Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ ಒಂಟಿ ಸಲಗ ; ಆನೆಯ ಮರಳಿ ಕಾಡಿಗಟ್ಟಲು ಅರಣ್ಯ ಸಿಬಂದಿ ಹರಸಾಹಸ, ಕಾಡಾನೆಗೆ ಫೈರಿಂಗ್ ! ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯ

06-09-26 08:09 pm       Mangalore Correspondent   ಕರಾವಳಿ

ಉಜಿರೆ ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜು ಬಳಿ ಕಾಡಾನೆ ಬಂದಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಆನೆಯನ್ನು ಮರಳಿ ಕಾಡಿಗಟ್ಟಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದು ಆನೆಯನ್ನು ಓಡಿಸಲು ಸಿಬಂದಿ ಹರಸಾಹಸ ಪಡುತ್ತಿದ್ದಾರೆ.

ಬೆಳ್ತಂಗಡಿ, ಸೆ.6: ಉಜಿರೆ ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜು ಬಳಿ ಕಾಡಾನೆ ಬಂದಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಆನೆಯನ್ನು ಮರಳಿ ಕಾಡಿಗಟ್ಟಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದು ಆನೆಯನ್ನು ಓಡಿಸಲು ಸಿಬಂದಿ ಹರಸಾಹಸ ಪಡುತ್ತಿದ್ದಾರೆ. 

ಇದೇ ವೇಳೆ, ಅತ್ತಿತ್ತ ಅಲೆದಾಡುತ್ತ ಆತಂಕ ಸೃಷ್ಟಿಸಿರುವ ಒಂಟಿ ಸಲಗದತ್ತ ಅರಣ್ಯ ಇಲಾಖೆಯ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಪಟಾಕಿ ಸಿಡಿತಕ್ಕೆ ಬೆದರದ ಆನೆಯನ್ನು ಓಡಿಸಲೆಂದು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಆ ಪೈಕಿ ಎರಡು ಗುಂಡು ಆನೆಗೆ ತಗುಲಿರುವ ಸಾಧ್ಯತೆ‌ ಇದೆ ಎನ್ನಲಾಗುತ್ತಿದೆ. 

ಭಾನುವಾರ ಬೆಳಗ್ಗಿನಿಂದಲೇ ಉಜಿರೆ ಸುತ್ತಮುತ್ತ ಆನೆ ಅಲೆದಾಡುತ್ತಿದ್ದು ಸ್ಥಳೀಯರು ಎಲ್ಲಿ ಏನು ಮಾಡುತ್ತೋ ಅನ್ನುವ ಆತಂಕದಲ್ಲಿದ್ದಾರೆ. ಅರಣ್ಯ ಇಲಾಖೆಯ ಆನೆ ಕಾರ್ಯಪಡೆ ಸಿಬಂದಿ ಆನೆಯನ್ನು ಕಾಡಿಗೆ ಓಡಿಸಲು ನಾನಾ ರೀತಿಯ ಕಸರತ್ತು ಮಾಡಿದ್ದಾರೆ. ಆದರೆ ಜನರು ಆ ಕಡೆ, ಈ ಕಡೆಯಿಂದ ಬರುತ್ತಿರುವುದರಿಂದ ಕಾಡಾನೆ ದಾರಿ ತಪ್ಪಿ ಅಡ್ಡಾದಿಡ್ಡಿ ಓಡಲು ಶುರು ಮಾಡಿದೆ. ಕಾಲೇಜು ಆವರಣದಲ್ಲೇ ಸುತ್ತಮುತ್ತ ಸಲಗ ತಿರುಗಾಡುತ್ತಿದ್ದು ಬೇಸತ್ತ ಅರಣ್ಯ ಸಿಬಂದಿ ಗುಂಡು ಹಾರಿಸಿ ಓಡಿಸಲು ಯತ್ನಿಸಿದ್ದಾರೆ. 

ಬೆಳಗ್ಗಿನಿಂದ ಕಾರ್ಯಾಚರಣೆ ಆಗುತ್ತಿದ್ದರೂ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬಂದಿಲ್ಲ. ಇದರಿಂದಾಗಿ ನಿರ್ದಿಷ್ಟ ಆದೇಶಗಳು ಸಿಗದೆ ಸಿಬ್ಬಂದಿ ಪರದಾಡುತ್ತಿದ್ದಾರೆ. ಮಂಗಳೂರು ಅಥವಾ ಪುತ್ತೂರು ವಲಯದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಬೇಕಿತ್ತು. ಬಾರದೇ ಇರುವುದರಿಂದಲೋ ಏನೋ ಆನೆಯೂ ಇಲಾಖೆಗೆ ಸಡ್ಡು ಹೊಡೆದಂತೆ ಉಜಿರೆ ಬಿಟ್ಟು ಹೋಗಲ್ಲ ಎನ್ನುವಂತೆ ವರ್ತಿಸುತ್ತಿದೆ.