ತಲಪಾಡಿ: ಸ್ಕೂಲ್ ಬಸ್ ತಪ್ಪಿಸಲು ಹೋಗಿ ಸ್ಕೂಟರ್ ಮೇಲೆ ಹರಿದ ಕೆಎಸ್ಸಾರ್ಟಿಸಿ ಬಸ್, ಸವಾರ ಗಂಭೀರ !! ಅಪಘಾತ ಸಿಸಿಟಿವಿಯಲ್ಲಿ ಸೆರೆ

22-03-21 12:23 pm       Mangalore Correspondent   ಕರಾವಳಿ

ಅತಿ ವೇಗದಿಂದ ಬಂದ ಕೆಎಸ್ಸಾರ್ಟಿಸಿ ಬಸ್ ಡಿವೈಡರ್ ಹತ್ತಿ ಸ್ಕೂಟರ್ ಮೇಲೆ ಹರಿದ ಘಟನೆ ಗಡಿಭಾಗ ತಲಪಾಡಿ ಜಂಕ್ಷನ್ನಲ್ಲಿ ನಡೆದಿದೆ.

ಉಳ್ಳಾಲ, ಮಾ.22: ಹೈವೇ ರಸ್ತೆಯಲ್ಲಿ ಸ್ಕೂಟರ್ ಸವಾರ ತಿರುವು ಪಡೆಯುತ್ತಿದ್ದ ವೇಳೆ ಅತಿ ವೇಗದಿಂದ ಬಂದ ಕೆಎಸ್ಸಾರ್ಟಿಸಿ ಬಸ್ ಡಿವೈಡರ್ ಹತ್ತಿ ಸ್ಕೂಟರ್ ಮೇಲೆ ಹರಿದ ಘಟನೆ ಗಡಿಭಾಗ ತಲಪಾಡಿ ಜಂಕ್ಷನ್ನಲ್ಲಿ ನಡೆದಿದೆ. ಸ್ಕೂಟರ್ ಸವಾರ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾನೆ. 

ಗಾಯಾಳುವನ್ನು ಕಾಸರಗೋಡು ಜಿಲ್ಲೆಯ ಉದ್ಯಾವರ ನಿವಾಸಿ ತುಳಸಿ ಎಂದು ಗುರುತಿಸಲಾಗಿದೆ. ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಗಡಿಭಾಗ ತಲಪಾಡಿಯಲ್ಲಿ ಸ್ಕೂಲ್ ಬಸ್ಸೊಂದು ಇನ್ನೊಂದು ರಸ್ತೆಗೆ ತಿರುವು ಪಡೆಯುವ ಯತ್ನದಲ್ಲಿದ್ದಾಗ ಕೇರಳ ಕಡೆಯಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮಧ್ಯಕ್ಕೆ ನುಗ್ಗಿ ಬಂದಿದೆ. ಇದೇ ವೇಳೆ, ಮತ್ತೊಂದು ರಸ್ತೆಯಿಂದ ಸ್ಕೂಟರ್ ಸವಾರ ತಿರುವು ಪಡೆಯಲು ಬಂದಿದ್ದು ಕೆಎಸ್ಸಾರ್ಟಿಸಿ ಬಸ್ ನೇರವಾಗಿ ಡಿವೈಡರ್ ಮತ್ತು ಸ್ಕೂಟರ್ ಮೇಲೆ ಹರಿದಿದೆ. ಸ್ಕೂಟರ್ ಬಸ್ಸಿನಡಿಗೆ ಸಿಲುಕಿ ಅಪ್ಪಚ್ಚಿಯಾಗಿದೆ. 

ಶಾಲಾ ಬಸ್ ಚಾಲಕ ಅಜಾಗರೂಕತೆ ಚಾಲನೆಯಿಂದ ಘಟನೆ ಸಂಭವಿಸಿದೆ ಎನ್ನಲಾಗುತ್ತದೆ. ಸರಕಾರಿ ಬಸ್ ಚಾಲಕ, ಸ್ಕೂಲ್ ಬಸ್ಸಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿದ್ದು ಆತನ ಸಮಯ ಪ್ರಜ್ಞೆಯಿಂದ ಶಾಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. 

ಸ್ಕೂಟರ್ ಚಾಲಕ ತುಳಸಿಯ ಎರಡೂ ಕಾಲು ಮುರಿತಕ್ಕೊಳಗಾಗಿದ್ದು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Video: 

Live accident caught in CCTV of Ksrtc Bus and Scooter accident in Talapady, Mangalore