Ramanath Rai, Mangalore, Tulu, Cabinet Meeting: ಮಂಗಳೂರು ಕ್ಯಾಬಿನೆಟ್ ಸಭೆಗೆ BJP ಕಪ್ಪು ಬಾವುಟ ಏಕೆ ? ; ಕಪ್ಪು ಬಾವುಟ ಬದಲು ತುಳು ಭಾಷೆಗಾಗಿ ಹೋರಾಡಿ ಎಂದ ರಮಾನಾಥ ರೈ

16-09-26 04:32 pm       HK News Staffer   ಕರಾವಳಿ

ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಹೆಮ್ಮೆ ಹಾಗೂ ಸಂತೋಷದ ವಿಚಾರ. ಈ ಐತಿಹಾಸಿಕ ಸಭೆಯನ್ನು ಎಲ್ಲರೂ ಪಕ್ಷಾತೀತವಾಗಿ ಸ್ವಾಗತಿಸಿ, ಕರಾವಳಿ ಭಾಗದ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಮಂಗಳೂರು , ಸೆಪ್ಟೆಂಬರ್ 16: ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಹೆಮ್ಮೆ ಹಾಗೂ ಸಂತೋಷದ ವಿಚಾರ. ಈ ಐತಿಹಾಸಿಕ ಸಭೆಯನ್ನು ಎಲ್ಲರೂ ಪಕ್ಷಾತೀತವಾಗಿ ಸ್ವಾಗತಿಸಿ, ಕರಾವಳಿ ಭಾಗದ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಬಿಜೆಪಿ ಕಪ್ಪು ಬಾವುಟ ಪ್ರದರ್ಶನಕ್ಕೆ ಆಕ್ಷೇಪ

ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಬಿಜೆಪಿಯವರು ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಹೇಳಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕರಾವಳಿ ಭಾಗಕ್ಕೆ ಸಚಿವ ಸಂಪುಟ ಸಭೆ ಬೇಡವೇ ಎಂದು ಪ್ರಶ್ನಿಸಿದ ರಮಾನಾಥ ರೈ, ಜಾಮರ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ತುಳು ಭಾಷೆ ವಿಚಾರ: ಬಿಜೆಪಿ ಸಂಸದರು, ಶಾಸಕರಿಗೆ ಸವಾಲು

ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕೆಂಬುದು ಬಹುಕಾಲದ ಬೇಡಿಕೆಯಾಗಿದೆ. ಸೆಪ್ಟೆಂಬರ್ 18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸಕಾರಾತ್ಮಕ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ರಮಾನಾಥ ರೈ ಹೇಳಿದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬಹುತೇಕ ಜನಪ್ರತಿನಿಧಿಗಳು ಬಿಜೆಪಿಯವರಾಗಿದ್ದು, ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರವಿದೆ. ಹೀಗಾಗಿ ಸಚಿವ ಸಂಪುಟ ಸಭೆಗೆ ಕಪ್ಪು ಬಾವುಟ ತೋರಿಸುವ ಬದಲು, ಬಿಜೆಪಿ ಸಂಸದರು ಮತ್ತು ಶಾಸಕರು ಪ್ರಧಾನಮಂತ್ರಿಗಳ ಬಳಿ ತೆರಳಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ ಬದ್ಧತೆ ಪ್ರದರ್ಶಿಸಬೇಕು ಎಂದು ಅವರು ಕರೆ ನೀಡಿದರು.

ಬಡವರು, ಶೋಷಿತರ ಪರ ಕಾಂಗ್ರೆಸ್: ರೈ

ಕಾಂಗ್ರೆಸ್ ಬಡವರು ಮತ್ತು ಶೋಷಿತರ ಪರವಾಗಿ ಕೆಲಸ ಮಾಡಿಕೊಂಡು ಬಂದಿದೆ ಎಂದು ರಮಾನಾಥ ರೈ ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ-ಸಕ್ರಮ ಹಾಗೂ 94ಸಿ ಅಡಿಯಲ್ಲಿ ಬಡವರ ಮನೆ ಮತ್ತು ನಿವೇಶನಗಳನ್ನು ಸಕ್ರಮಗೊಳಿಸುವ ಯೋಜನೆಯಲ್ಲಿ ಬಂಟ್ವಾಳ ತಾಲೂಕು ರಾಜ್ಯದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.

ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ 5 ಸೆಂಟ್ಸ್ ಇದ್ದ ಮಿತಿಯನ್ನು 9 ಸೆಂಟ್ಸ್‌ಗೆ ಹೆಚ್ಚಿಸಲಾಗಿತ್ತು. ಅಲ್ಲದೆ, ಕುಮ್ಕಿ ಹಾಗೂ ಗೋಮಾಳ ಜಮೀನಿನಲ್ಲಿ ನೆಲೆಸಿದ್ದವರಿಗೂ ಹಕ್ಕು ನೀಡುವ ಕ್ರಾಂತಿಕಾರಿ ಆದೇಶ ಮಾಡಲಾಗಿತ್ತು ಎಂದು ರೈ ಹೇಳಿದರು.

ಬ್ಯಾಂಕ್ ರಾಷ್ಟ್ರೀಕರಣ, ಇಂದಿರಾ ಗಾಂಧಿಯವರ 20 ಅಂಶಗಳ ಕಾರ್ಯಕ್ರಮ, ಋಣ ಪರಿಹಾರ ಕಾಯ್ದೆ ಹಾಗೂ ಇತ್ತೀಚಿನ ಐದು ಗ್ಯಾರಂಟಿ ಯೋಜನೆಗಳ ಗರಿಷ್ಠ ಪ್ರಯೋಜನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನರು ಪಡೆದುಕೊಂಡಿದ್ದಾರೆ ಎಂದರು.

ಸಚಿವ ಸಂಪುಟ ಸಭೆಗೆ ಪ್ರಮುಖ ಬೇಡಿಕೆಗಳ ಸಲ್ಲಿಕೆ

ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸಂಬಂಧಿಸಿದ ಡಿಸಿ ಮನ್ನಾ ಜಮೀನಿನ ಸಮಸ್ಯೆಗೆ ಯಾವುದೇ ಆರ್ಥಿಕ ಹೊರೆಯಿಲ್ಲದೆ ಕಾನೂನಾತ್ಮಕ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ರಮಾನಾಥ ರೈ ತಿಳಿಸಿದರು.

ಅದೇ ರೀತಿ, ತುಳುನಾಡಿನ ದೈವಾರಾಧನೆ ಹಾಗೂ ಭೂತಾರಾಧನೆಯಲ್ಲಿ ಸೇವೆ ಸಲ್ಲಿಸುವ ಪಾತ್ರಿಗಳು, ಗಡಿಗಾರರು ಸೇರಿದಂತೆ ಚಾಕ್ರಿ ವರ್ಗದವರಿಗೆ ಮುಜರಾಯಿ ಇಲಾಖೆಯ ಸಾಮಾನ್ಯ ಸಂಗ್ರಹಣಾ ನಿಧಿಯ ಮೂಲಕ ಗೌರವಯುತ ವೇತನ ಶ್ರೇಣಿ ಅಥವಾ ಮಾಸಾಶನ ಒದಗಿಸಬೇಕು ಎಂಬ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಬಿ.ಎಲ್. ಪದ್ಮನಾಭ ಕೋಟ್ಯಾನ್ ಅವರ ಬೇಡಿಕೆಯನ್ನು ಮುಖ್ಯಮಂತ್ರಿ ಅವರ ಮುಂದಿಡಲಾಗುವುದು ಎಂದರು.

‘ಪ್ರಜಾಸೌಧ’ ಕಾಂಗ್ರೆಸ್ ಸರ್ಕಾರದ ಕೊಡುಗೆ

ಸಚಿವ ಸಂಪುಟ ಸಭೆ ನಡೆಯಲಿರುವ ಪಡೀಲ್‌ನ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮಂಜೂರಾಗಿ ನಿರ್ಮಾಣಗೊಂಡಿದೆ ಎಂದು ರಮಾನಾಥ ರೈ ಹೇಳಿದರು. ಇಂದು ಅದೇ ಕಟ್ಟಡದಲ್ಲಿ ಇಡೀ ರಾಜ್ಯ ಸಚಿವ ಸಂಪುಟದ ಸಭೆ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸಾಹುಲ್ ಹಮೀದ್, ಬಿ.ಎಲ್. ಪದ್ಮನಾಭ ಕೋಟ್ಯಾನ್, ಆರ್.ಕೆ. ಪೃಥ್ವಿರಾಜ್, ಮಲಾರ್ ಮೋನು, ನೀರಜ್ ಚಂದ್ರ ಪಾಲ್, ಎಸ್. ಅಪ್ಪಿ, ಸಬೀರ್ ಎಸ್., ನವಾಜ್ ಬಡಕಬೈಲ್, ಯೋಗೀಶ್ ಕುಮಾರ್ ಹಾಗೂ ನಝೀರ್ ಬಜಾಲ್ ಉಪಸ್ಥಿತರಿದ್ದರು.