ಎಸ್ಐಟಿ ಜಾರಕಿಹೊಳಿ ಕೈಗೊಂಬೆ, ಸಾಕ್ಷಿ ನಾಶಕ್ಕೆ ಯತ್ನಿಸುತ್ತಿರುವ ಆರೋಪಿಯನ್ನು ಬಂಧಿಸಿ ; ಮಿಥುನ್ ರೈ

28-03-21 01:00 pm       Mangalore Correspondent   ಕರಾವಳಿ

ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಸಾಕ್ಷಿ ನಾಶ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿದರು. 

ಮಂಗಳೂರು, ಮಾ.28: ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಸಾಕ್ಷಿ ನಾಶ ಮಾಡುವ ಪ್ರಯತ್ನದಲ್ಲಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐ ಟಿಯನ್ನು ಜಾರಕಿಹೊಳಿ ತನ್ನ ಕೈಗೊಂಬೆಯಾಗಿಸಿದ್ದಾರೆ. ಸಾಕ್ಷಿ ನಾಶ ಮಾಡುತ್ತಿರುವ ಜಾರಕಿಹೊಳಿಯನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಆಗ್ರಹಿಸಿದ್ದಾರೆ. 

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಮಿಥುನ್ ರೈ, ಎಸ್ಐಟಿ ಪ್ರಾಯೋಜಕತ್ವದಲ್ಲಿ ಸಂತ್ರಸ್ತೆಯ ಕುಟುಂಬಸ್ಥರು ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಕ್ಷಣೆಗೆ ಎಸ್ ಐ ಟಿ ಯತ್ನಿಸುತ್ತಿದೆ. ರಮೇಶ್ ಜಾರಕಿಹೊಳಿ ಬಂಧಿಸುವವರೆಗೂ ಕಾಂಗ್ರೆಸ್ ಹೋರಾಟ ನಡೆಸಲಿದೆ. ಸೋಮವಾರ ಬೆಂಗಳೂರಿನ ಎಸ್ ಐ ಟಿ ಕಚೇರಿಯ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು. 

ಸಿ ಡಿ ಯಲ್ಲಿ ಇರುವಂತಹ ನಾಯಕ , ಪಾತ್ರಧಾರಿ, ಮಹಾನ್ ಗಣ್ಯ ವ್ಯಕ್ತಿ ಯಾರು ? ಎಂಬುದು ಎಲ್ಲರಿಗೂ ಗೊತ್ತು. ಇವರ ವಿರುದ್ಧ ಅತ್ಯಾಚಾರ ಪ್ರಕರಣವೂ ದಾಖಲಾಗಿದೆ. ಆದರೂ ಪೊಲೀಸರು ಬಂಧಿಸುವ ಕೆಲಸ ಮಾಡುತ್ತಿಲ್ಲ. ಆದರೆ, ಆರೋಪಿಯೇ ಸಿಡಿ ಪ್ರಕರಣದ ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಉಪ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ  ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.

ಎಸ್ಐಟಿ ಪ್ರಾಯೋಜಕತ್ವದಲ್ಲಿ ಸಂತ್ರಸ್ತೆಯ ಕುಟುಂಬಸ್ಥರು ಮಾಧ್ಯಮ ಗಳಿಗೆ ಹೇಳಿಕೆ ನೀಡಿದ್ದಾರೆ. 25 ದಿನಗಳ ನಂತರ ಸಂತ್ರಸ್ತೆಯ ಕುಟುಂಬಸ್ಥರು ಎಸ್ಐಟಿ ಮುಂದೆ ಬಂದದ್ದಾದರೂ ಹೇಗೆ ಮತ್ತು ಯಾಕೆ ಎಂದು ಪ್ರಶ್ನೆ ಮಾಡಿದ ಮಿಥುನ್ ರೈ, ರಮೇಶ್ ಜಾರಕಿಹೊಳಿ ತಮ್ಮ ಪ್ರಭಾವ ಬಳಸಿ ಬೆದರಿಕೆ ಹಾಕಿ ಸಂತ್ರಸ್ತೆ ಕುಟುಂಬಸ್ಥರಿಂದ ಹೇಳಿಕೆ ನೀಡಿಸಿದ್ದಾರೆ. ಇಡೀ ಪ್ರಕರಣವನ್ನು ತಿರುಚುವ ಪ್ರಯತ್ನವನ್ನು  ಎಸ್ ಐ ಟಿ ತಂಡ ಮಾಡುತ್ತಿದೆ. ಇವರ ತನಿಖೆಯ ಹಾದಿಯೇ ತಪ್ಪುತ್ತಿದೆ. ಇಡೀ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸಬೇಕು.‌ ಅಲ್ಲೀ ವರೆಗೂ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದ್ದಾರೆ.

Video: 

SIT is Ramesh Jarkiholis puppet alleges Congress leader Mithun Rai in Mangalore.