ಬ್ರೇಕಿಂಗ್ ನ್ಯೂಸ್
24-03-21 03:48 pm Headline Karnataka News Network ನ್ಯೂಸ್ View
ಬೆಂಗಳೂರು, ಮಾ.24:ಹೆಣ್ಣು , ಹೊನ್ನು, ಮಣ್ಣು ಮನುಷ್ಯರನ್ನು ಯಾವ ಹಂತಕ್ಕೂ ಒಯ್ಯುತ್ತದೆ ಎನ್ನುತ್ತಾರೆ. ಇದೇ ಕಾರಣಕ್ಕೆ ಬಡಿದಾಟ, ಹೊಡೆದಾಟ, ನಲಿದಾಟ ಎಲ್ಲವೂ ನಡೆಯುತ್ತದೆ. ಈಗಿನ ರಾಜಕಾರಣದಲ್ಲಂತೂ ಹೆಣ್ಣು , ಹೊನ್ನಿನ ಹೊರತಾದ ರಾಜಕೀಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಸ್ಥಿತಿ ಇದೆ. ಹೆಣ್ಣಿನ ಸಂಗ ಎನ್ನುವುದಂತೂ ರಾಜಕಾರಣದ ಒಂದು ಭಾಗವೇ ಆಗಿಹೋಗಿದ್ಯೋ ಎನ್ನುವಷ್ಟರ ಮಟ್ಟಿಗೆ ಈಗಿನ ರಾಜಕೀಯ, ರಾಜಕಾರಣ ಮಗ್ಗುಲು ಹೊರಳಿಸಿದೆ.
ಪ್ರಭಾವಿ ಸಚಿವರೊಬ್ಬರ ರಾಸಲೀಲೆಯ ಸಿಡಿ ಹೊರಬಿದ್ದಿರುವ ಕಾರಣಕ್ಕೆ ರಾಜಕೀಯದಲ್ಲಿ ಹೆಣ್ಣಿನ ಸಂಗ ಚರ್ಚೆಯ ವಸ್ತುವಾಗಿದ್ದಲ್ಲ. ರಾಜಕೀಯದಲ್ಲಿ ಈ ರೀತಿಯ ಹೊಲಸು ಇರೋದು ಹೊಸತೂ ಅಲ್ಲ. ಆದರೆ, ಈಗಿನ ರಾಜಕಾರಣ ಮಾತ್ರ ಈ ರೀತಿಯ ಹೊಲಸಿನಲ್ಲಿ ಮಿಂದೆದ್ದಿದೆಯೋ ಎನ್ನುವ ರೀತಿ ಅನುಮಾನ ಎದ್ದಿದೆ. ಇದಕ್ಕೆ ಕಾರಣವಾಗಿರೋದು, ಸಚಿವ ಸುಧಾಕರ್ ನೀಡಿರುವ ಈ ಹೇಳಿಕೆ. ಸೀಡಿ ರಾಜ್ಯ ರಾಜಕಾರಣದಲ್ಲಿ ರಾಡಿ ಎಬ್ಬಿಸಿರುವಾಗಲೇ ಆರೋಗ್ಯ ಸಚಿವ ಸುಧಾಕರ್ ವಿಭಿನ್ನ ಹೇಳಿಕೆ ನೀಡಿ ಹುಬ್ಬೇರಿಸಿದ್ದಾರೆ. ಎಲ್ಲ 224 ಶಾಸಕರ ಬಗ್ಗೆಯೂ ತನಿಖೆಯಾಗಲಿ.. ನೀವ್ಯಾರೂ ಅನೈತಿಕ ಸಂಬಂಧ ಇಟ್ಟುಕೊಂಡಿಲ್ವಾ.. ತನಿಖೆಯಾದರೆ ಎಲ್ಲರ ಜಾತಕವೂ ಹೊರಬೀಳಲಿದೆ ಎನ್ನುವ ಮೂಲಕ ರಾಜಕಾರಣದಲ್ಲಿ ಹಾಸುಹೊಕ್ಕಾಗಿರುವ ಹೊಲಸಿನ ಬಗ್ಗೆ ಮಗುಮ್ಮಾಗಿಯೇ ಹೇಳಿಕೊಂಡಿದ್ದಾರೆ.
