ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮಹಿಳೆಯ ಚಿನ್ನದ ಸರ ಕದ್ದ ತಮಿಳು ಕಳ್ಳಿಯರು ; ಕುಂದಾಪುರ ಠಾಣೆಗೆ ದೂರು

15-09-26 09:19 pm       HK News Staffer   ಕ್ರೈಂ

ಗಣೇಶ ಹಬ್ಬದ ಪ್ರಯುಕ್ತ ಪ್ರಸಿದ್ಧ ಕುಂಭಾಶಿ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ 75 ವರ್ಷದ ವೃದ್ಧೆಯೊಬ್ಬರ ಕುತ್ತಿಗೆಯಿಂದ ಸುಮಾರು 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಅಪರಿಚಿತ ಮಹಿಳೆಯರ ತಂಡವೊಂದು ಸುಲಿಗೆ ಮಾಡಿರುವ ಘಟನೆ ನಡೆದಿದೆ.

ಉಡುಪಿ, ಸೆ.15: ಗಣೇಶ ಹಬ್ಬದ ಪ್ರಯುಕ್ತ ಪ್ರಸಿದ್ಧ ಕುಂಭಾಶಿ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ 75 ವರ್ಷದ ವೃದ್ಧೆಯೊಬ್ಬರ ಕುತ್ತಿಗೆಯಿಂದ ಸುಮಾರು 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಅಪರಿಚಿತ ಮಹಿಳೆಯರ ತಂಡವೊಂದು ಸುಲಿಗೆ ಮಾಡಿರುವ ಘಟನೆ ನಡೆದಿದೆ. ಬೈಂದೂರು ತಾಲೂಕಿನ ನಡ ಗ್ರಾಮದ ನಿವಾಸಿ ಮುತ್ತು (75) ಎಂಬವರು ಸರ ಕಳಕೊಂಡವರಾಗಿದ್ದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸೆ.14ರಂದು ಬೆಳಗ್ಗೆ 10:30 ಗಂಟೆಗೆ ಮುತ್ತು ಅವರು ಕುಟುಂಬಸ್ಥರೊಂದಿಗೆ ಆನೆಗುಡ್ಡೆ ದೇವಸ್ಥಾನಕ್ಕೆ ಆಗಮಿಸಿದ್ದರು. ದೇವಸ್ಥಾನದ ಒಳಗೆ ದೇವರ ದರ್ಶನ ಪಡೆದು, ತೀರ್ಥ ಪ್ರಸಾದ ಸ್ವೀಕರಿಸಿ ಪ್ರದಕ್ಷಿಣೆ ಬರುತ್ತಿದ್ದಾಗ ಸುಲಿಗೆ ಕೃತ್ಯ ನಡೆದಿದೆ ಎನ್ನಲಾಗಿದೆ. 

ಜನಸಂದಣಿಯ ಲಾಭ ಪಡೆದ ತಮಿಳು ಭಾಷಿಕರಂತೆ ಕಾಣುವ 2 ರಿಂದ 3 ಅಪರಿಚಿತ ಮಹಿಳೆಯರ ತಂಡವು, ಮುತ್ತು ಅವರ ಕುತ್ತಿಗೆಯಲ್ಲಿದ್ದ ಸುಮಾರು 22 ಗ್ರಾಂ ತೂಕದ ಚಿನ್ನದ ಚೈನ್‌ ಅನ್ನು ಸದ್ದಿಲ್ಲದೆ ಎಳೆದುಕೊಂಡು ಪರಾರಿಯಾಗಿದೆ. ಕಳವಾದ ಚಿನ್ನದ ಸರದ ಒಟ್ಟು ಮೌಲ್ಯ ಸುಮಾರು 2,50,000 ರೂಪಾಯಿ ಎಂದು ಅಂದಾಜಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 76/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 309(4) ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೇವಸ್ಥಾನದ ಆವರಣದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ತಮಿಳುನಾಡು ಮೂಲದ ಅಂತರಾಜ್ಯ ಕಳ್ಳರ ಗ್ಯಾಂಗ್ ಈ ಕೃತ್ಯ ಎಸಗಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಸಿದ್ದಾರೆ.