ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವಕರ್ಮ ಸಮಾಜ ಯಾವುದಕ್ಕೆ ಕಮ್ಮಿ ಇದೆ, ಅಸಹ್ಯ ಷರತ್ತುಗಳನ್ನು ಹಾಕಿದ್ದಾರೆ, ಬಡವರೆಂದು ನಿರ್ಲಕ್ಷ್ಯ ಮಾಡುತ್ತಿದ್ದಾರೆ ; ಕೆ.ಪಿ. ನಂಜುಂಡಿ ಆಕ್ರೋಶ 

29-12-25 07:37 pm       Mangalore Correspondent   ಕರಾವಳಿ

ವಿಶ್ವಕರ್ಮ ಸಮಾಜ ಸಣ್ಣ ಸಮುದಾಯ ಆಗಿದ್ದರೂ ಹಿಂದುತ್ವವನ್ನು ಅಪ್ಪಿಕೊಂಡ ಸಮಾಜ. ಆದರೆ ಹಿಂದುತ್ವದ ನೆಲೆ ಪುತ್ತೂರಿನಲ್ಲೇ ನಮ್ಮ ಹೆಣ್ಣು ಮಗಳಿಗೆ ನ್ಯಾಯ ಸಿಕ್ಕಿಲ್ಲ ಅನ್ನುವ ನೋವು ಇದೆ. 4-5 ತಿಂಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಡಿಎನ್ಎ ವರದಿ ಬಂದ ಬಳಿಕ ಹುಡುಗನ ತಂದೆಯ ಜೊತೆಗೆ ಎರಡು ಬಾರಿ ಮಾತುಕತೆ ನಡೆಸಿದ್ದೇವೆ.

ಮಂಗಳೂರು, ಡಿ.29 : ವಿಶ್ವಕರ್ಮ ಸಮಾಜ ಸಣ್ಣ ಸಮುದಾಯ ಆಗಿದ್ದರೂ ಹಿಂದುತ್ವವನ್ನು ಅಪ್ಪಿಕೊಂಡ ಸಮಾಜ. ಆದರೆ ಹಿಂದುತ್ವದ ನೆಲೆ ಪುತ್ತೂರಿನಲ್ಲೇ ನಮ್ಮ ಹೆಣ್ಣು ಮಗಳಿಗೆ ನ್ಯಾಯ ಸಿಕ್ಕಿಲ್ಲ ಅನ್ನುವ ನೋವು ಇದೆ. 4-5 ತಿಂಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಡಿಎನ್ಎ ವರದಿ ಬಂದ ಬಳಿಕ ಹುಡುಗನ ತಂದೆಯ ಜೊತೆಗೆ ಎರಡು ಬಾರಿ ಮಾತುಕತೆ ನಡೆಸಿದ್ದೇವೆ. ಆದರೆ ಹುಡುಗ ಒಪ್ಪುತ್ತಿಲ್ಲ ಅಂತ ಸಬೂಬು ಹೇಳುತ್ತಿದ್ದಾರೆ. ಕಾನೂನು, ಕೋರ್ಟ್ ಬಗ್ಗೆ ನಂಬಿಕೆ ಇದೆ, ಅಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ವಿಶ್ವಕರ್ಮ ಸಮಾಜ ಸಂಘದ ರಾಜ್ಯಾಧ್ಯಕ್ಷ ಕೆ.ಪಿ ನಂಜುಂಡಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪುತ್ತೂರಿನಲ್ಲಿ ಘಟನೆ ನಡೆದಿದ್ದರಿಂದ ಕಲ್ಲಡ್ಕ ಪ್ರಭಾಕರ ಭಟ್, ನಳಿನ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರೊಂದಿಗೆ ಆರಂಭದಲ್ಲೇ ಮಾತುಕತೆ ನಡೆಸಿದ್ದೆ. ಎಲ್ಲರೂ ಸಕಾರಾತ್ಮಕವಾಗಿಯೇ ಮಾತನಾಡಿದ್ದರು. ಆದರೆ ಜಾತಿ ಭೇದ ಇಲ್ಲ, ನಾವೆಲ್ಲ ಒಂದೇ ಎನ್ನುವ ನಾಯಕರು ನಮ್ಮ ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಿಲ್ಲ. ಸತೀಶ್ ಕುಂಪಲ ಜೊತೆಗೇ ಹುಡುಗನ ತಂದೆ ಜಗನ್ನಿವಾಸ ರಾವ್ ಜೊತೆಗೆ ಮಾತುಕತೆ ಮಾಡಿದ್ದೆವು. ಆದರೆ ಅವರ ಷರತ್ತುಗಳನ್ನು ಕೇಳಿದರೆ ನಮಗೇ ಬಾಯಿ ಬರುವುದಿಲ್ಲ.

ಅಷ್ಟೊಂದು ಅಸಹ್ಯವಾಗಿದೆ, ಬಾಯಲ್ಲಿ ಹೇಳಲಾಗದ ಮಾತುಗಳನ್ನು ಆಡಿದ್ದಾರೆ. ನ್ಯಾಯಾಧೀಶರ ಮೂಲಕ ಸ್ಯಾಂಪಲ್ ಸಂಗ್ರಹಿಸಿ ಡಿಎನ್ಎ ವರದಿ ತರಿಸಿಕೊಂಡರೂ ಇವರು ನಂಬುತ್ತಿಲ್ಲ. ನಾವು ಈ ವಿಚಾರವನ್ನು ವಕೀಲರ ಮೂಲಕ ಕೋರ್ಟ್ ಗಮನಕ್ಕೆ ತರುತ್ತಿದ್ದೇವೆ. ಇಲ್ಲಿ ಎರಡು ಕಡೆಯೂ ತಪ್ಪಾಗಿದೆ, ಈಗ ಹುಡುಗಿ ಮತ್ತು ಆಕೆಯ ತಾಯಿ ಮಗು ಹಿಡಿದು ಅಂಗಲಾಚುತ್ತಿದ್ದಾರೆ. ಬಲಾಢ್ಯರು ಏನು ಮಾಡಿದರೂ ನಡೆಯುತ್ತೆ ಎಂದರೆ ನಮ್ಮ ಸಮಾಜದ ಸ್ಥಿತಿ ಎಲ್ಲಿ ಮುಟ್ಟಿತು ಅನ್ನುವ ಪ್ರಶ್ನೆ ಬರುತ್ತದೆ.

