ಭಾರತ ಟಿ20 ತಂಡಕ್ಕೆ ಶ್ರೇಯಸ್‌ ಅಯ್ಯರ್‌, ಶಹಬಾಝ್ ಅಹ್ಮದ್‌?

27-09-22 01:30 pm       Source: Vijayakarnataka   ಕ್ರೀಡೆ

ದಕ್ಷಿಣ ಆಫ್ರಿಕಾ ವಿರುದ್ಧ ಸೆಪ್ಟಂಬರ್‌ 28 ರಿಂದ ಆರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಯ ಭಾರತ ತಂಡಕ್ಕೆ ಶ್ರೇಯಸ್‌ ಅಯ್ಯರ್‌.

ಮುಂಬೈ: ಬೆನ್ನು ನೋವಿನಿಂದ ಇನ್ನೂ ಗುಣಮುಖರಾಗದ ಆಲ್‌ರೌಂಡರ್‌ ದೀಪಕ್‌ ಹೂಡಾ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಶ್ರೇಯಸ್‌ ಅಯ್ಯರ್‌ ಹಾಗೂ ವಿಶ್ರಾಂತಿ ಪಡೆದಿರುವ ಹಾರ್ದಿಕ್‌ ಪಾಂಡ್ಯ ಸ್ಥಾನಕ್ಕೆ ಶಹಬಾಝ್ ಅಹ್ಮದ್‌ಗೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಹಾಲಿ ವಿಶ್ವ ಚಾಂಪಿಯನ್ಸ್‌ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿರುವ ಟೀಮ್‌ ಇಂಡಿಯಾ, ಇದೀಗ ತವರು ಅಂಗಣದಲ್ಲಿಯೇ ತೆಂಬಾ ಬವೂಮ ನಾಯಕತ್ವದ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ ಸೆಣಸಲಿದೆ. ಆರಂಭಿಕ ಪಂದ್ಯ ಸೆಪ್ಟೆಂಬರ್‌ 18ರಂದು ತಿರುವನಂತಪುರದಲ್ಲಿ ನಡೆಯಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟಿ20 ಪಂದ್ಯದ ನಿಮಿತ್ತ ಸ್ಪಿನ್‌ ಆಲ್‌ರೌಂಡರ್‌ ಶಹಬಾಝ್‌ ಅಹ್ಮದ್‌ ಹಾಗೂ ಶ್ರೇಯಸ್‌ ಅಯ್ಯರ್ ಅವರು ತಿರುವನಂತಪುರಂನಲ್ಲಿ ಭಾರತ ತಂಡವನ್ನು ಸೇರ್ಪಡೆಯಾಗಲಿದ್ದಾರೆಂದು ಸೋಮವಾರ ಪಿಟಿಐ ವರದಿ ಮಾಡಿದೆ.

Who is Shahbaz Ahmed, the all-rounder who replaced Washington in India's  squad? | Cricket - Hindustan Times

ಈ ಹಿಂದೆ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಗೆ ಗಾಯಾಳು ವಾಷಿಂಗ್ಟನ್‌ ಸುಂದರ್‌ ಅವರ ಸ್ಥಾನಕ್ಕೆ ಶಹಬಾಝ್‌ ಅಹ್ಮದ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಅವರಿಗೆ ಭಾರತ ತಂಡದ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಮತ್ತೊಂದೆಡೆ ಐಸಿಸಿ ಟಿ20 ವಿಶ್ವಕಪ್‌ ಭಾರತ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಸ್ಟ್ಯಾಂಡ್‌ ಬೈ ಆಗಿ ಸ್ಥಾನ ಪಡೆದುಕೊಂಡಿದ್ದರು.

India's tension increases Ahead Of T20 World Cup: Deepak Hooda And Hardik  Pandya To Not Play - The National Bulletin

ಭಾನುವಾರ ಹೈದರಾಬಾದ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯದ ಆಯ್ಕೆಗೆ ದೀಪಕ್‌ ಹೂಡ ಲಭ್ಯರಾಗಿರಲಿಲ್ಲ. ದೀಪಕ್‌ ಹೂಡ ಬೆನ್ನು ನೋವಿನಿಂದ ಬಳಲುತ್ತಿದ್ದಾರೆಂದು ಈ ವೇಳೆ ಬಿಸಿಸಿಐ ಸ್ಪಷ್ಟಪಡಿಸಿತ್ತು. ಮುಂಬರುವ ಟಿ20 ವಿಶ್ವಕಪ್‌ ಟೂರ್ನಿಗೆ ದೀಪಕ್‌ ಹೂಡ ಅವರನ್ನು ಪರಿಗಣಿಸಲಾಗುತ್ತದೆಯೇ ಅಥವಾ ಇಲ್ಲವೆ ಎಂಬುದನ್ನು ಇನ್ನೂ ಬಿಸಿಸಿಐ ಸ್ಪಷ್ಟಪಡಿಸಿಲ್ಲ.

