Mangalore BY Vijayendra, BJP: ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಅಧಿಕಾರಿಗಳನ್ನು ಬಲಿ ಕೊಡುತ್ತಿದ್ದಾರೆ, ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ಕೋಮು ಬಣ್ಣ ಹಚ್ಚುತ್ತಿದ್ದಾರೆ ; ವಿಜಯೇಂದ್ರ

09-06-25 09:56 pm       Mangalore Correspondent   ಕರಾವಳಿ

ರಾಜ್ಯದಲ್ಲಿ 800ಕ್ಕೂ ಹೆಚ್ಚು ರೇಪ್ ಕೇಸ್ ಆಗಿದೆ. ಬೆಂಗಳೂರಿನಲ್ಲಿ ಕ್ರಿಕೆಟಿಗರ ವಿಜಯೋತ್ಸವ ಮಾಡಿ 11 ಮಂದಿ ಸಾವು ಕಂಡಿದ್ದಾರೆ.

ಮಂಗಳೂರು, ಜೂನ್.9: ರಾಜ್ಯದಲ್ಲಿ 800ಕ್ಕೂ ಹೆಚ್ಚು ರೇಪ್ ಕೇಸ್ ಆಗಿದೆ. ಬೆಂಗಳೂರಿನಲ್ಲಿ ಕ್ರಿಕೆಟಿಗರ ವಿಜಯೋತ್ಸವ ಮಾಡಿ 11 ಮಂದಿ ಸಾವು ಕಂಡಿದ್ದಾರೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯೇ ಕುಸಿದು ಹೋಗಿದ್ದು, ರಾಜಕೀಯ ಆಡಳಿತ ವಿಫಲಗೊಂಡಿದ್ದಕ್ಕೆ ಅಧಿಕಾರಿಗಳನ್ನು ಬಲಿ ಹಾಕುತ್ತಿದ್ದಾರೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಒಂದೇ ರೀತಿ ಮಾಡಿದ್ದಾರೆ. ಅಲ್ಲಿ 11 ಪೊಲೀಸ್ ಅಧಿಕಾರಿಗಳನ್ನು ಬಲಿ ಹಾಕಿದ್ದರೆ, ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಫೇಲಾಗಿದ್ದಕ್ಕೆ ಇಬ್ಬರು ಅಧಿಕಾರಿಗಳನ್ನು ವರ್ಗ ಮಾಡಿದ್ದಾರೆ. ಅಲ್ಪಸಂಖ್ಯಾತರ ಖುಷಿ ಪಡಿಸಲು ಎಲ್ಲ ಪ್ರಕರಣಗಳಲ್ಲಿಯೂ ಕಾಂಗ್ರೆಸ್ ಸರಕಾರ ಹಿಂದು- ಮುಸ್ಲಿಂ ಕೋಮು ಬಣ್ಣ ಹಚ್ಚಲು ತೊಡಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.

ಕೋಮು ವೈಷಮ್ಯದ ಕೊಲೆ ಸರಣಿ ಮತ್ತು ಕಾನೂನು ಸುವ್ಯವಸ್ಥೆ ಕುಸಿದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ನಿಯೋಗದ ಜೊತೆಗೆ ಮಂಗಳೂರಿಗೆ ಆಗಮಿಸಿದ ವಿಜಯೇಂದ್ರ, ಕಾನೂನು ಸುವ್ಯವಸ್ಥೆ ನೆಪದಲ್ಲಿ ಪೊಲೀಸರ ಮೂಲಕ ಗೂಂಡಾಗಿರಿ ನಡೆಸ್ತಿದ್ದು, ಸುಳ್ಯ, ಪುತ್ತೂರಿನಲ್ಲಿ ರಾತ್ರಿ 3 ಗಂಟೆಗೆ ನಮ್ಮ ಕಾರ್ಯಕರ್ತರ ಮನೆಗಳಿಗೆ ಪೊಲೀಸರು ತೆರಳಿ ಬಾಗಿಲು ತಟ್ಟುವ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರು ಮನೆಯಲ್ಲಿ ಇಲ್ಲದೇ ಇದ್ದರೆ ರಿವಾಲ್ವರ್ ತೋರಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಕೋಮು ನಿಗ್ರಹ ದಳ ಮಾಡಿದ ಬಳಿಕ ಕರಾವಳಿಯಲ್ಲಿ ಇಂತಹ ಪ್ರಕರಣ ಹೆಚ್ಚಿದ್ದು, ಶಾಂತಿ ದೂರವಾಗಿದೆ.

