ನೆಲ್ಯಾಡಿ ಬಳಿ ಭೀಕರ ಅಪಘಾತ ; ಬಸ್ - ಲಾರಿ ಡಿಕ್ಕಿಯಾಗಿ ಬೆಂಕಿ, ಚಾಲಕ ಸಜೀವ ದಹನ !! 

25-03-21 09:33 am       Mangaluru Correspondent   ಕರಾವಳಿ

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಇಲ್ಲಿನ ನೆಲ್ಯಾಡಿ ಬಳಿ ಖಾಸಗಿ ಬಸ್ ಮತ್ತು ಕಂಟೇನರ್ ಲಾರಿ ಮಧ್ಯೆ ಭೀಕರ ಅಪಘಾತ ನಡೆದು ಬೆಂಕಿ ಹತ್ತಿಕೊಂಡಿದ್ದು ಕಂಟೈನರ್ ಚಾಲಕ ಸಜೀವ ದಹನವಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. 

ಉಪ್ಪಿನಂಗಡಿ, ಮಾ.25: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಇಲ್ಲಿನ ನೆಲ್ಯಾಡಿ ಬಳಿ ಖಾಸಗಿ ಬಸ್ ಮತ್ತು ಕಂಟೇನರ್ ಲಾರಿ ಮಧ್ಯೆ ಭೀಕರ ಅಪಘಾತ ನಡೆದು ಬೆಂಕಿ ಹತ್ತಿಕೊಂಡಿದ್ದು ಕಂಟೈನರ್ ಚಾಲಕ ಸಜೀವ ದಹನವಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. 

ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮಂಗಳೂರಿನಿಂದ ಬೆಂಗಳೂರು ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಕಂಟೈನರ್ ಲಾರಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಮೆ ಒಮ್ಮೆಲೇ ಎರಡೂ ವಾಹನಗಳಿಗೆ ಬೆಂಕಿ ಹತ್ತಿಕ್ಕೊಂಡಿದೆ. ಕಂಟೈನರ್ ಚಾಲಕ ಗಾಯಗೊಂಡು ಹೊರಬರಲಾಗದೆ ಸಜೀವ ದಹನವಾದರೆ, ಬಸ್‌ನಲ್ಲಿದ್ದವರು ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದಾರೆ. 

ಕುಂದಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಶ್ರೀ ದುರ್ಗಾ ಮೋಟರ್ಸ್  ಬಸ್ ಎನ್ನಲಾಗುತ್ತಿದ್ದು, ಬಸ್‌ನಲ್ಲಿ 30 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ತಡರಾತ್ರಿ ಒಂದು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಹಾಸನ ಕಡೆಯಿಂದ ತರಕಾರಿ ಹೇರಿಕೊಂಡು ಬರುತ್ತಿದ್ದ ಕಂಟೈನರ್ ಲಾರಿ ಮತ್ತು ಬಸ್‌ ಮುಖಾಮುಖಿ ಡಿಕ್ಕಿಯಾಗಿದೆ. ಕಂಟೈನರ್‌ಗೆ ಗ್ಯಾಸ್ ಬಳಕೆ ಮಾಡುತ್ತಿದ್ದು, ಅಪಘಾತದ ಬಳಿಕ ಗ್ಯಾಸ್ ಸೋರಿಕೆಯಾಗಿ ಬೆಂಕಿ ದೊಡ್ಡ ಮಟ್ಟಕ್ಕೆ ಹತ್ತಿಕೊಂಡಿದೆ ಎನ್ನಲಾಗಿದೆ. 

ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್‌ ಮತ್ತು ಕಂಟೇನರ್‌ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಸ್ಥಳದಲ್ಲಿ ಅಪಘಾತದ ಭೀಕರ ದೃಶ್ಯಕ್ಕೆ ಸಾಕ್ಷಿಯಾಗಿ ನಿಂತಿದೆ.

Video: 

In a tragic accident between Van and Private Bus, Truck Driver got burnt alive and the bus was completely gutted by fire at Nellyadi, Sullia in Mangalore.