ಸುಧಾಕರ್ ಹೀಗೆ ಹೇಳಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ. ಅನೈತಿಕ ಸಂಬಂಧ, ಹೆಣ್ಣುಗಳ ಸಂಗ ರಾಜಕಾರಣ, ರಾಜಕೀಯದಿಂದ ಹೊರತಾದ ಶಬ್ದವೇ ಅಲ್ಲ. ಕೆಲವು ರಾಜಕಾರಣಿಗಳಿಗಂತೂ ಇದು ನಿತ್ಯ ಸತ್ಯದ ಸಂಗತಿ. ರಾಜಧಾನಿ ಬೆಂಗಳೂರಿಗೆ ಸೀಮಿತವೂ ಆಗಿಲ್ಲ. ಎಲ್ಲ ಕಡೆಯೂ ಮಾಮೂಲಿ ಅನ್ನುವಷ್ಟರ ಮಟ್ಟಿಗೆ ನೈತಿಕತೆಯ ಪರಿಧಿ ದಾಟಿ ಹೋಗಿದೆ. ಊರು ಕಡೆ ಹೀಗೆ ಮಾಡಿದರೆ ಏನಾದ್ರೂ ಗೊತ್ತಾದರೆ ಅನ್ನೋ ಭಯ ಇರುವ ನಾಟಿ ಕಡೆಯವರು ಬೆಂಗಳೂರಿನಲ್ಲಿ ಹೆಚ್ಚು ಮೈಮರೆಯುತ್ತಾರೆ. ಸಿಕ್ಕರೆ, ಒಂದು ಕೈ ನೋಡಿ ಬಿಡೋಣ ಎನ್ನುವ ಊಸರವಳ್ಳಿಗಳೇ ಈಗಿನ ರಾಜಕೀಯದಲ್ಲಿರೋದು ತಾನೇ..
ಕರಾವಳಿಯಿಂದ ತೊಡಗಿ ಉತ್ತರ ಕರ್ನಾಟಕದ ವರೆಗೂ ಆಯಾ ಸಂದರ್ಭಗಳಲ್ಲಿ ಸೀಡಿ ಇದೆಯೆಂದು ಹೆದರಿಸುವುದು, ಮಾಧ್ಯಮಕ್ಕೆ ಬಿಡುವುದಾಗಿ ಬ್ಲಾಕ್ ಮೇಲ್ ಮಾಡುವುದು ನಡೆದುಕೊಂಡೇ ಬಂದಿದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ರೀತಿಯ ಬ್ಲಾಕ್ ಮೇಲ್, ಸೀಡಿಗಳು ಕೋಟಿಗಳಲ್ಲಿ ಡೀಲ್ ಆಗಿ ಅಲ್ಲೇ ಕಮರಿ ಹೋಗುತ್ತವೆ. ಸದ್ದು ಮಾಡುವ ಮೊದಲೇ ಮುಚ್ಚಿ ಹೋಗುತ್ತವೆ. ಹಾಗೆಂದು ಹೆಣ್ಣುಗಳ ಸಂಗ, ರಾತ್ರಿ ಹಗಲೆನ್ನದೆ ಹೊರಳಾಟ ನಿಂತಿಲ್ಲ. ನಿಲ್ಲುವುದೂ ಇಲ್ಲ. ರಾಜಧಾನಿಯಿಂದ ತೊಡಗಿ ಆಯಾ ಶಾಸಕರ ಕ್ಷೇತ್ರದ ಪೇಟೆ, ಪಟ್ಟಣಗಳಲ್ಲಿ ಸರಾಗ ಎಂಬಂತೆ ನಡೆದುಬಂದಿದೆ. ಮೈಥುನ ಮನುಷ್ಯನ ಸಹಜ ಗುಣ ಎಂಬಂತೆ ಶಾಸಕರಾದಿಯಾಗಿ ರಾಜಕಾರಣದ ಗೋಡೆ ಸಂದುಗಳೂ ಇದೇ ಹಾದಿ ಹಿಡಿದಿದೆ. ಯಾಕಂದ್ರೆ, ರಾಜಕೀಯ ಪಕ್ಷಗಳಲ್ಲಿ ಉನ್ನತ ಹಂತಕ್ಕೇರಲು ಮೆಟ್ಟಿಲಾಗಿ, ಊರುಗೋಲಾಗಿ ಇಟ್ಟುಕೊಂಡವರೂ, ಬಳಸಿಕೊಂಡವರೂ ಇದ್ದಾರೆ.