ಕರಾವಳಿ ಪರಿವಾರ ಸಂಘಟನೆಗಳ ಭದ್ರಕೋಟೆ ಎನ್ನುವುದಕ್ಕಾಗಿ ಕಾಂಗ್ರೆಸ್ ಸರಕಾರ ಟಾರ್ಗೆಟ್ ಮಾಡಿದೆ. ಸುಹಾಸ್ ಹತ್ಯೆಯಲ್ಲಿ ಬುರ್ಖಾಧಾರಿಗಳು ವಾಹನ ಅಡ್ಡಗಟ್ಟಿದ್ದನ್ನು ನೋಡಿದ್ದೀರಿ, ಯಾಕೆ ಅವರನ್ನು ಪೊಲೀಸರು ಬಂಧನ ಮಾಡಿಲ್ಲ. ಹಿಂದು ಕಾರ್ಯಕರ್ತನ ಕೊಲೆಯಾದರೆ ಆರೋಪಿಗಳ ಬಂಧನ ಆಗಲ್ಲ, ಮುಸ್ಲಿಂ ಕೊಲೆಯಾದರೆ ಅತಿ ಬೇಗ ಬಂಧನ ಪ್ರಕ್ರಿಯೆ ಆಗುತ್ತದೆ. ಪೊಲೀಸರು ಕಾಂಗ್ರೆಸ್ ಸರಕಾರದ ಒತ್ತಡಕ್ಕೆ ಬಿದ್ದು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಆಡಳಿತ ಪಕ್ಷಕ್ಕೆ ಮಣಿದು ಕೆಲಸ ಮಾಡಿದ್ದರಿಂದ ಆಡಳಿತದ ತಪ್ಪಿನ ಕಾರಣಕ್ಕೆ ಐದು ಜನ ಪೊಲೀಸ್ ಅಧಿಕಾರಿಗಳ ತಲೆದಂಡ ಆಯ್ತು. ಅಧಿಕಾರ ಶಾಶ್ವತ ಆಗಿರುವುದಿಲ್ಲ. ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಹಾಕೋದು ಬಿಡಿ, ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಬೆದರಿಸಿದರೆ ಪರಿಣಾಮ ನೆಟ್ಟಿಗಿರಲ್ಲ ಎನ್ನುವುದನ್ನು ಹೇಳುತ್ತಿದ್ದೇನೆ. ನಾವೇನು ನಮ್ಮ ಪರವಾಗಿ ವಹಿಸಿ ಎನ್ನುತ್ತಿಲ್ಲ, ಕಾನೂನು ಪರವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಮುಂದೆ ಈ ರೀತಿ ಆಗಲ್ಲವೆಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಪೊಲೀಸ್ ಸ್ಟೇಶನ್ ಕಾಂಗ್ರೆಸ್ ಸ್ಟೇಶನ್ ಆಗಿವೆ; 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಸ್ಟೇಶನ್ ಕಾಂಗ್ರೆಸಿನ ಸ್ಟೇಶನ್ ಗಳಾಗಿವೆ. ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ರಾತ್ರಿ ವೇಳೆ ಮನೆಗೆ ನುಗ್ಗಿ ಫೋಟೋ ತೆಗಿಯುವ ಬಗ್ಗೆ ಯಾವ ಕಾನೂನು ಪುಸ್ತಕದಲ್ಲಿ ಇದೆಯೆಂದು ಅಧಿಕಾರಿಗಳಲ್ಲಿ ಕೇಳಿದ್ದೇವೆ. ಯಾವುದೇ ಪ್ರಕರಣದಲ್ಲಿ ದೇಶ ವಿರೋಧಿಗಳು ಮತ್ತು ದೇಶ ಪ್ರೇಮಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಬೇಡಿ ಅಂತಾನೂ ಹೇಳಿದ್ದೇವೆ. ನಾವು ಕಾರ್ಯಕರ್ತರ ಜೊತೆಗಿದ್ದೇವೆ ಎಂದು ಹೇಳಲು ಬಂದಿದ್ದೇವೆ ಎಂಬುದಾಗಿ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.

ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್, ಸುಹಾಸ್ ಒಬ್ಬ ರೌಡಿಶೀಟರ್, ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಿ ಅದರ ಮೌಲ್ಯವನ್ನು ಕೆಳಗಿಳಿಸಿದ್ದೀರಿ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶೋಕ್, ರೌಡಿ ಯಾರಿಲ್ಲ ಹೇಳಿ, ಡಿಕೆಶಿ ಎಷ್ಟು ಕೇಸಿನಲ್ಲಿ ಇಲ್ಲ. ರಾಹುಲ್ ಗಾಂಧಿ ನಾಲ್ಕೈದು ಕೇಸಿನಲ್ಲಿ ಬೇಲ್ ಪಡೆದು ಓಡಾಡುತ್ತಿದ್ದಾರೆ. ಅವರ ಮೇಲೆ ಎಷ್ಟು ಕೇಸು ಇಲ್ಲ. ಅವರನ್ನೆಲ್ಲ ಬೇಲ್ ರಾಜ ಅನ್ನೋಕ್ಕೊಗುತ್ತಾ. ರೌಡಿಯೋ, ಅಪರಾಧಿಯೋ ಅಂತ ಕೋರ್ಟ್ ಹೇಳಬೇಕು. ಇವರೇನು ಹೇಳೋದು. ಎನ್ಐಎ ತನಿಖೆ ಅವರಿಗೆ ಬೇಕಾಗಿಲ್ಲದೇ ಇರಬಹುದು. ಬಹುಸಂಖ್ಯಾತ ಹಿಂದುಗಳ ಒತ್ತಾಯ ಇದೆ, ಕೇಂದ್ರ ಗೃಹ ಇಲಾಖೆ ತನಿಖೆಗೆ ಕೊಟ್ಟಿದೆ, ಯಾರು ತಪ್ಪು ಮಾಡಿದ್ದಾರೋ ಹೊರಗೆ ಬರಲಿ. ಕುಕ್ಕರ್ ಬಾಂಬ್ ಬ್ಲಾಸ್ಟ್ ಆದಾಗ, ಅವರೆಲ್ಲ ನಮ್ಮ ಬ್ರದರ್ಸ್ ಎಂದಿದ್ದರು. ಅಲ್ಪಸಂಖ್ಯಾತರು ಅವರಿಗೆ ಬ್ರದರ್ಸ್, ಅವರಂದ್ರೆ ಬಲು ಪ್ರೀತಿ ಎಂದರು.

ಸುದ್ದಿಗೋಷ್ಟಿಯಲ್ಲಿ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಛಲವಾದಿ ನಾರಾಯಣಸ್ವಾಮಿ, ಎನ್. ರವಿಕುಮಾರ್, ಸಂಸದ ಬ್ರಿಜೇಶ್ ಚೌಟ ಮತ್ತು ಜಿಲ್ಲೆಯ ಬಿಜೆಪಿ ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಉಪಸ್ಥಿತರಿದ್ದರು.

Mangalore Congress Sacrificing Officials for Governance Failures, Painting Issues with Communal Colors to Please Minorities, BY Vijayendra.