ಮೊಹಮ್ಮದ್‌ ಶಮಿ ಸ್ಥಾನಕ್ಕೆ ಉಮ್ರಾನ್‌ ಮಲಿಕ್?: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಒಂದು ದಿನ ಮುನ್ನ ಕೋವಿಡ್‌-19 ಸೋಂಕಿಗೆ ಮೊಹಮ್ಮದ್‌ ಶಮಿ ತುತ್ತಾಗಿದ್ದರು. ಈ ಕಾರಣ ಬದಲಿ ವೇಗಿಯಾಗಿ ಉಮೇಶ್ ಯಾದವ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಮೊದಲ ಪಂದ್ಯದಲ್ಲಿ 2 ವಿಕೆಟ್‌ ಪಡೆದಿದ್ದ ಉಮೇಶ್‌ ಯಾದವ್‌ ಹೆಚ್ಚು ರನ್‌ ಬಿಟ್ಟುಕೊಟ್ಟ ಕಾರಣ, ಉಳಿದೆರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಅವರ ಜಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಕೋವಿಡ್‌ ಸೋಂಕಿನಿಂದ ಶಮಿ ಸಂಪೂರ್ಣ ಚೇತರಿಸದೇ ಇರುವ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ. ಅವರು ಅಲಭ್ಯರಾಗಿದ್ದೇ ಆದರೆ 'ಜಮ್ಮು ಎಕ್ಸ್‌ಪ್ರೆಸ್‌' ಖ್ಯಾತಿಯ ಯುವ ವೇಗಿ ಉಮ್ರಾನ್‌ ಮಲಿಕ್‌ ಭಾರತ ತಂಡ ಸೇರಲಿದ್ದಾರೆ ಎಂದು ವರದಿಗಳು ಹೇಳಿವೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ಟಿ20 ತಂಡ ಹೀಗಿದೆ
ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌ (ಉಪನಾಯಕ), ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಅರ್ಷದೀಪ್‌ ಸಿಂಗ್‌, ರವಿಚಂದ್ರನ್ ಅಶ್ವಿನ್‌, ಜಸ್‌ಪ್ರೀತ್‌ ಬುಮ್ರಾ, ಯುಜ್ವೇಂದ್ರ ಚಹಲ್, ದೀಪಕ್ ಚಹರ್‌, ದೀಪಕ್ ಹೂಡ (ಫಿಟ್ನೆಸ್‌ ಖಾತ್ರಿಯಾಗಬೇಕಿದೆ), ದಿನೇಶ್‌ ಕಾರ್ತಿಕ್‌ (ವಿಕೆಟ್‌ಕೀಪರ್‌/ಬ್ಯಾಟ್ಸ್‌ಮನ್‌), ರಿಷಭ್ ಪಂತ್‌ (ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌), ಮೊಹಮ್ಮದ್‌ ಶಮಿ (ಫಿಟ್ನೆಸ್‌ ಖಾತ್ರಿಯಾಗಬೇಕಿದೆ), ಅಕ್ಷರ್‌ ಪಟೇಲ್, ಹರ್ಷಲ್‌ ಪಟೇಲ್‌.

ಭಾರತ ತಂಡಕ್ಕೆ ಸೇರ್ಪಡೆಯಾಗಬಲ್ಲ ಆಟಗಾರರು
ಗಾಯಾಳು ದೀಪಕ್‌ ಹೂಡ ಸ್ಥಾನಕ್ಕೆ ಶ್ರೇಯಸ್‌ ಅಯ್ಯರ್‌
ಹಾರ್ದಿಕ್‌ ಪಾಂಡ್ಯ ಸ್ಥಾನಕ್ಕೆ ಶಹಬಾಝ್‌ ಅಹ್ಮದ್‌
ಮೊಹಮ್ಮದ್‌ ಶಮಿ ಸ್ಥಾನಕ್ಕೆ ಉಮ್ರಾನ್‌ ಮಲಿಕ್‌

 

Ind Vs Sa T20i Series 2022 Shreyas Iyer, Shahbaz Ahmed Replace Deepak Hooda, Hardik Pandya For T20i Series.