ಬಸ್ಸಿನಿಂದ ಬಿದ್ದು ಉಳ್ಳಾಲದ ವಿದ್ಯಾರ್ಥಿ ಸಾವು ; ನಿರ್ಲಕ್ಷ್ಯದ ಚಾಲನೆಯೇ ಕಾರಣ, ಸಿಟಿ ಬಸ್ ಚಾಲಕ, ನಿರ್ವಾಹಕನ ಬಂಧನ 

19-09-22 02:43 pm       Mangalore Correspondent   ಕರಾವಳಿ

ಪಿಯುಸಿ ವಿದ್ಯಾರ್ಥಿಯೊಬ್ಬ ಬಸ್ಸಿನಿಂದ ಬಿದ್ದು ತಲೆಗೆ ಗಾಯಗೊಂಡು ಮೃತಪಟ್ಟ ಘಟನೆಗೆ ಸಂಬಂಧಿಸಿ ಪೊಲೀಸರು ಬಸ್ಸಿನ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಕೇಸು ದಾಖಲಿಸಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ.

ಮಂಗಳೂರು, ಸೆ.19: ಪಿಯುಸಿ ವಿದ್ಯಾರ್ಥಿಯೊಬ್ಬ ಬಸ್ಸಿನಿಂದ ಬಿದ್ದು ತಲೆಗೆ ಗಾಯಗೊಂಡು ಮೃತಪಟ್ಟ ಘಟನೆಗೆ ಸಂಬಂಧಿಸಿ ಪೊಲೀಸರು ಬಸ್ಸಿನ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಕೇಸು ದಾಖಲಿಸಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ.

ಸೆ.7ರಂದು ಉಳ್ಳಾಲದ ಮಾಸ್ತಿಕಟ್ಟೆಯಿಂದ ಬರುತ್ತಿದ್ದ ಯಶರಾಜ್(16) ಎಂಬ ವಿದ್ಯಾರ್ಥಿ 44 ಡಿ ನಂಬರಿನ ಖಾಸಗಿ ಬಸ್ಸಿನಲ್ಲಿ ಉಳ್ಳಾಲದಿಂದ ಮಂಗಳೂರಿಗೆ ಕಾಲೇಜಿಗೆ ಬರುತ್ತಿದ್ದ. ಈ ವೇಳೆ, ಬಸ್ಸಿನಲ್ಲಿ ರಶ್ ಇದ್ದುದರಿಂದ ಎದುರು ಭಾಗದ ಮೆಟ್ಟಿಲಿನಲ್ಲಿ ನೇತಾಡುತ್ತಿದ್ದ ಯಶರಾಜ್, ಬಸ್ ಸಾಗುತ್ತಿದ್ದಾಗಲೇ ಉಳ್ಳಾಲದ ನೇತ್ರಾವತಿ ಸೇತುವೆಯ ಬಳಿ ರಸ್ತೆಗೆ ಎಸೆಯಲ್ಪಟ್ಟಿದ್ದ. ಬಸ್ಸಿನ ಚಾಲಕನ ಅತಿ ಧಾವಂತ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ವಿದ್ಯಾರ್ಥಿ ಹೊರಕ್ಕೆಸೆಯಲ್ಪಟ್ಟಿದ್ದು, ಈ ಬಗ್ಗೆ ಮೃತ ಹುಡುಗನ ತಾಯಿ ಪೊಲೀಸ್ ದೂರು ನೀಡಿದ್ದಾರೆ.

ಪೊಲೀಸರು ಬಸ್ಸಿನ ಚಾಲಕ ಕುಪ್ಪೆಪದವು ನಿವಾಸಿ ಕಾರ್ತಿಕ್ ಆರ್. ಶೆಟ್ಟಿ(30) ಮತ್ತು ಬಸ್ಸಿನ ನಿರ್ವಾಹಕ ಅಂಬ್ಲಮೊಗರು ನಿವಾಸಿ ದಂಶೀರ್ (30) ಎಂಬವರನ್ನು ಬಂಧಿಸಿದ್ದಾರೆ. ಇವರನ್ನು ಸೆ.18ರಂದು ಉಳ್ಳಾಲ ಬಸ್ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದು ಕೋರ್ಟಿಗೆ ಹಾಜರು ಪಡಿಸಿದ್ದಾರೆ. ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಮಾನವ ಜೀವಕ್ಕೆ ಹಾನಿಯಾಗುವಂತೆ ಬಸ್ ಚಲಾಯಿಸಿದ್ದರಿಂದ ಮತ್ತು ವಿದ್ಯಾರ್ಥಿಗಳು ಬಸ್ಸಿನ ಮೆಟ್ಟಿಲಲ್ಲಿ ನಿಂತು ಪ್ರಯಾಣಿಸಲು ಅವಕಾಶ ಕೊಟ್ಟು ನಿರ್ವಾಹಕ ನಿರ್ಲಕ್ಷಿಸಿದ್ದರಿಂದಾಗಿ ಇಬ್ಬರ ವಿರುದ್ಧ ಕೊಲೆಗೆ ಆಸ್ಪದ ನೀಡಬಲ್ಲ ಅಪರಾಧ ಎಸಗಿದ್ದಾರೆಂದು ಸೆಕ್ಷನ್ 304 ಅಡಿ ಮತ್ತು 279, 336 ಅಡಿ ಕಂಕನಾಡಿ ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆಗೆ ಬಿದ್ದು ತಲೆಯ ಎಡಭಾಗಕ್ಕೆ ತೀವ್ರ ಗಾಯಗೊಂಡಿದ್ದ ಯಶರಾಜ್ ಸೆ.13ರಂದು ಮೃತಪಟ್ಟಿದ್ದು ಅದಕ್ಕೂ ಮೊದಲು ಮೆದುಳು ನಿಷ್ಕ್ರಿಯ ಆಗಿದ್ದರಿಂದ ಕುಟುಂಬಸ್ಥರು ಹುಡುಗನ ಅಂಗಾಂಗ ದಾನ ಮಾಡಿದ್ದಾರೆ.

A bus driver and conductor were arrested in connection to the death of 16–year-old Yashraj Sunday September 18. The arrested has been identified as driver Karthik R Shetty (30), a resident of Kuppepadav and conductor Dhamsheer (30), a resident of Amblamogaru.