ಹಾಗಂತ, ಸಿನಿಮಾ ರಂಗದಲ್ಲಿ ನಿರ್ದೇಶಕರು, ನಿರ್ಮಾಪಕರ ವಿರುದ್ಧ ಕೇಳಿಬರುವ ರೀತಿ ರಾಜಕಾರಣಿಗಳ ಬಗ್ಗೆ ಆರೋಪ ಕೇಳಿಬಂದಿದ್ದು ಕಡಿಮೆ. ಕಳೆದ ಬಾರಿ ಸಿನಿಮಾ ರಂಗದಲ್ಲಿ ಮೀ ಟೂ ಅಭಿಯಾನ ನಡೆದು ಹಲವರ ಜಾತಕ ಹೊರಬಿದ್ದಿದ್ದು ನಡೆದಿತ್ತು. ಇದೇ ಮೀ ಟೂ ಬೇರೆ ಕ್ಷೇತ್ರದಲ್ಲಿ ಅಷ್ಟೇನು ಪ್ರಭಾವ ಬೀರಲಿಲ್ಲ. ರಾಜಕೀಯದಲ್ಲಿ ಪಕ್ಷದ ಒಳಗಿದ್ದುಕೊಂಡೇ ಮಹಿಳಾ ಕಾರ್ಯಕರ್ತರನ್ನು ದುರ್ಬಳಕೆ ಮಾಡಿಕೊಳ್ಳುವುದು, ಮೇಲಿನ ಹುದ್ದೆಗೇರಿಸುವ ಆಮಿಷದಲ್ಲಿ ಲೈಂಗಿಕವಾಗಿ ಬಳಸಿಕೊಳ್ಳುವುದು ಈಗೀಗ ಸಹಜ ಎನ್ನುವ ರೀತಿ ನಡೆಯುತ್ತಲೇ ಬಂದಿದೆ. ರಾಜಕೀಯದಲ್ಲಿ ಕೆಲವು ಮಹಿಳೆಯರಂತೂ ಇಂಥವನ್ನು ದಾಟಿಕೊಂಡೇ ಮೇಲೆ ಬಂದಿರುತ್ತಾರೆ ಎನ್ನುವುದು ಕೂಡ ಅಷ್ಟೇ ಕಟುಸತ್ಯ.
ಪಕ್ಷದ ರಾಜ್ಯಾಧ್ಯಕ್ಷರು, ರಾಜ್ಯದ ಪ್ರಮುಖ ನಾಯಕರು ಪ್ರವಾಸ ಹೋದ ಸಂದರ್ಭದಲ್ಲಿ ಪಕ್ಷದಲ್ಲಿರುವ ಆಯಾ ಭಾಗದ ಮಹಿಳಾ ಕಾರ್ಯಕರ್ತರು, ನಾಯಕಿಯರು ಎಡತಾಕುವುದು, ತಾನು ಮಹಿಳೆ ಅನ್ನುವ ಮುಲಾಜೇ ಇಲ್ಲದೆ ಹುದ್ದೆಗಾಗಿ ಯಾವ ಹಂತಕ್ಕೂ ಇಳಿಯುವುದು ರಾಜಕೀಯದಲ್ಲಿ ಸಹಜ, ಮಾಮೂಲಿ ಸನ್ನಿವೇಶ ಅನ್ನುವಂತಿದೆ. ಇದೇ ವಿಚಾರ ಇಟ್ಟುಕೊಂಡು ರಾಜಕಾರಣದ ಸೂಳೆಗಾರಿಕೆ ಅನ್ನುವುದನ್ನು ಖ್ಯಾತ ಪತ್ರಕರ್ತ ರವಿ ಬೆಳಗೆರೆ ತಮ್ಮದೊಂದು ಪುಸ್ತಕದಲ್ಲಿ ಚೆನ್ನಾಗೇ ಕಟ್ಟಿಕೊಟ್ಟಿದ್ದರು.