ಹಣ ಇದೆಯಂದ್ರೆ ಯಾರನ್ನೂ ಪ್ರೀತಿಸಿ, ಬಲಾತ್ಕರಿಸಿ ಮಗುವಾದ ಮೇಲೆ ತನಗೇನೂ ಸಂಬಂಧ ಇಲ್ಲ ಎಂದು ಹೋಗಬಹುದೇ.. ಇದಕ್ಕೆ ಹಿಂದು ಸಮಾಜ, ನಮ್ಮ ಕಾನೂನು ಅವಕಾಶ ಕೊಡುತ್ತದೆಯೇ ಎಂದು ಕೇಳಿದ ನಂಜುಂಡಿ, ನಾವು ಎಲ್ಲ ರೀತಿಯ ಸಂಧಾನಗಳನ್ನೂ ಮಾಡಿದ್ದೇವೆ, ಈಗ ಸಂಧಾನ ಮುರಿದು ಬಿದ್ದಿದೆ. ಮೂರು ತಿಂಗಳಿಂದ ನಾನು ಸುಮ್ಮನಿದ್ದೇನೆ ಎಂಬ ಮಾತ್ರಕ್ಕೆ ನಾನು ಹಣ ತಗೊಂಡು ಅವರ ಜೊತೆ ಶಾಮೀಲಾಗಿದ್ದೇನೆ ಎನ್ನುವಷ್ಟರ ಮಟ್ಟಿಗೆ ಮಾತನಾಡಲಾರಂಭಿಸಿದ್ದಾರೆ. ಸಂಧಾನಕ್ಕೆ ಪ್ರಚಾರ ಬೇಡವೆಂದು ನಮ್ಮ ಕೆಲಸ ನಾವು ಮಾಡುತ್ತಿದ್ದೆವು.

ಹುಡುಗನ ಜೊತೆಗೆ ಐದು ನಿಮಿಷ ಮಾತನಾಡಲು ಅವಕಾಶ ಕೊಡಿ, ನಿಮ್ಮ ಕಾಲು ಹಿಡಿಯುತ್ತೇನೆ ಎಂದು ಜಗನ್ನಿವಾಸ ರಾವ್ ಬಳಿ ಅಂಗಲಾಚಿದ್ದೇನೆ. ಅವರು ಮಾತನಾಡಲು ಬಿಟ್ಟಿಲ್ಲ. ಹುಡುಗನನ್ನು ಎದುರಿಗೆ ತರುವುದೇ ಇಲ್ಲ. ಪೊಲೀಸರು ಈಗ ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕಿದ್ದಾರೆ, ಸೆಷನ್ ಕೋರ್ಟಿನಲ್ಲಿ ಟ್ರಯಲ್ ನಡೆದು ಹೆಚ್ಚೆಂದರೆ ಒಂದು ವರ್ಷದಲ್ಲಿ ತೀರ್ಮಾನ ಬರುತ್ತದೆ. ಇದರ ನಡುವೆ ಇವರ ಕುಟುಂಬಕ್ಕೆ ನಾನಾ ರೀತಿಯ ಬೆದರಿಕೆ, ಕಿರುಕುಳ ಕೊಡಲು ಯತ್ನಿಸಿದ್ದಾರೆ. ವಿಶ್ವಕರ್ಮ ಸಮಾಜ ಈ ಕುಟುಂಬದ ಜೊತೆಗಿದೆ. ನಮ್ಮ ಸಮಾಜ ಯಾವುದಕ್ಕೆ ಕಮ್ಮಿ ಇದೆ, ಇಲ್ಲಿ ಹಿಂದುತ್ವ ಅನ್ನೋರು ನಾಚಿಕೆ ಪಡಬೇಕು. ಬಡವರಿಗೆ ನ್ಯಾಯ ಸಿಗಬಾರದು ಅಂತ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕಾನೂನು ನ್ಯಾಯ ಕೊಟ್ಟೇ ಕೊಡುತ್ತದೆ, ಅನ್ಯಾಯ ಅಂತೂ ಆಗಲ್ಲ ಎಂಬ ವಿಶ್ವಾಸ ಇದೆ ಎಂದರು. ಸುದ್ದಿಗೋಷ್ಟಿಯಲ್ಲಿ ಸಂತ್ರಸ್ತ ಹುಡುಗಿ, ಆಕೆಯ ತಾಯಿ ಮತ್ತು ವಿಶ್ವಕರ್ಮ ಸಮಾಜದ ಪ್ರಮುಖರು ಜೊತೆಗಿದ್ದರು.

At a press meet in Mangaluru, Vishwakarma community state president K.P. Nanjundi expressed strong displeasure, alleging that the community’s women were being denied justice in a Puttur case despite DNA evidence. He accused several Hindutva-aligned leaders of ignoring the victim’s plight and imposing “shameful conditions” during mediation.