ಟ್ ಆವರಣದ ನ್ಯಾಯಾಲಯ ಸಂಖ್ಯೆ 1ರಲ್ಲಿ ಈ ಘಟನೆ ನಡೆದಿದ್ದು ವಿಚಾರಣೆ ಸಂದರ್ಭದಲ್ಲಿ 71 ವರ್ಷದ ಹಿರಿಯ ವಕೀಲ ಕಿಶೋರ್ ರಾಕೇಶ್ ಎಂಬವರು ಶೂ ಎಸೆಯಲು ಮುಂದಾಗಿದ್ದಾರೆ.

ಆರೋಪಿ ವಕೀಲ ನ್ಯಾಯಾಧೀಶರ ಪೀಠದ ಬಳಿಗೆ ತೆರಳಿ, ತನ್ನ ಶೂವನ್ನು ನ್ಯಾಯಮೂರ್ತಿಯವರ ಮೇಲೆ ಎಸೆಯಲು ಯತ್ನಿಸಿದ್ದಾರೆ. ಆದರೆ, ಕೋರ್ಟ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ, ವಕೀಲನನ್ನು ವಶಕ್ಕೆ ಪಡೆದು ಹೊರಗೆ ಕರೆದೊಯ್ದಿದ್ದಾರೆ. ಈ ವೇಳೆ “ಸನಾತನ್ ಕಾ ಅಪಮಾನ್ ನಹಿ ಸಹೇಂಗೆ” (ಸನಾತನ ಧರ್ಮದ ಅವಮಾನವನ್ನು ಸಹಿಸಲ್ಲ) ಎಂದು ವಕೀಲ ಕೂಗಿಕೊಂಡು ತೆರಳಿದ್ದಾನೆ. 

ಭಗ್ನ ಮೂರ್ತಿ ಬದಲಿಸಲು ವಕೀಲನ ಕೋರಿಕೆ 

ಮಧ್ಯಪ್ರದೇಶದ ಯುನೆಸ್ಕೋ ಪಟ್ಟಿಗೆ ಸೇರಿರುವ ಖಜುರಾಹೊ ದೇವಾಲಯ ಸಂಕೀರ್ಣದಲ್ಲಿ ಜವಾರಿ ದೇವಾಲಯದಲ್ಲಿ ಏಳು ಅಡಿ ಎತ್ತರವಿರುವ ಭಗ್ನಗೊಂಡ ವಿಷ್ಣುವಿನ ವಿಗ್ರಹವನ್ನು ಪುನರ್ನಿರ್ಮಿಸಲು ನಿರ್ದೇಶನ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ಗವಾಯಿ ನೇತೃತ್ವದ ಪೀಠ ವಜಾಗೊಳಿಸಿತ್ತು.

ಪ್ರಕರಣವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಗೆ ಬರುವುದರಿಂದ ನ್ಯಾಯಾಲಯ ನಿರ್ಧರಿಸಲು ಬರುವುದಿಲ್ಲ. ನೀವು ಏನು ಮಾಡುವುದಿದ್ದರೂ ಎಎಸ್‌ಐ ಅನುಮತಿ ನೀಡಬೇಕಾಗಿದೆ ಎಂದು ಹೇಳಿ ಅರ್ಜಿ ವಜಾಗೊಳಿಸಿದ್ದರು.

ಅಲ್ಲದೆ, ಕೇವಲ ಪ್ರಚಾರಕ್ಕಾಗಿ ನೀವು ಅರ್ಜಿ ಸಲ್ಲಿಸಿದ್ದೀರಿ. ಹೋಗಿ ದೇವರಲ್ಲೇ ಏನಾದ್ರೂ ಬೇಡಿಕೊಳ್ಳಿ. ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಈಗಲೇ ಹೋಗಿ ಪ್ರಾರ್ಥಿಸಿ, ದೇವರೇ ಅವಕಾಶ ನೀಡಬಹುದು ಎಂದು ಸಿಜೆಐ ಗವಾಯಿ ಹೇಳಿದ್ದು  ವಕೀಲನನ್ನು ಕೆರಳಿಸಿತ್ತು. ಮೊಘಲ್ ಆಕ್ರಮಣದ ಸಮಯದಲ್ಲಿ ವಿಷ್ಣುವಿನ ವಿಗ್ರಹ ವಿರೂಪಗೊಂಡಿದ್ದು, ಅದನ್ನು ಪುನಃ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಮಾಡಿದರೂ ಆಸಕ್ತಿ ವಹಿಸಿಲ್ಲ. ಕೋರ್ಟ್ ಮೂಲಕ ನಿರ್ದೇಶನ ನೀಡುವಂತೆ ಎಂದು ರಾಕೇಶ್ ಅರ್ಜಿಯಲ್ಲಿ ಕೇಳಿಕೊಂಡಿದ್ದರು. 

ಆದರೆ ಅರ್ಜಿ ವಜಾ ಮಾಡಿದ್ದಕ್ಕೆ ರಾಕೇಶ್, ಸಿಟ್ಟಿನಿಂದ ಶೂ ತೆಗೆದು ನ್ಯಾಯ ಪೀಠದತ್ತ ಎಸೆಯಲು ಮುಂದಾಗಿದ್ದಾರೆ. ಆದರೆ ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಗವಾಯಿ, ನಾನೇನು ಈ ಘಟನೆಯಿಂದ ವಿಚಲಿತನಾಗಿಲ್ಲ. ನೀವು ಕೇಸ್ ಮುಂದುವರಿಸಿ ಎಂದು ಇತರ ವಕೀಲರಿಗೆ ಸೂಚಿಸಿದ್ದಾರೆ. ಘಟನೆ ಬಗ್ಗೆ ಭಾರೀ ಖಂಡನೆ ವ್ಯಕ್ತವಾಗಿದ್ದು ದೆಹಲಿ ಬಾರ್ ಕೌನ್ಸಿಲ್ ವಕೀಲ ರಾಕೇಶ್ ಕಿಶೋರ್ ಅವರನ್ನು ಸದಸ್ಯತ್ವದಿಂದ ಅಮಾನತು ಪಡಿಸಿದೆ.

A dramatic incident occurred in the Supreme Court when 71-year-old Delhi-based lawyer Kishore Rakesh attempted to throw his shoe at Chief Justice of India B.R. Gavai during court proceedings. The incident took place in Courtroom No. 1 after the bench, led by CJI Gavai, dismissed Rakesh’s petition seeking orders to reconstruct a damaged Vishnu idol at the UNESCO-listed Khajuraho temple complex in Madhya Pradesh.