ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ವಿರೋಧ ; ತಲಪಾಡಿ ಗ್ರಾ.ಪಂ ಆಡಳಿತ ವಿರುದ್ಧ ಆಕ್ರೋಶ, ಸ್ಥಳೀಯರಿಂದ‌ ಪ್ರತಿಭಟನೆ, ಕೆಳ ದರ್ಜೆ ಅಧಿಕಾರಿಯಿಂದ ಶಿಷ್ಟಾಚಾರ ಉಲ್ಲಂಘನೆ !  

23-01-26 08:22 pm       Mangalore Correspondent   ಕರಾವಳಿ

ತಲಪಾಡಿ ಗ್ರಾಮ ಪಂಚಾಯತ್ ಆಡಳಿತವು ಗ್ರಾಮ ವ್ಯಾಪ್ತಿಯ ನಾರ್ಲ ಪಡೀಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಳಿಯ ಸರಕಾರಿ ಜಾಗದಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ರೂಪಿಸಿರುವ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯ ನೂರಾರು ನಿವಾಸಿಗಳು ಶುಕ್ರವಾರ ಉದ್ದೇಶಿತ ಘಟಕ ನಿರ್ಮಾಣ ಪ್ರದೇಶದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. 

ಉಳ್ಳಾಲ, ಜ.23 : ತಲಪಾಡಿ ಗ್ರಾಮ ಪಂಚಾಯತ್ ಆಡಳಿತವು ಗ್ರಾಮ ವ್ಯಾಪ್ತಿಯ ನಾರ್ಲ ಪಡೀಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಳಿಯ ಸರಕಾರಿ ಜಾಗದಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ರೂಪಿಸಿರುವ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯ ನೂರಾರು ನಿವಾಸಿಗಳು ಶುಕ್ರವಾರ ಉದ್ದೇಶಿತ ಘಟಕ ನಿರ್ಮಾಣ ಪ್ರದೇಶದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. 

ತಲಪಾಡಿ ಗ್ರಾಪಂ ಆಡಳಿತವು ನಾರ್ಲ ಪಡೀಲಿನ ಸುಮಾರು ಐವತ್ತು ಸೆಂಟ್ಸ್ ಸರಕಾರಿ ಜಾಗದಲ್ಲಿ ಸಾಮಾನ್ಯ ಸಭೆಯ ನಿರ್ಣಯದಡಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಮುಂದಾಗಿದ್ದು, ಗಡಿ ಗುರುತಿನ ಸರ್ವೇ ಪ್ರಯುಕ್ತ ಗುರುವಾರ ಜೆಸಿಬಿ ಯಂತ್ರದಿಂದ‌ ಪ್ರದೇಶವನ್ನ ಸ್ವಚ್ಚಗೊಳಿಸಲು ಪಂಚಾಯತ್ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಸ್ಥಳೀಯರು ತ್ಯಾಜ್ಯ ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಜೆಸಿಬಿ ಯಂತ್ರವನ್ನ ಹಿಮ್ಮೆಟ್ಟಿಸಿದ್ದರು. ಶುಕ್ರವಾರ ಸ್ಥಳೀಯ ನೂರಾರು ಮಂದಿ ನಿವಾಸಿಗಳು ನಾರ್ಲ ಪಡೀಲಿನಲ್ಲಿ ಜಮಾಯಿಸಿದ್ದು ಗ್ರಾ.ಪಂ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ಮಾತನಾಡಿ ನಾರ್ಲ ಪಡೀಲಿನಲ್ಲಿ ಸುಮಾರು ನಾಲ್ನೂರರಷ್ಟು ಮನೆಗಳಿವೆ. ಅಲ್ಲದೆ ಈ ಪ್ರದೇಶದಲ್ಲಿ ಶಾಲೆ ಮತ್ತು ಪಶು ಚಿಕಿತ್ಸಾಲಯವೂ ಕಾರ್ಯಾಚರಿಸುತ್ತಿದೆ. ಇಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಗೊಂಡರೆ ಪ್ರದೇಶವು ದುರ್ನಾತ ಬೀರಿ, ಅಂತರ್ಜಲ ಕಲುಷಿತಗೊಂಡು ಸ್ಥಳೀಯರು ಹಾಗೂ ಮಕ್ಕಳ ಆರೋಗ್ಯದ ಮೇಲೆ‌ ಮಾರಕ ಪರಿಣಾಮಗಳು ಬೀರುತ್ತವೆ. ಇಂತಹ ಜನ ನಿಬಿಡ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಜನ ವಿರೋಧಿ ಯೋಜನೆಗಳನ್ನ ಅನುಷ್ಟಾನಗೊಳಿಸಲು ಮುಂದಾದರೆ ಪಂಚಾಯತ್ ಆಡಳಿತದ ವಿರುದ್ಧ ತೀವ್ರ ಸ್ವರೂಪದ ಪ್ರತಿಭಟನೆಗಳನ್ನ ನಡೆಸುವುದಾಗಿ ಎಚ್ಚರಿಸಿದರು. 