ಈ ರೀತಿಯ ಹಾದರತನ, ಹೊಲಸಿನ ಕಾರುಬಾರು ರಾಜಕೀಯ, ಸಿನಿಮಾದಲ್ಲಿ ಮಾತ್ರ ಇರುವುದಲ್ಲ. ಅದೇ ವೃತ್ತಿಯಾಗಿಸಿಕೊಂಡವರ ರೀತಿ ಕೆಲವರು ಅದನ್ನೇ ಗುರಾಣಿಯಾಗಿಸ್ಕೊಂಡು ಮೇಲಿನ ಹಂತಕ್ಕೇರುವುದು, ಉನ್ನತ ಸ್ಥಾನಕ್ಕೇರಲು ಅದನ್ನು ಮೆಟ್ಟಿಲಾಗಿಸುವುದು, ಉಳ್ಳವರು ಈ ರೀತಿಯ ಹಾದರತನ ಬಯಸಿ ತನಗಿಂತ ಕೆಳಗಿನವರನ್ನು ಮೇಲಕ್ಕೇರಿಸುವುದು ನಡೆದುಬಂದಿದೆ. ಮಾಧ್ಯಮ ಕ್ಷೇತ್ರವನ್ನೂ ಒಳಗೊಂಡಂತೆ ಅಧಿಕಾರಸ್ಥರ ವಲಯದಿಂದ ತೊಡಗಿ ಕೆಳತುದಿಯಿಂದ ಮೇಲಿನ ವರೆಗೂ ಸಮಾಜದ ಹಲವು ಸ್ತರಗಳಲ್ಲಿ ಈ ರೀತಿಯ ದೈನೇಸಿತನ ಸಹಜ ಸಾಮಾನ್ಯ ಅನ್ನುವಂತಾಗಿದೆ.
ರಾಜಕಾರಣದಲ್ಲಿ ಬೇರೆಲ್ಲ ಕ್ಷೇತ್ರಗಳಿಗಿಂದ ಈ ರೀತಿಯ ಹೊಲಸು ಹೆಚ್ಚು ಹಾಸುಹೊಕ್ಕಾಗಿದೆ ಎನ್ನುವುದಕ್ಕೆ ಅಲ್ಲಿರುವ ಅಧಿಕಾರ, ಹಣದ ಪ್ರಭಾವ, ಲಾಲಸೆಯೇ ಕಾರಣವಾಗಿರುತ್ತದೆ. ಎಲ್ಲೋ ಪರಿಚಯವಾಗೋ ಯುವತಿಯರು ಹಣಕ್ಕಾಗಿಯೇ ರಾಜಕಾರಣಿಗಳನ್ನು ಸುತ್ತಿಕೊಂಡರೆ, ಕೆಲವರು ಇದನ್ನೇ ಮುಂದಿಟ್ಟುಕೊಂಡು ಹಣ ಕೀಳುವುದನ್ನು ವೃತ್ತಿಯಾಗಿಸಿದವರೂ ಇದ್ದಾರೆ. ಇದಕ್ಕೆ ನಿದರ್ಶನ ಈಗಿನ ಸೀಡಿ ಲೇಡಿಯ ವೃತ್ತಾಂತ. ತನಿಖೆ, ದೂರು ಎಂದು ಅಧಿಕಾರಿಗಳು ಫೀಲ್ಡಿಗೆ ಇಳಿದ ಬಳಿಕ ಸೀಡಿ ಲೇಡಿಯೂ ಸೇರಿ ಅದರ ಹಿಂದಿದ್ದವರು ನಿಗೂಢವಾಗಿ ಕಾಣೆಯಾಗುತ್ತಾರೆ. ಅಧಿಕಾರಿಗಳು, ಪೊಲೀಸರ ಕೈಗೇ ಸಿಗದ ರೀತಿ ಅಡಗಿಕೊಳ್ಳುವುದಕ್ಕೂ ರಾಜಕೀಯ ಬಲದಿಂದಷ್ಟೇ ಸಾಧ್ಯ ಎನ್ನುವುದನ್ನೂ ನಾವು ಒಪ್ಪಿಕೊಳ್ಳಬೇಕಷ್ಟೆ.
