ದೇಶದ ಗಡಿ ಕಾಯಲು ಮುಂದಾದ ಪುತ್ತೂರಿನ ದಿಟ್ಟ ಯುವತಿಯರು !

30-03-21 12:51 pm       Mangalore Correspondent   ಕರಾವಳಿ

ಬಲ್ನಾಡು ನಿವಾಸಿ ರಮ್ಯಾ ಹಾಗೂ ಕಡಬ ತಾಲೂಕಿನ ಕಾಣಿಯೂರಿನ ಯೋಗಿತಾ ಎಂಬವರು ಭಾರತೀಯ ಸೇನೆಯ ಬಿ.ಎಸ್.ಎಫ್ ಯೋಧರಾಗಿ ಆಯ್ಕೆಯಾಗಿದ್ದಾರೆ.

ಪುತ್ತೂರು, ಮಾ.30: ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ ರಮ್ಯಾ ಹಾಗೂ ಕಡಬ ತಾಲೂಕಿನ ಕಾಣಿಯೂರಿನ ಯೋಗಿತಾ ಎಂಬವರು ಭಾರತೀಯ ಸೇನೆಯ ಬಿ.ಎಸ್.ಎಫ್ ಯೋಧರಾಗಿ ಆಯ್ಕೆಯಾಗಿದ್ದು ಇದೇ ಎಪ್ರಿಲ್ 1ರಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ರಮ್ಯಾ ಬಲ್ನಾಡು ಗ್ರಾಮದ ಪದ್ಮಯ್ಯ ಗೌಡ ಹಾಗೂ ತೇಜಾವತಿ ದಂಪತಿಯ ಪುತ್ರಿ. ಬಲ್ನಾಡು ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ, ಪಿಯುಸಿ ಹಾಗೂ ಪದವಿಯನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಡೆದಿದ್ದರು.‌

ಕಳೆದ ವರ್ಷ ಫೆಬ್ರವರಿಯಲ್ಲಿ ಸೇನಾ ನೇಮಕಾತಿಯ ಮೆಡಿಕಲ್ ಪರೀಕ್ಷೆ ಬರೆದಿದ್ದರು. ಆದರೆ ಕೊರೊನಾದಿಂದಾಗಿ ಫಲಿತಾಂಶ ತಡವಾಗಿ ಪ್ರಕಟವಾಗಿತ್ತು. ಶಾಲಾ ದಿನಗಳಲ್ಲಿ ಎನ್ ಸಿ ಸಿ ಯಲ್ಲಿ ಪಾಲ್ಗೊಂಡಿದ್ದ ಸೇನೆಗೆ ಸೇರುವ ನಿಟ್ಟಿನಲ್ಲಿ ತರಬೇತಿ ಪಡೆದಿದ್ದರು. ಈಗ ಎಲ್ಲ ಪರೀಕ್ಷೆಗಳನ್ನು ತೇರ್ಗಡೆ ಮಾಡಿಕೊಂಡು ಊರಿಗೆ ಹೆಮ್ಮೆ ತಂದಿದ್ದಾರೆ. 

ಕಾಣಿಯೂರು ಗ್ರಾಮದ ಮಲೆಕರ್ಚಿ ಮೇದಪ್ಪ ಗೌಡ ಮತ್ತು ದೇವಕಿ ದಂಪತಿಯ ಪುತ್ರಿ ಯೋಗಿತಾ ಎಂ. ಎಪ್ರಿಲ್ 1 ರಂದು ಮಧ್ಯಪ್ರದೇಶದ ಗ್ವಾಲಿಯರ್ ನ ತೇಕನ್ಪುರ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಬೊಬ್ಬೆಕೇರಿ ಮತ್ತು ಅಲಂಕಾರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಕಾಣಿಯೂರಿನಲ್ಲಿ ಮತ್ತು ನಿಂತಿಕಲ್ ಕೆ.ಎಸ್ ಗೌಡ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.70 ಅಂಕಗಳೊಂದಿಗೆ ಪಿಯು ಶಿಕ್ಷಣ ಪಡೆದಿದ್ದರು. ವಿಶ್ವವಿದ್ಯಾಲಯ ಕಾಲೇಜು ಮಂಗಳೂರಿನಲ್ಲಿ ಬಿಎಸ್ಸಿ ಪದವಿ, ಕೊಣಾಜೆ ಮಂಗಳ ಗಂಗೋತ್ರಿಯಲ್ಲಿ ಮೈಕ್ರೋಬಯಾಲಾಜಿ ವಿಷಯದಲ್ಲಿ ಎಂಎಸ್ಸಿ ಪದವಿ ಪಡೆದು ದೇಶದ ಗಡಿ ಕಾಯುವ ಕೆಲಸಕ್ಕೆ ಮುಂದಾಗಿದ್ದಾರೆ. ಇಬ್ಬರಿಗೂ ಹ್ಯಾಟ್ಸ್ ಅಪ್..

Two ladies from Dakshina Kannada district have been chosen to serve the Border Security Force (BSF) that keeps vigil on the country's borders. They will report to their BSF bosses and begin to serve the force on April 1.