ಗ್ರಾಮ ಸಭೆಗಳಲ್ಲಿ ಚರ್ಚಿಸಬೇಕಾಗಿದ್ದ ಇಂತಹ ಗಂಭೀರ ವಿಚಾರಗಳನ್ನ‌ ಸಾಮಾನ್ಯ ಸಭೆಗಳಲ್ಲಿ ಮಂಡಿಸುವುದು ಕಾನೂನು ಬಾಹಿರ. ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಮತ್ತು ಪಂಚಾಯತ್ ಸದಸ್ಯರ ಒಮ್ಮತದಿಂದಲೇ ಇಂತಹ ಯೋಜನೆಗಳ ಬಗ್ಗೆ ನಿರ್ಣಯ ಕೈಗೊಳ್ಳಲು ಸಾಧ್ಯ.ಆದರೆ ಇಂದು ಸ್ಥಳೀಯ ಗ್ರಾ.ಪಂ ಸದಸ್ಯರೇ ಯೋಜನೆಯನ್ನ ವಿರೋಧಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಪಂಚಾಯತ್ ಆಡಳಿತವು ಜನರಿಗೆ ತಪ್ಪು ಮಾಹಿತಿ ಕೊಟ್ಟು ಇಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಹಠತೊಟ್ಟಿದೆಯೆಂದು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ತಲಪಾಡಿ ಪಂಚಾಯತ್ ದ್ವಿತೀಯ ದರ್ಜೆಯ ಲೆಕ್ಕ ಪರಿಶೋಧಕರಾದ ಮಂಜಪ್ಪ ಎಂಬವರು ಹಿರಿಯ ದರ್ಜೆಯ ಪಂಚಾಯತ್ ಕಾರ್ಯದರ್ಶಿಯನ್ನ ಬದಿಗಿರಿಸಿ ಪ್ರತಿಭಟನಾಕಾರರಿಂದ‌ ತಾನೇ ಮನವಿಯನ್ನ ಸ್ವೀಕರಿಸಿದ್ದಾರೆ. ಪಂಚಾಯತ್ ಪಿಡಿಒ ಸಂಧ್ಯಾ ಅವರು ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಐವತ್ತು ಸೆಂಟ್ಸ್ ಸರಕಾರಿ ಜಾಗದ ಸರ್ವೆ ನಡೆಸಿ ಗಡಿ ಗುರುತು ಮಾಡಲು ಮುಂದಾಗಿರೋದಾಗಿ ಹೆಡ್ ಲೈನ್ ಕರ್ನಾಟಕ ಪ್ರತಿನಿಧಿಗೆ ದೂರವಾಣಿ ಮೂಲಕ ತಿಳಿಸಿದ್ದರು. ಆದರೆ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದ ಮಂಜಪ್ಪ ಅವರು ಅರವತ್ತು ಸೆಂಟ್ಸ್ ಜಾಗದ ಗಡಿ ಗುರುತಿಗೆ ಸರ್ವೆ ನಡೆಸೋದಾಗಿ ಮಾಧ್ಯಮಗಳ ಮುಂದೆಯೇ ಗೊಂದಲದ ಹೇಳಿಕೆ ನೀಡಿದ್ದಾರೆ. ಕಾರ್ಯದರ್ಶಿಯನ್ನ ಕಡೆಗಣಿಸಿ,ಕೆಳ ದರ್ಜೆಯ ಅಧಿಕಾರಿಯೋರ್ವರು ಮನವಿ ಸ್ವೀಕರಿಸೋದಲ್ಲದೆ, ಮಾಧ್ಯಮಗಳ ಮುಂದೆ ಹೇಳಿಕೆ ನೀಡೋದು ಶಿಷ್ಟಾಚಾರದ ಉಲ್ಲಂಘನೆಯೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಸುಧೀರ್ ಕುಮಾರ್ ತಲಪಾಡಿ, ರಿಕ್ಷಾ ಚಾಲಕ-ಮಾಲಕರ ಸಂಘದ ಪದಾಧಿಕಾರಿಗಳಾದ ನಿತಿನ್, ವಸಂತ್, ಅಮರ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Hundreds of residents protested against the proposed dry waste processing unit near a government primary school at Narl Padilu, alleging health risks, lack of public consultation, and misleading information by the Talapady Gram Panchayat. The agitation also highlighted confusion among officials and accusations of protocol violations by a lower-ranking officer.