ಶೈಕ್ಷಣಿಕ ಕಾರ್ಯಾಗಾರದಲ್ಲಿ ಮತಬೋಧನೆ ಆರೋಪ ; ವಿದ್ಯಾರ್ಥಿಗಳನ್ನು ಕಳಿಸಿಕೊಟ್ಟಿದ್ದ ಶಿಕ್ಷಕನಿಗೆ ಅಮಾನತು ಶಿಕ್ಷೆ

22-02-23 09:12 pm       Mangalore Correspondent   ಕರಾವಳಿ

ಶಾಲಾಡಳಿತದ ಅನುಮತಿ ಪಡೆಯದೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಮುಸ್ಲಿಂ ಸಂಘಟನೆ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರಕ್ಕೆ ಕಳುಹಿಸಿಕೊಟ್ಟಿದ್ದ ಆರೋಪದಲ್ಲಿ ವಿಟ್ಲದ ಅಡ್ಯನಡ್ಕ ಜನತಾ ಶಾಲೆಯ ಮುಖ್ಯ ಶಿಕ್ಷಕ ಟಿ. ಆರ್. ನಾಯ್ಕ್ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ.

ಬಂಟ್ವಾಳ, ಫೆ.22: ಶಾಲಾಡಳಿತದ ಅನುಮತಿ ಪಡೆಯದೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಮುಸ್ಲಿಂ ಸಂಘಟನೆ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರಕ್ಕೆ ಕಳುಹಿಸಿಕೊಟ್ಟಿದ್ದ ಆರೋಪದಲ್ಲಿ ವಿಟ್ಲದ ಅಡ್ಯನಡ್ಕ ಜನತಾ ಶಾಲೆಯ ಮುಖ್ಯ ಶಿಕ್ಷಕ ಟಿ. ಆರ್ ನಾಯ್ಕ್ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ.

ಫ.18ರಂದು ಶಿವರಾತ್ರಿಯ ದಿನ ಶಾಲೆಗೆ ರಜೆ ಇದ್ದರೂ, ಅಡ್ಯನಡ್ಕ ಬಳಿಯ ಖಾಸಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳನ್ನು ತೆರಳುವಂತೆ ಶಿಕ್ಷಕರು ಸೂಚಿಸಿದ್ದರು ಎನ್ನಲಾಗಿದೆ. ಮುಸ್ಲಿಂ ಯಂಗ್ ಮನ್ ಅಸೋಸಿಯೇಶನ್ಸ್ ಕಾರ್ಯಾಗಾರ ನಡೆಸಿದ್ದರು. ಕಾರ್ಯಾಗಾರದಲ್ಲಿ ಒಬ್ಬನೇ ದೇವರು, ಪರೀಕ್ಷೆ ಪಾಸ್ ಆಗಲು ಚೆನ್ನಾಗಿ ಓದಬೇಕು, ದೇವರನ್ನು ಬೇಡಿಕೊಂಡರೆ ಪಾಸ್ ಆಗುವುದಿಲ್ಲ ಇತ್ಯಾದಿ ಮಾತುಗಳನ್ನು ಹೇಳಿದ್ದಾಗಿ ವಿದ್ಯಾರ್ಥಿಗಳು ಹಿಂದು ಸಂಘಟನೆಯ ಗಮನಕ್ಕೆ ತಂದಿದ್ದರು.

ಅದರಂತೆ, ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ, ಹಿಂದು ವಿದ್ಯಾರ್ಥಿಗಳನ್ನು ಹೊರಕ್ಕೆ ಕಳುಹಿಸಿದ್ದರು. ಅಲ್ಲದೆ, ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿ ಪ್ರಕರಣ ದಾಖಲಿಸುವಂತೆ ಒತ್ತಡ ಹೇರಿದ್ದರು. ಈ ಬಗ್ಗೆ ಪೋಷಕರೊಬ್ಬರ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿಕ್ಷಕ ಟಿ. ಆರ್ ನಾಯ್ಕ್, ಕಾರ್ಯಾಗಾರ ಆಯೋಜಿಸಿದ್ದ ರಫೀಕ್ ಮಾಸ್ಟರ್ ಆತೂರು ಮತ್ತು ಮುಸ್ಲಿಂ ಯಂಗ್ ಮನ್ ಅಸೋಸಿಯೇಶನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಶಿಕ್ಷಕನಿಗೆ ಹಿಂದು ಸಂಘಟನೆಯ ಬೆದರಿಕೆ ಇದ್ದುದರಿಂದ ಅವರನ್ನು ವಿಟ್ಲ ಠಾಣೆಗೆ ಕರೆಸಿ ಆ ದಿನ ರಾತ್ರಿಯಿಡೀ ಇರಿಸಿಕೊಳ್ಳಲಾಗಿತ್ತು. ಮರುದಿನ ಪೊಲೀಸರು ಬಿಟ್ಟು ಕಳುಹಿಸಿದ್ದರು. ಶೈಕ್ಷಣಿಕ ಕಾರ್ಯಾಗಾರಕ್ಕೆ ನುಗ್ಗಿ ಹಿಂದು ಸಂಘಟನೆಯ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆಂದು ಘಟನೆ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಿದ್ದ ಶಾಸಕ ಯುಟಿ ಖಾದರ್, ಹಿಂದು ಸಂಘಟನೆ ಕಾರ್ಯಕರ್ತರು ಗೂಂಡಾಗಾರಿ ನಡೆಸಿದ್ದಾರೆಂದು ಆರೋಪಿಸಿದ್ದರು. ಅಧಿವೇಶನದಲ್ಲಿ ಖಾದರ್ ರಾಜ್ಯ ಸರಕಾರದ ವಿರುದ್ಧ ಪ್ರಶ್ನೆ ಮಾಡಿದ್ದರಿಂದ ಶಿಕ್ಷಣ ಸಚಿವ ಬಿಸಿ ನಾಗೇಶ್, ಆರೋಪಿತ ಶಿಕ್ಷಕನನ್ನು ಅಮಾನತು ಮಾಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣಾಧಿಕಾರಿಗಳ ಸೂಚನೆಯಂತೆ, ಅನುದಾನಿತ ಜನತಾ ಪ್ರೌಢಶಾಲೆಯ ಆಡಳಿತ ಕಾರ್ಯದರ್ಶಿ ಆರೋಪಿತ ಶಿಕ್ಷಕನನ್ನು ಅಮಾನತುಗೊಳಿಸಿ ಬುಧವಾರ ಆದೇಶ ಮಾಡಿದ್ದಾರೆ.

ಶೈಕ್ಷಣಿಕ ಕಾರ್ಯಾಗಾರ ನೆಪದಲ್ಲಿ ಶಾಲಾ ಮಕ್ಕಳಿಗೆ ಇಸ್ಲಾಂ ಬೋಧನೆ ; ಹಿಂದು ಸಂಘಟನೆ ಕಾರ್ಯಕರ್ತರ ಅಡ್ಡಿ, ಕಾರ್ಯಕ್ರಮ ಸ್ಥಗಿತ 

Mangalore religious teaching during an educational program at Vitla school, Headmaster Ravindra Nayak suspended. A private high school head master and two others were booked for alleged religious teaching at Adyanadka under Vitla police station limits in Dakshina Kannada district