ಮಧ್ಯ ವಯಸ್ಕರಲ್ಲಿ ಮರೆವು ಹೆಚ್ಚಾಗಲು ಏನು ಕಾರಣ?

15-08-20 10:12 pm       Headline Karnataka News Network   ಡಾಕ್ಟರ್ಸ್ ನೋಟ್

ಕೆಲವೊಂದು ಸಂದರ್ಭಗಳಲ್ಲಿ ಮಾನಸಿಕವಾಗಿ ಎದುರಾಗುವ ಆತಂಕ, ಖಿನ್ನತೆ ಮತ್ತು ಒತ್ತಡ ಇಂದು ಯುವಜನತೆಯಲ್ಲಿ ನೆನಪಿನ ಶಕ್ತಿಯನ್ನು ಕುಂದಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ.

ನೆನಪಿನ ಶಕ್ತಿ ಎನ್ನುವುದು ನಮಗೆ ದೇವರು ಕೊಟ್ಟ ವರ. ಸಕಲ ಜೀವರಾಶಿಗಳಲ್ಲಿ ಪ್ರಾಣಿಗಳು ಹಾಗೂ ಮನುಷ್ಯರಿಗೆ ನೆನಪಿನ ಶಕ್ತಿ ಒಂದು ವರದಾನವಾಗಿ ಬಂದಿರುತ್ತದೆ. ಪ್ರಾಣಿಗಳಿಗಿಂತ ಹೆಚ್ಚು ಬುದ್ಧಿ ಶಕ್ತಿ ಮತ್ತು ನೆನಪಿನ ಶಕ್ತಿ ಮನುಷ್ಯರಿಗೆ ಇರುವುದು ಖಂಡಿತ ಆಶ್ಚರ್ಯಕರ.

ಹಾಗಾಗಿ ಮನುಷ್ಯ ಇಂದು ಎಲ್ಲಾ ಜೀವರಾಶಿಗಳಿಗಿಂತ ಎಲ್ಲಾ ವಿಚಾರದಲ್ಲೂ ತುಂಬಾ ಮುಂದೆ ಇದ್ದಾನೆ. ಆದರೂ ಕೂಡ ಕೆಲವೊಮ್ಮೆ ತನ್ನ ಬುದ್ಧಿ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯ ಆಗದೇ ಇರುವಂತಹ ವಾತಾವರಣ ನಿರ್ಮಾಣ ಆಗುತ್ತದೆ. ಇದಕ್ಕೆ ಕಾರಣ ಆತನ ಮನಸ್ಸಿನ ಸದ್ಯದ ಪರಿಸ್ಥಿತಿಯೂ ಆಗಿರಬಹುದು.

ಮರೆವು ಹೆಚ್ಚಾಗಲು ಕಾರಣಗಳು

  • ನೆನಪಿನ ಶಕ್ತಿ ಹಾಳಾಗಲು ಅಥವಾ ಇದ್ದಕ್ಕಿದ್ದಂತೆ ಮರೆವು ಹೆಚ್ಚಾಗಲು ಅಲ್ಜಿಮರ್ ಕಾಯಿಲೆಯೇ ಬರಬೇಕು ಎಂದೇನಿಲ್ಲ. ನಾವೇ ನಮ್ಮ ಜೀವನ ಶೈಲಿಯಲ್ಲಿ ತಂದುಕೊಳ್ಳುವ ಕೆಲವೊಂದು ಬದಲಾವಣೆಗಳು ನಮ್ಮನ್ನು ಆರೋಗ್ಯದ ವಿಚಾರದಲ್ಲಿ ಹಾಳಾಗುವಂತೆ ಮಾಡುತ್ತವೆ.
  • ಮಾನಸಿಕ ಆರೋಗ್ಯದ ಮೇಲೂ ಕೂಡ ಇದು ತುಂಬಾ ಕೆಟ್ಟ ಪರಿಣಾಮ ಬೀರಿ ಚಿಕ್ಕ ವಯಸ್ಸಿಗೆ ಮರೆವು ಹೆಚ್ಚಾಗುವಂತೆ ಮಾಡುತ್ತದೆ.ಅಂತಹ ಕೆಲವೊಂದು ಜೀವನ ಶೈಲಿಯಲ್ಲಿನ ಬದಲಾವಣೆಗಳು ಯಾವುವು ಮತ್ತು ಅವುಗಳ ಅಡ್ಡ ಪರಿಣಾಮಗಳು ಏನು ಎಂಬುದನ್ನು ಈಗ ನೋಡೋಣ.

