ST Somasekhar: ಬಿಜೆಪಿಯ 10 ರಿಂದ 12 ಸ್ಥಾನ ಖಾಲಿ ಆಗುತ್ತೆ, ಬಿಜೆಪಿಗೆ ಮರ್ಯಾದೆ ಇರ್ತಿದ್ರೆ ಏಡ್ಸ್ ಇಂಜೆಕ್ಷನ್ ಕೊಟ್ಟವರನ್ನು ಸಸ್ಪೆಂಡ್ ಮಾಡಬೇಕಿತ್ತು.. ಸೋಮಶೇಖರ್ ವಾಗ್ದಾಳಿ, ಕಾಂಗ್ರೆಸ್ ಸೇರಿಸ್ಕೊಳಲ್ಲ ; ಖಂಡ್ರೆ 

27-05-25 11:17 pm       Bangalore Correspondent   ಕರ್ನಾಟಕ

ಪಕ್ಷವಿರೋಧಿ ಚಟುವಟಿಕೆಗಾಗಿ ಬಿಜೆಪಿ ಪಕ್ಷದಿಂದ ತನ್ನನ್ನು ಉಚ್ಛಾಟನೆ ಮಾಡಿದ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಎಸ್.ಟಿ ಸೋಮಶೇಖರ್, ಚುನಾವಣೆ ನಡೆದಲ್ಲಿ ಬಿಜೆಪಿಯ 10 ರಿಂದ 12 ಶಾಸಕ ಸ್ಥಾನಗಳು ಖಾಲಿಯಾಗುತ್ತವೆ.‌ ಅಮವಾಸ್ಯೆ ದಿನ ಒಳ್ಳೆ ನಿರ್ಧಾರ ಕೈಗೊಂಡಿದ್ದಾರೆ ಎಂದಿದ್ದಾರೆ. 

ಬೆಂಗಳೂರು, ಮೇ 28 : ಪಕ್ಷವಿರೋಧಿ ಚಟುವಟಿಕೆಗಾಗಿ ಬಿಜೆಪಿ ಪಕ್ಷದಿಂದ ತನ್ನನ್ನು ಉಚ್ಛಾಟನೆ ಮಾಡಿದ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಎಸ್.ಟಿ ಸೋಮಶೇಖರ್, ಚುನಾವಣೆ ನಡೆದಲ್ಲಿ ಬಿಜೆಪಿಯ 10 ರಿಂದ 12 ಶಾಸಕ ಸ್ಥಾನಗಳು ಖಾಲಿಯಾಗುತ್ತವೆ.‌ ಅಮವಾಸ್ಯೆ ದಿನ ಒಳ್ಳೆ ನಿರ್ಧಾರ ಕೈಗೊಂಡಿದ್ದಾರೆ ಎಂದಿದ್ದಾರೆ. 

'ಪಕ್ಷದಿಂದ ನಮ್ಮನ್ನು ಉಚ್ಚಾಟನೆ ಮಾಡುತ್ತಾರೆ ಎಂದು ಗೊತ್ತಿತ್ತು. ಆದ್ರೆ ಯಾವಾಗ ಉಚ್ಚಾಟನೆ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. 6 ವರ್ಷಗಳ ಕಾಲ ನನ್ನನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದಾರೆ. ನೋಟಿಸ್​ ಕೊಡುವ ಮುನ್ನ ಅಮಿತ್ ಶಾ ನನ್ನ ಜತೆ ಮಾತಾಡಿದ್ದರು. ಕ್ಷೇತ್ರದಲ್ಲಿರುವ ಭಿನ್ನಮತದ ಬಗ್ಗೆ ಅಮಿತ್ ಶಾ ಜತೆ ಮಾತನಾಡಿದ್ದೆ. ಸಮಸ್ಯೆ ಬಗೆಹರಿಸದಿದ್ದರೆ ಪಕ್ಷ ತೊರೆಯುವುದಾಗಿ ಹೇಳಿದ್ದೆ. ಬಿಜೆಪಿಯ ಯಾರೂ ನನ್ನನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಅಮಾವಾಸ್ಯೆಯ ದಿನ ಒಳ್ಳೆಯದು ಮಾಡಿದ್ದಾರೆ ಎಂದರು. 

ಸದ್ಯಕ್ಕೆ ನಮ್ಮ ಕೆಲಸವನ್ನು ನಾವು ಮಾಡಿಕೊಂಡು ಹೋಗುತ್ತೇವೆ. ಚುನಾವಣೆ ಘೋಷಣೆಯಾದಾಗ ಮುಂದಿನ ನಿರ್ಧಾರ ತಿಳಿಸುತ್ತೇವೆ. ಚುನಾವಣೆ ವೇಳೆಗೆ ಬಿಜೆಪಿಯಲ್ಲಿ ಇನ್ನೂ 10-12 ಸೀಟ್​ ಖಾಲಿ ಆಗುತ್ತೆ. ಉಚ್ಚಾಟನೆ ಮಾಡಿದವರಿಗೆ ಚಾಮುಂಡೇಶ್ವರಿ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದರು.

