45 ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ, ಸ್ವಯಂಪ್ರೇರಿತ ಲಸಿಕೆ ಪಡೆಯಲು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಲಹೆ

31-03-21 06:16 pm       Mangalore Correspondent   ಕರಾವಳಿ

ಜನರು ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆಯಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಮಂಗಳೂರು, ಮಾ.31; ಏಪ್ರಿಲ್ 1 ರಿಂದ 45 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲರಿಗೂ ಆರೋಗ್ಯ ಇಲಾಖೆಯಿಂದ ಕೋವಿಡ್ ಲಸಿಕೆ ನೀಡಲು ನಿರ್ಧರಿಸಲಾಗಿದ್ದು, ಒಟ್ಟು 5 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಜನರು ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆಯಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು ಬಳಿಕ ಈ ಮಾಹಿತಿ ನೀಡಿದರು. ಈಗಾಗಲೇ 3 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಎಪ್ರಿಲ್ ಒಂದರಿಂದ ಹೊಸದಾಗಿ 2 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಒಂದು ಕೇಂದ್ರದಲ್ಲಿ 100 ಮಂದಿ ಲಸಿಕೆ ಪಡೆದರೆ 5 ಲಕ್ಷ ಹಾಗೂ 50 ಮಂದಿ ಲಸಿಕೆ ಪಡೆದರೆ, ಎರಡೂವರೆ ಲಕ್ಷ ಜನರಿಗೆ ದಿನದಲ್ಲಿ ಲಸಿಕೆ ನೀಡಬಹುದು. ಜನರು ಸ್ವಯಂಪ್ರೇರಿತರಾಗಿ ಬರಬೇಕು ಎಂದು ಕೋರಿದರು.

ಕೇರಳಕ್ಕೂ ದಕ್ಷಿಣ ಕನ್ನಡಕ್ಕೂ ಅವಿನಾಭಾವ ಸಂಬಂಧ. ಈ ಎರಡು ಪ್ರದೇಶಗಳ ನಡುವೆ ಹೆಚ್ಚು ಜನರು ಸಂಚರಿಸುತ್ತಾರೆ. ಆರ್ ಟಿಪಿಸಿಆರ್ ನೆಗೆಟಿವ್ ವರದಿ ಪರೀಕ್ಷಿಸಬೇಕು ಎಂಬ ಮಾರ್ಗಸೂಚಿ ನಿಯಮವೂ ಇದೆ. ಬಿಗಿಯಾದ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡುತ್ತೇನೆ ಎಂದರು.

ಜಿಲ್ಲೆಯಲ್ಲಿ ಪ್ರತಿ ದಿನ 40-50 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಹೆಚ್ಚು ಸೋಂಕಿತ ಪ್ರಕರಣಗಳು ಕಂಡುಬರುತ್ತಿಲ್ಲ. ಆದರೂ ಕೋವಿಡ್ ನಡವಳಿಕೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಗಡಿಭಾಗ ಆಗಿರುವುದರಿಂದ ಎಚ್ಚರಕೆಯಿಂದಿರಬೇಕು. ಜಿಲ್ಲೆಯ ಆರೋಗ್ಯ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆದು ಬೇರೆಯವರಿಗೆ ಸ್ಪೂರ್ತಿ ನೀಡಬೇಕು, ಆರೋಗ್ಯ ಇಲಾಖೆಯ 20 ಶೇ. ಕಾರ್ಯಕರ್ತರು ಇನ್ನೂ ಲಸಿಕೆ ಪಡೆದಿಲ್ಲ. ಇತರರಿಗೆ ಸ್ಫೂರ್ತಿ ಆಗಬೇಕಾದವರು ಹೀಗೆ ವರ್ತಿಸಬಾರದು ಎಂದರು.

ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಶೇ.40 ರಷ್ಟು ಪ್ರಗತಿಯಾಗಿದೆ. ಇನ್ನೂ 60% ಗುರಿಯನ್ನು ತಲುಪಬೇಕಿದೆ. ಜಿಲ್ಲೆಯ ಎಲ್ಲ ಪಿಎಚ್ ಸಿಗಳಲ್ಲಿ ಕಾಂಪೌಂಡ್, ಕೈತೋಟವನ್ನು ಗ್ರಾಮ ಪಂಚಾಯಿತಿ ಯೋಜನೆಗಳಡಿ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದರು.

ಇದಕ್ಕೂ ಮುನ್ನ ಸಚಿವ ಸುಧಾಕರ್ ಮಂಗಳೂರು ತಾಲೂಕಿನ ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬಂಟ್ವಾಳದ ಪುಂಜಾಲಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ದ.ಕ. ಜಿಲ್ಲಾ ಆರೋಗ್ಯಧಿಕಾರಿಯಾಗಿ ನಿವೃತ್ತರಾದ ಡಾ. ರಾಮಚಂದ್ರ ಬಾಯರಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಆರೋಗ್ಯ ಸಚಿವ ಸುಧಾಕರ್ ಸನ್ಮಾನಿಸಿ ಗೌರವಿಸಿದರು. ಬಾಯರಿ ಮಾ.31ಕ್ಕೆ ತಮ್ಮ ಸೇವಾವಧಿಯ ಕೊನೆಯ ದಿನವನ್ನು ಆರೋಗ್ಯ ಸಚಿವರ ಜೊತೆ ಕಳೆದಿದ್ದಾರೆ.

Covid vaccine for all those above 45 years of age to be delivered stated Dr Sudhakar in Mangalore.