ನಿದ್ರಾಹೀನತೆ

  • ಈಗಿನ ಯುವಜನತೆಯ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ರಾತ್ರಿ 12 ಗಂಟೆ, 1 ಗಂಟೆಯವರೆಗೂ ಪುಸ್ತಕ ಹಿಡಿದು ಕುಳಿತಿರುತ್ತಾರೆ ಅಥವಾ ಕೆಲಸ ಮಾಡುತ್ತಿರುತ್ತಾರೆ ಇಲ್ಲವೆಂದರೆ ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಿರುತ್ತಾರೆ.
  • ಬೆಳಗ್ಗೆ ಮತ್ತೆ 6 ಗಂಟೆಗೆ ಸರಿಯಾಗಿ ಏಳುವ ಅನಿವಾರ್ಯತೆ ಇರುತ್ತದೆ. ಹೀಗಾಗಿ ಒಂದು ದಿನಕ್ಕೆ ಅವರು ನಿದ್ರೆ ಮಾಡುವುದೇ ಕೇವಲ 4 ರಿಂದ 5 ಗಂಟೆಗಳು ಮಾತ್ರ.
  • ಪ್ರತಿ ದಿನವೂ ಇದೇ ಅಭ್ಯಾಸ ಮುಂದುವರೆಯುವುದರಿಂದ ಇದು ನಿದ್ರಾಹೀನತೆಗೆ ಕಾರಣವಾಗಿ ಮೆದುಳಿಗೆ ಸರಿಯಾದ ವಿಶ್ರಾಂತಿ ಸಿಗದೇ ಕೆಲವು ಬದಲಾವಣೆಗಳು ಉಂಟಾಗಿ ಮಾನಸಿಕ ಖಿನ್ನತೆ, ಆತಂಕ ಎದುರಾಗುವುದರ ಜೊತೆಗೆ ಜ್ಞಾಪಕ ಶಕ್ತಿ ಕೂಡ ಕುಂದಿ ಹೋಗುತ್ತದೆ.

ಕೆಲವು ಔಷಧಿಗಳ ಅಡ್ಡ ಪರಿಣಾಮಗಳು

  • ಅಧಿಕ ರಕ್ತದ ಒತ್ತಡದ ಸಮಸ್ಯೆಯನ್ನು ಹೊಂದಿದ ಜನರು ತಮ್ಮ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿಕೊಳ್ಳಲು ತೆಗೆದುಕೊಳ್ಳುವ ಔಷಧಿಗಳು ಕೆಲವೊಮ್ಮೆ ಮಾನಸಿಕವಾಗಿ ವ್ಯತಿರಿಕ್ತ ಪರಿಣಾಮ ಬೀರುತ್ತವೆ.
  • ಇದು ಸಾಮಾನ್ಯ ಸಂದರ್ಭಗಳಲ್ಲೂ ಕೂಡ ಹೆಚ್ಚು ಗೊಂದಲಮಯ ವಾತಾವರಣ ನಿರ್ಮಾಣ ಮಾಡಿದಂತೆ ಕಾಣುತ್ತದೆ. ಯಾವುದೇ ಒಂದು ನಿರ್ದಿಷ್ಟ ವಸ್ತುವಿನ ಮೇಲೆ ಅಥವಾ ವಿಷಯದ ಮೇಲೆ ಸರಿಯಾಗಿ ಗಮನ ವಹಿಸಲು ಸಾಧ್ಯ ಆಗುವುದಿಲ್ಲ.
  • ಈ ಸಂದರ್ಭದಲ್ಲಿ ಅರಿವಿನ ಸಮಸ್ಯೆ ಕೂಡ ಎದ್ದು ಕಾಣುತ್ತದೆ. ಹಾಗಾಗಿ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವವರು ವೈದ್ಯರಿಗೆ ಮೊದಲು ವಿಷಯ ತಿಳಿಸಿ ಪರಿಹಾರವನ್ನು ಕೇಳಿ.