ಇದೇ ವೇಳೆ ನಮ್ಮ ಉಚ್ಚಾಟನೆಗೂ, ಯತ್ನಾಳ್ ಉಚ್ಚಾಟನೆಗೂ ತುಂಬಾ ವ್ಯತ್ಯಾಸವಿದೆ. ಯತ್ನಾಳ್​ ರನ್ನ ಅಂದೇ ಉಚ್ಚಾಟಿಸಿದ್ದರೆ ಬಿಜೆಪಿ ಸರ್ಕಾರ ಹೋಗುತ್ತಿರಲಿಲ್ಲ. ಬಿಜೆಪಿಯ ಒಬ್ಬ ಶಾಸಕ ವಿಧಾನಸೌಧದಲ್ಲಿ ರೇಪ್ ಮಾಡುತ್ತಾನೆ. ವಿಪಕ್ಷ ನಾಯಕರಿಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಪ್ರಯತ್ನ ಮಾಡುತ್ತಾರೆ. ಒಕ್ಕಲಿಗ ಹೆಣ್ಮಗಳನ್ನು ಮಂಚಕ್ಕೆ ಕರೆಯುವುದನ್ನು ಎಲ್ಲಾದ್ರೂ ಕೇಳಿದ್ದೀರಾ? ಬಿಜೆಪಿ ಪ್ರಾಮಾಣಿಕ ಪಕ್ಷ ಆಗಿದ್ದರೆ ಇಂತಹವರನ್ನು ಸಸ್ಪೆಂಡ್ ಮಾಡಬೇಕಿತ್ತು ಎಂದು ಸೋಮಶೇಖರ್ ಪರೋಕ್ಷವಾಗಿ ಶಾಸಕ ಮುನಿರತ್ನ ವಿರುದ್ಧವೂ ಕ್ರಮ ಜರುಗಿಸಲಿ ಎಂದು ವಾಗ್ದಾಳಿ ನಡೆಸಿದರು. 

ಉಚ್ಚಾಟನೆಯಲ್ಲಿ ಬಿಎಸ್​ವೈ, ವಿಜಯೇಂದ್ರರದ್ದು ಯಾವ ಪಾತ್ರ. ಉಳಿದ ನಾಯಕರೂ ಉಳಿಸಿಕೊಳ್ಳಲು ಪ್ರಯತ್ನ ಮಾಡಲಿಲ್ಲ. ನಾನಾಗಿ ಹೋಗಿ ಮೇಲೆ ಬಿದ್ದು ಕೇಳುವ ಮನಸ್ಸು ನನ್ನದಲ್ಲ. ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಉಳಿಸಿಕೊಳ್ಳುವ ಪ್ರಯತ್ನ ಮಾಡ್ಲಿಲ್ಲ. ಅವರು ಪ್ರಯತ್ನ ಮಾಡಿದ್ದರೆ ಇಂದು ನಾನು ಉಚ್ಚಾಟನೆ ಆಗುತ್ತಿರಲಿಲ್ಲ ಎಂದು ಸೋಮಶೇಖರ್ ಕಿಡಿಕಾರಿದರು. 

ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು, ಡಿಕೆ ಶಿವಕುಮಾರ್. ಸಹಕಾರ ಕ್ಷೇತ್ರದಲ್ಲಿ ನಾನು ಬೆಳೆಯಲು ಡಿ.ಕೆ.ಶಿವಕುಮಾರ್ ಕಾರಣ. ಉತ್ತರಹಳ್ಳಿ ಟಿಕೆಟ್ ಸಿಗಲು ಡಿ.ಕೆ.ಶಿವಕುಮಾರ್ ಅವರೇ ಕಾರಣ. ಖರ್ಗೆ, ಪರಮೇಶ್ವರ್ ಯಶವಂತಪುರ ಕ್ಷೇತ್ರದ ಟಿಕೆಟ್ ಕೊಡಿಸಿದರು. ಹಿಂದೆ ಕಾಂಗ್ರೆಸ್​ನಲ್ಲಿದ್ದ ಕಾರಣಕ್ಕೆ ಅನುದಾನ ಕೇಳುವ ಕೆಲಸ ಮಾಡಿದೆ. ಅದರಿಂದಾಗಿ ಇವರು ಪಕ್ಷಕ್ಕೆ ಮುಜುಗರ ಆಗುತ್ತೆ ಎನ್ನುವುದಾದರೆ ರೇಪ್, ಏಡ್ಸ್ ಇಂಜೆಕ್ಷನ್ ಯಾವುದೂ ಮುಜುಗರ ಅಲ್ಲವೇ? ಎಂದು ಸೋಮಶೇಖರ್ ಪ್ರಶ್ನಿಸಿದರು.

ನಾವು 2028ರ ವರೆಗೆ ಶಾಸಕರಾಗಿಯೇ ಇರುತ್ತೇವೆ. 2028ಕ್ಕೆ ಮತ್ತೆ ಕಾಂಗ್ರೆಸ್‌ನಿಂದಲೇ ಸ್ಪರ್ಧೆ ಮಾಡುತ್ತೇನೆ. ಅದು ಯಾವ ಬಿಜೆಪಿಯವರು ನನ್ನನ್ನು ಸೋಲಿಸಲು ಬರುತ್ತಾರೋ ನೋಡೋಣ ಎಂದು ಸವಾಲೆಸೆದರು. 

ಕಾಂಗ್ರೆಸ್ ಗೆ ಸೇರಿಸ್ಕೊಳ್ಳಲ್ಲ ; ಈಶ್ವರ್ ಖಂಡ್ರೆ 

ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಈಶ್ವರ್ ಖಂಡ್ರೆ ಬಿಜೆಪಿ ಉಚ್ಛಾಟಿತ ನಾಯಕರಾದ ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇಬ್ಬರೂ ನಾಯಕರು ಹಿಂದೆ ಕಾಂಗ್ರೆಸ್ ನಲ್ಲಿದ್ದವರೇ.. ಆದರೆ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

Reacting for the first time to the issue of his expulsion from the BJP party due to anti-party activities, MLA ST Somashekar has warned that 10 to 12 BJP MLA seats will become vacant.