ಇನ್ನು ರಾಜಕಾರಣಿಗಳಿಗೆ ಆಯಕಟ್ಟಿನ ಜಾಗದಲ್ಲಿ ಇಂಥವನ್ನು ಸಹಜ ಎಂಬಂತೆ ಪೂರೈಸಲು ಆತನ ಹಿಂದು ಮುಂದಿರುವ ಮಂದಿಯೇ ಸಹಕರಿಸುತ್ತಾರೆ. ಮಾಜಿ ಸಚಿವರೊಬ್ಬರ ಸೋದರನೊಬ್ಬ ಬಿಜೆಪಿ- ಕಾಂಗ್ರೆಸ್ ಎಂಬ ಭೇದ ಇಲ್ಲದೇ ರಾಜಕಾರಣಿಗಳಿಗೆ ಹರೆಯದ ಯುವತಿಯರನ್ನು ಸಪ್ಲೈ ಮಾಡುವುದನ್ನು ವೃತ್ತಿಯಾಗಿಸಿದ್ದು ಗುಟ್ಟಿನ ವಿಚಾರವೂ ಆಗುಳಿದಿಲ್ಲ. ಸಚಿವರ ಆಪ್ತರು, ಪಿಎಗಳು, ಗನ್ ಮ್ಯಾನ್ ಗಳು ಹೀಗೆ ಸದಾ ಜೊತೆಗೇ ಸುಳಿದಾಡುವ ಮಂದಿಗೆಲ್ಲ ಇದು ಸಹಜದ ಭ್ರಮಾಲೋಕ ಎನ್ನುವಂತೆ ಆಗಿಹೋಗಿದ್ದರಲ್ಲಿ ಅಚ್ಚರಿಯೂ ಇಲ್ಲ.
Karnataka’s Health Minister K Sudhakar on Wednesday created a political furore after he called for an investigation into the private lives of all 225 legislators to find out how many of them have had illicit or extra-marital relationships.
01-06-25 10:08 pm
HK News Desk
Tobacco Ban, Karnataka: ಸಾರ್ವಜನಿಕ ಸ್ಥಳಗಳಲ್ಲಿ...
01-06-25 09:37 pm
ಎಚ್ಎಂಟಿ ಅರಣ್ಯ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ;...
01-06-25 08:33 pm
Karnataka Traffic Police New Rules: ಸಕಾರಣವಿಲ್...
01-06-25 11:50 am
Siddaramaiah, HD Kumaraswamy: ಸಿದ್ದರಾಮಯ್ಯನವರೇ...
31-05-25 09:41 pm
01-06-25 12:35 pm
HK News Desk
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
Gujrath, ATS: ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ...
26-05-25 09:50 pm
ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ ಸೂಕ್ಷ್ಮ ಮಾಹಿತಿ...
26-05-25 08:33 pm
01-06-25 12:32 pm
Mangalore Correspondent
Mangalore Congress, Notice: ಪಕ್ಷದ ಸೂಚನೆ ಮೀರಿ...
01-06-25 11:59 am
ಕೋಮು ಪ್ರಚೋದಕ ಭಾಷಣಕ್ಕೆ ಕಠಿಣ ಕ್ರಮಕ್ಕೆ ಮುಸ್ಲಿಂ ನ...
31-05-25 11:14 pm
Mangalore Police Chief Sudheer Kumar Reddy, V...
31-05-25 10:57 pm
Mangalore Rain, Ullal, Flood, Death: ಗುಡ್ಡ ಕು...
31-05-25 07:18 pm
01-06-25 11:02 pm
Mangalore Correspondent
Belagavi Rape, Arrest, Crime: ಬೆಳಗಾವಿಯಲ್ಲಿ ಮತ...
01-06-25 07:56 pm
Bantwal Crime, Mangalore, Stone Petling: ಮುಸ್...
31-05-25 10:47 pm
Mangalore crime, Threat: ಲಿಸ್ಟ್ ರೆಡಿ ಮಾಡಿದ್ದೇ...
29-05-25 11:04 pm
Mangalore Crime, Konaje: ಮೊಂಟೆಪದವು ಕೆರೆಯಲ್ಲಿ...
29-05-25 07:59 pm