ಥೈರಾಯ್ಡ್ ಸಮಸ್ಯೆ

  • ನಮ್ಮ ದೇಹದಲ್ಲಿ ಥೈರಾಯ್ಡ್ ಗ್ರಂಥಿ ನಮ್ಮ ದೇಹದ ಸಂಪೂರ್ಣ ಬೆಳವಣಿಗೆಯಲ್ಲಿ ತನ್ನ ಪ್ರಭಾವ ಬೀರುತ್ತದೆ. ಅಂದರೆ ಕೆಲವೊಂದು ನಿರ್ದಿಷ್ಟ ಹಾರ್ಮೋನುಗಳನ್ನು ನಮ್ಮ ದೇಹದ ರಕ್ತದ ಹರಿವಿಗೆ ಬಿಡುಗಡೆ ಮಾಡಿ ಮೆಟಬಾಲಿಸಂ, ದೈಹಿಕ ಅಭಿವೃದ್ಧಿ ಇತ್ಯಾದಿಗಳಲ್ಲಿ ತನ್ನ ಕೆಲಸವನ್ನು ಮಾಡುತ್ತಿರುತ್ತದೆ.
  • ಒಂದು ವೇಳೆ ಇದರ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ತೊಂದರೆ ಎದುರಾದರೂ ಇದು ನಮ್ಮ ಮಾನಸಿಕ ಆರೋಗ್ಯದ ಮೇಲೆ ವಿರುದ್ಧ ರೀತಿಯ ಪರಿಣಾಮ ಬೀರುತ್ತದೆ. ಕೆಲವರಿಗೆ ನೆನಪಿನ ಶಕ್ತಿಯೇ ಹೊರಟು ಹೋಗುವ ಸಾಧ್ಯತೆ ಇರುತ್ತದೆ.
  • ಹಾಗಾಗಿ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರು ಒಂದು ಸಣ್ಣ ರಕ್ತ ಪರೀಕ್ಷೆ ಮಾಡಿಸಿ ತಮ್ಮ ದೇಹದಲ್ಲಿ ಥೈರಾಯ್ಡ್ ಗ್ರಂಥಿ ಸರಿಯಾಗಿ ಕೆಲಸ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದು.

ಆಲ್ಕೋಹಾಲ್ ಸೇವನೆ

  • ಇತ್ತೀಚಿಗೆ ಆಲ್ಕೋಹಾಲ್ ಸೇವನೆ ಯುವ ಮಂದಿಯಲ್ಲಿ ಒಂದು ಕೆಟ್ಟ ಅಭ್ಯಾಸವಾಗಿ ರೂಪುಗೊಂಡಿದೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಇಲ್ಲಿ ಸಾಬೀತಾಗುತ್ತದೆ.
  • ಏಕೆಂದರೆ ಯಥೇಚ್ಛವಾಗಿ ಸೇವನೆ ಮಾಡುವ ಮದ್ಯ, ಮನಸ್ಸಿನ ಹತೋಟಿ ಕಳೆದುಕೊಳ್ಳುವಂತೆ ಮಾಡುತ್ತದೆ. ಈ ಸಂದರ್ಭದಲ್ಲಿ ಅರಿವಿನ ಸಾಮರ್ಥ್ಯ ಮತ್ತು ಜ್ಞಾಪಕ ಶಕ್ತಿ ಕೂಡ ಇಲ್ಲವಾಗುತ್ತದೆ.
  • ಹೀಗಾಗಿ ಮದ್ಯಪಾನಕ್ಕೆ ದಾಸರಾಗಿರುವವರು ತಮ್ಮ ಮಾನಸಿಕ ಆರೋಗ್ಯವನ್ನು ಸಹಜ ಸ್ಥಿತಿಗೆ ಹೊಂದಿಸಿಕೊಳ್ಳಲು ಸಾಧ್ಯವಾದಷ್ಟು ತಮ್ಮ ಮದ್ಯಪಾನದ ಸೇವನೆಯನ್ನು ಮಿತಿಯಲ್ಲಿ ಇಟ್ಟುಕೊಂಡರೆ ಒಳ್ಳೆಯದು.

