ಕಾಂಗ್ರೆಸ್‌ಗೆ ಮತ ಹಾಕುವ ಬದಲು ಕುಕ್ಕರ್ ಅಥವಾ ಎಸ್‌ಡಿಪಿಐಗೆ ಮತ ಹಾಕಲಿ ; ಸಂಪುಟ ರಚನೆ ಹೊತ್ತಲ್ಲೇ ಜಮೀರ್ ಗೆ ಆಡಿಯೋ ಶಾಕ್, ಶಿಸ್ತುಕ್ರಮಕ್ಕೆ ಆಗ್ರಹ !

01-06-26 09:44 pm       HK News Staffer   ಕರ್ನಾಟಕ

ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಜಮೀರ್ ಅಹಮದ್ ಖಾನ್ ವಿರುದ್ಧ ಇದೀಗ ಹೊಸ ವಿವಾದ ಸ್ಫೋಟಗೊಂಡಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗೆ ವಿರುದ್ಧವಾಗಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಸೂಚಿಸಿರುವುದಾಗಿ ಹೇಳಲಾಗಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಬೆಂಗಳೂರು, ಜೂನ್ 01: ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಜಮೀರ್ ಅಹಮದ್ ಖಾನ್ ವಿರುದ್ಧ ಇದೀಗ ಹೊಸ ವಿವಾದ ಸ್ಫೋಟಗೊಂಡಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗೆ ವಿರುದ್ಧವಾಗಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಸೂಚಿಸಿರುವುದಾಗಿ ಹೇಳಲಾಗಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

'ಕಾಕ್ರೋಚ್ ಪಾರ್ಟಿ' ಹೆಸರಿನ ಎಕ್ಸ್ ಖಾತೆಯಲ್ಲಿ ಬಿಡುಗಡೆಗೊಂಡಿರುವ ಈ ಆಡಿಯೋದಲ್ಲಿ ಜಮೀರ್ ಅಹಮದ್ ಮತ್ತು ದಾವಣಗೆರೆಯ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಸಿರಾಜ್ ನಡುವಿನ ಸಂಭಾಷಣೆ ಇದೆ ಎಂದು ಹೇಳಲಾಗುತ್ತಿದೆ.

ಆಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ಆಡಿಯೋದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾನದ ಕುರಿತು ಚರ್ಚೆ ನಡೆಯುತ್ತಿದ್ದು, "ಮುಸ್ಲಿಂ ಮತದಾರರನ್ನು ಬಲವಂತವಾಗಿ ಮತಗಟ್ಟೆಗೆ ಕರೆತರಬೇಡಿ", "ಕಾಂಗ್ರೆಸ್‌ಗೆ ಮತ ಹಾಕುವ ಬದಲು ಕುಕ್ಕರ್ (ಪಕ್ಷೇತರ ಅಭ್ಯರ್ಥಿ) ಅಥವಾ ಎಸ್‌ಡಿಪಿಐಗೆ ಮತ ಹಾಕಲಿ" ಎಂಬ ಮಾತುಗಳು ಕೇಳಿಬಂದಿವೆ ಎನ್ನಲಾಗಿದೆ.

ಸಂಭಾಷಣೆಯಲ್ಲಿ ಮತದಾನದ ಪ್ರಮಾಣ ಕಡಿಮೆ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಧ್ವನಿಯೊಂದು, "ಇದು ನನ್ನ ಮರ್ಯಾದೆಯ ಪ್ರಶ್ನೆ, ನನಗೆ ರಾತ್ರಿ ನಿದ್ದೆಯೇ ಬಂದಿಲ್ಲ" ಎಂದು ಹೇಳಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ.

ಇದೇ ವೇಳೆ, ಮತ್ತೊಂದು ಧ್ವನಿ "ನಾವು ಕುಕ್ಕರ್‌ಗೆ ಮಾತ್ರ ಮತ ಕೇಳಿದ್ದೇವೆ" ಎಂದು ಹೇಳಿರುವುದು ಆಡಿಯೋದಲ್ಲಿನ ಅತ್ಯಂತ ವಿವಾದಾತ್ಮಕ ಭಾಗವಾಗಿದೆ.

ಸಚಿವ ಸ್ಥಾನದ ಲಾಬಿ ನಡುವೆಯೇ ಸ್ಫೋಟ
ವಿಶೇಷವೆಂದರೆ, ನೂತನ ಸಚಿವ ಸಂಪುಟ ರಚನೆ ಕುರಿತು ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಈ ಆಡಿಯೋ ವೈರಲ್ ಆಗಿದೆ. ಜಮೀರ್ ಅಹಮದ್ ಅವರಿಗೆ ಪ್ರಮುಖ ಖಾತೆ ಅಥವಾ ಉನ್ನತ ಸ್ಥಾನ ಸಿಗಬಹುದು ಎಂಬ ರಾಜಕೀಯ ಲೆಕ್ಕಾಚಾರಗಳ ನಡುವೆ ಈ ಬೆಳವಣಿಗೆ ಕಾಂಗ್ರೆಸ್ ನಾಯಕರಲ್ಲೂ ಅಚ್ಚರಿ ಮೂಡಿಸಿದೆ.

"ಇದು ನನ್ನ ಧ್ವನಿ ಅಲ್ಲ" – ಜಮೀರ್ ಸಮರ್ಥನೆ?

ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಈ ವಿಚಾರ ದೊಡ್ಡ ವಿವಾದವಾಗುವ ಮುನ್ನವೇ ಜಮೀರ್ ಅಹಮದ್ ಅವರು ಕಾಂಗ್ರೆಸ್ ನಾಯಕತ್ವಕ್ಕೆ ತಮ್ಮ ವಿವರಣೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಆಡಿಯೋದಲ್ಲಿರುವ ಧ್ವನಿ ತಮ್ಮದಲ್ಲ ಎಂದು ಹೇಳಿರುವ ಅವರು, ಇದು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ಆಡಿಯೋ ಆಗಿದ್ದು, ತಮ್ಮ ರಾಜಕೀಯ ಭವಿಷ್ಯಕ್ಕೆ ಧಕ್ಕೆ ತರುವ ಉದ್ದೇಶದಿಂದ ರೂಪಿಸಿದ ಷಡ್ಯಂತ್ರ ಎಂದು ಸಮರ್ಥಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ಜಮೀರ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿ ವರಿಷ್ಠರಿಗೆ ಸ್ಥಳೀಯ ಮುಖಂಡರು ಪತ್ರ ಬರೆದಿದ್ದಾರೆ.

ಮಾಜಿ ಮೇಯ‌ರ್ ಕೆ. ಚಮನ್ ಸಾಬ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ ಅವರು ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾ‌ರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಪತ್ರದ ಮೂಲಕ ಮನವಿ ಮಾಡಿದ್ದಾರೆ.