ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ಸವ, ಧಾರ್ಮಿಕ ಆಚರಣೆಗಳಿಗೆ ಕೋವಿಡ್ ಅಡ್ಡಿ !

30-03-21 02:52 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಲಂ 144-3 ಪ್ರಕಾರ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಮಂಗಳೂರು, ಮಾ.30: ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಡೆಸದಂತೆ ಸಿಎಂ ಯಡಿಯೂರಪ್ಪ ಸೂಚಿಸಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಲಂ 144-3 ಪ್ರಕಾರ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಹೊರಡಿಸಿದ್ದಾರೆ. ತಕ್ಷಣದಿಂದಲೇ ಎಲ್ಲ ರೀತಿಯ ಧಾರ್ಮಿಕ ಆಚರಣೆ, ಸಾರ್ವಜನಿಕ ಸಮಾರಂಭಗಳು, ಉತ್ಸವಗಳನ್ನು ನಡೆಸದಂತೆ ಅನಿರ್ದಿಷ್ಟಾವಧಿಗೆ ನಿಷೇಧಿಸಿ ಆದೇಶ ಮಾಡಿದ್ದಾರೆ.

ಜನ ಸೇರುವಂತಹ ಎಲ್ಲ ರೀತಿಯ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಗಿದೆ. ಇದೇ ವೇಳೆ, ಧಾರ್ಮಿಕ ಆಚರಣೆಗಳನ್ನು ಸಾಂಕೇತಿಕವಾಗಿ ನಡೆಸಲು ಅನುಮತಿ ನೀಡಲಾಗಿದೆ. ಹೋಳಿ, ಯುಗಾದಿ, ಗುಡ್ ಫ್ರೈಡೇ ಇನ್ನಿತರ ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲೂ ಜನ ಸೇರುವಂತಿಲ್ಲ. ಇದಕ್ಕಾಗಿ ಸಾರ್ವಜನಿಕ ಮೈದಾನ, ಮಾರುಕಟ್ಟೆ ಪ್ರದೇಶಗಳನ್ನು ಬಳಸುವಂತಿಲ್ಲ. ಧಾರ್ಮಿಕ ವಿಧಿಗಳನ್ನು ಕಟ್ಟುಪಾಡಿಗಳಿಗಷ್ಟೇ ಸೀಮಿತವಾಗಿ ನಡೆಸಬೇಕು.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ತಪ್ಪಿದಲ್ಲಿ ಕೋವಿಡ್ ವಿಪತ್ತು ನಿರ್ವಹಣೆ ಕಾನೂನು ಪ್ರಕಾರ ದಂಡನೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 144 ಸೆಕ್ಷನ್ ಅಡಿ ಮೂರನೇ ವಿಧಿಯನ್ನು ಬಳಸಿ ನಿಷೇಧ ಆದೇಶ ಮಾಡಲಾಗಿದ್ದು ಕೆಲವೊಂದು ಪ್ರಕ್ರಿಯೆಗಳಿಗೆ ಅನುಮತಿಸಿದ್ದರೆ, ಒಳಾಂಗಣ ಮತ್ತು ಹೊರಾಂಗಣದ ಜನ ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸಲು ಈ ಕಾಯ್ದೆಯಡಿ ಅವಕಾಶ ನೀಡಲಾಗಿದೆ.

ಎಪ್ರಿಲ್, ಮೇ ತಿಂಗಳಲ್ಲಿ ಕರಾವಳಿಯಲ್ಲಿ ಅತಿ ಹೆಚ್ಚು ಉತ್ಸವಗಳು ನಡೆಯುತ್ತಿದ್ದು, ಈ ವಿಧಿಯಡಿ ಎಲ್ಲವನ್ನೂ ನಿಷೇಧಿಸಲು ಜಿಲ್ಲಾಧಿಕಾರಿಗೆ ಅವಕಾಶ ಇರಲಿದೆ. ಮುಖ್ಯಮಂತ್ರಿ 15 ದಿನಗಳ ಕಾಲ ಸಭೆ, ಸಮಾರಂಭಗಳನ್ನು ನಿಷೇಧಿಸಿದ್ದರೆ, ಜಿಲ್ಲಾಧಿಕಾರಿ ಮುಂದಿನ ಆದೇಶದ ವರೆಗೂ ಈ ರೀತಿಯ ಕಾಯ್ದೆಯನ್ನು ಹೇರಿದ್ದಾರೆ.

As the second wave of Coronavirus is spreading, deputy commissioner (DC) Dr Rajendra K V has announced the imposition of a ban on religious gatherings and celebrations in public places in Dakshina Kannada (DK) district.