ಮಾನಸಿಕ ಒತ್ತಡ ಮತ್ತು ಖಿನ್ನತೆ

  • ಮಾನಸಿಕವಾಗಿ ಕುಗ್ಗಿ ಹೋಗಲು ಅಥವಾ ನೆನಪಿನ ಶಕ್ತಿಯನ್ನು ಕಳೆದುಕೊಳ್ಳಲು ನಿರಂತರವಾಗಿ ಎದುರಾಗುವ ಮಾನಸಿಕ ಆತಂಕ, ಒತ್ತಡ ಮತ್ತು ಮಾನಸಿಕ ಖಿನ್ನತೆಯೂ ಕೂಡ ಕಾರಣ ಎನಿಸಬಹುದು.
  • ಆದ್ದರಿಂದ ನಿಮ್ಮ ಮನಸ್ಸಿಗೆ ಘಾಸಿ ಮಾಡುವ ವಿಚಾರಗಳಿಂದ ಆದಷ್ಟು ದೂರವಿರಿ. ನಿಮ್ಮ ಗಮನವನ್ನು ಬೇರೆಡೆಗೆ ಹರಿಸುವಂತೆ ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ.
  • ಜೀವನ ಎಂದ ಮೇಲೆ ಕಷ್ಟಗಳು, ನೋವುಗಳು ಇದ್ದದ್ದೇ. ಆದರೆ ಸ್ವಲ್ಪ ಸಮಯ ನೀವು ತಾಳ್ಮೆ ವಹಿಸಿ ಮುಂದುವರೆದರೆ ನಿಮ್ಮ ಸಮಸ್ಯೆಗೆ ಖಂಡಿತ ಒಂದಲ್ಲಾ ಒಂದು ಪರಿಹಾರ ಸಿಕ್ಕೇ ಸಿಗುತ್ತದೆ. ಹಾಗಾಗಿ ಮಾನಸಿಕವಾಗಿ ಎಂದಿಗೂ ಧೈರ್ಯಗೆಡಬೇಡಿ.

ಬೇಸರ ಹಾಗೂ ನಿರುತ್ಸಾಹ

  • ಕೆಲವೊಂದು ವಿಚಾರಗಳು ನಮಗೆ ವಿಪರೀತ ಮಾನಸಿಕ ಯಾತನೆಯನ್ನು ಉಂಟು ಮಾಡಿ ಯಾವುದೇ ವಿಷಯದ ಮೇಲೆ ನಮ್ಮ ಉತ್ಸಾಹವೇ ಹೊರಟು ಹೋಗುವಂತೆ ಮಾಡುತ್ತವೆ. ಮತ್ತೊಮ್ಮೆ ಅಂತಹ ವಿಚಾರ ನಮ್ಮ ಮುಂದೆ ಬಂದರೂ ಕೂಡ ಅದರ ಬಗ್ಗೆ ಕಾಳಜಿ ವಹಿಸಲು ಮನಸ್ಸು ಬರುವುದಿಲ್ಲ.
  • ಈ ಸಮಯದಲ್ಲಿ ಎಂದಿಗೂ ನನ್ನ ಮುಂದೆ ಇದೊಂದು ವಿಷಯ ಬರದಿರಲಿ ಎನ್ನುವ ಹಂತಕ್ಕೆ ಬಂದು ಬಿಟ್ಟಿರುತ್ತೇವೆ. ಇಂತಹ ಸಮಯದಲ್ಲಿ ಮತ್ತೊಮ್ಮೆ ನಮಗೆ ಬೇಡವಾದ ವಸ್ತು ಅಥವಾ ವಿಷಯ ನಮ್ಮೆದುರಿಗೆ ಬಂದಾಗ ಮಾನಸಿಕವಾಗಿ ನಮಗೆ ತುಂಬಾ ಹಿಂಸೆಯಾಗುತ್ತದೆ.
  • ಇದು ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ನಮ್ಮ ಮನಸ್ಸನ್ನು ಕುಗ್ಗಿಸುತ್ತದೆ ಮತ್ತು ನೆನಪಿನ ಶಕ್ತಿಯನ್ನು ಕಡಿಮೆ ಮಾಡುತ್ತದೆ.