ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂಪರ್‌ ಫಾಸ್ಟ್‌’ ಎಂದು ಫಲಕ ಹಾಕಿ ಪ್ರಯಾಣಿಕರಿಂದ ದುಬಾರಿ ಶುಲ್ಕ ವಸೂಲಿ ; ರೈಲ್ವೇ ಯಾತ್ರಿಕರಿಂದ ಆಕ್ಷೇಪ

19-08-26 09:55 pm       HK News Staffer   ಕರ್ನಾಟಕ

ವಿದೇಶದಲ್ಲಿ ರೈಲುಗಳು 350 ಕಿಮೀ ವೇಗದಲ್ಲಿ ಸಂಚರಿಸುತ್ತಿದ್ದರೆ, ಭಾರತದಲ್ಲಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂಪರ್‌ ಫಾಸ್ಟ್‌’ ಎಂದು ಫಲಕ ಹಾಕಿಕೊಂಡು ಪ್ರಯಾಣಿಕರಿಂದ ದುಬಾರಿ ಮೊತ್ತ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ದೇಶದಲ್ಲಿ ‘ಸೂಪರ್‌ ಫಾಸ್ಟ್‌’ ಹೆಸರಿನ ವ್ಯಾಖ್ಯಾನವನ್ನು ಪರಿಷ್ಕರಿಸಬೇಕು ಎಂದು ಮುಂಬೈ ರೈಲು ಯಾತ್ರಿ ಸಂಘ (ಬೊರಿವಿಲಿ) ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಒಲಿವರ್ ಡಿಸೋಜಾ ರೈಲ್ವೆ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಬೆಂಗಳೂರು, ಆ.19: ವಿದೇಶದಲ್ಲಿ ರೈಲುಗಳು 350 ಕಿಮೀ ವೇಗದಲ್ಲಿ ಸಂಚರಿಸುತ್ತಿದ್ದರೆ, ಭಾರತದಲ್ಲಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂಪರ್‌ ಫಾಸ್ಟ್‌’ ಎಂದು ಫಲಕ ಹಾಕಿಕೊಂಡು ಪ್ರಯಾಣಿಕರಿಂದ ದುಬಾರಿ ಮೊತ್ತ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ದೇಶದಲ್ಲಿ ‘ಸೂಪರ್‌ ಫಾಸ್ಟ್‌’ ಹೆಸರಿನ ವ್ಯಾಖ್ಯಾನವನ್ನು ಪರಿಷ್ಕರಿಸಬೇಕು ಎಂದು ಮುಂಬೈ ರೈಲು ಯಾತ್ರಿ ಸಂಘ (ಬೊರಿವಿಲಿ) ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಒಲಿವರ್ ಡಿಸೋಜಾ ರೈಲ್ವೆ ಇಲಾಖೆಯನ್ನು ಆಗ್ರಹಿಸಿದ್ದಾರೆ. 

55 ಕಿ.ಮೀ. ವೇಗದಲ್ಲಿ ಓಡುವ ರೈಲುಗಳ ಕುರಿತು ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದು, ಇಂದಿನ ವೇಗದ ಜಗತ್ತಿನಲ್ಲಿ ‘ಸೂಪರ್‌ಫಾಸ್ಟ್’ ಎಂದರೆ ಭಾರತೀಯ ರೈಲ್ವೆ ವ್ಯಾಖ್ಯಾನದ ಪ್ರಕಾರ, ಗಂಟೆಗೆ ಕೇವಲ 55 ಕಿ.ಮೀ. ಸರಾಸರಿ ವೇಗವಿದ್ದರೆ ಸಾಕು! ಇದು ನಿಜಕ್ಕೂ ಹಾಸ್ಯಾಸ್ಪದ. ಚೀನಾದ ಮ್ಯಾಗ್ಲೆವ್, ಜರ್ಮನಿಯ ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಜಪಾನ್‌ನ ಶಿಂಕಾನ್ಸೆನ್ ಮತ್ತು ಫ್ರಾನ್ಸ್‌ನ ಜಿಟಿವಿ ರೈಲುಗಳು ಗಂಟೆಗೆ 350 ಕಿ.ಮೀ.ಗೂ ಅಧಿಕ ವೇಗದಲ್ಲಿ ಓಡುವ ಕಾಲದಲ್ಲಿ, ನಮ್ಮಲ್ಲಿ ರೈಲು ಆಟೋ ರಿಕ್ಷಾದ ವೇಗಕ್ಕೆ ಸಮಾನವಾದ 55 ಕಿ.ಮೀ. ವೇಗದಲ್ಲಿ ಸಂಚರಿಸುವುದಕ್ಕೆ ‘ಸೂಪರ್‌ಫಾಸ್ಟ್’ ಎಂದು ಮುದ್ರೆ ಹಾಕಲಾಗುತ್ತಿದೆ ಎಂದಿದ್ದಾರೆ.

ಎಕ್ಸ್ ಪ್ರೆಸ್ ಹೆಸರಲ್ಲಿ ಹೆಚ್ಚುವರಿ ಶುಲ್ಕ 

‘ಸೂಪರ್‌ಫಾಸ್ಟ್’ ವರ್ಗೀಕರಿಸಿದ ತಕ್ಷಣ ಟಿಕೆಟ್ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಬಹುದು. ಇದೇ ಮಾನದಂಡದಲ್ಲಿ ಇಂದು ದೇಶದಲ್ಲಿ ಸಾವಿರಕ್ಕೂ ಹೆಚ್ಚು ರೈಲುಗಳು ‘ಸೂಪರ್‌ಫಾಸ್ಟ್’ ಪಟ್ಟಿಗೆ ಸೇರಿವೆ. ಇತ್ತೀಚೆಗೆ ಸಿಎಜಿ ವರದಿಯೂ ನಿಧಾನಗತಿಯ ರೈಲುಗಳಿಂದಲೂ ಸೂಪರ್‌ಫಾಸ್ಟ್ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಎತ್ತಿ ತೋರಿಸಿದೆ ಎಂದು ಅವರು ಬೊಟ್ಟು ಮಾಡಿದ್ದಾರೆ. ರೈಲ್ವೆ ಇಲಾಖೆ ಈಗಿನ ತಂತ್ರಜ್ಞಾನ ಮತ್ತು ಪ್ರಯಾಣಿಕರ ನಿರೀಕ್ಷೆಗೆ ತಕ್ಕಂತೆ ‘ಸೂಪರ್‌ಫಾಸ್ಟ್’ನ ವ್ಯಾಖ್ಯಾನವನ್ನು ಪರಿಷ್ಕರಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ. 

ಇದೇ ವೇಳೆ, ಮಂಗಳೂರು- ಬೆಂಗಳೂರು ನಡುವೆ ವಂದೇ ಭಾರತ್ ರೈಲು ಓಡಿಸಲು ಪ್ರಯತ್ನ ನಡೆಯುತ್ತಿದೆ. ಆದರೆ ಈ ರೈಲು ಕೂಡ ಎರಡು ನಗರವನ್ನು ಸಂಪರ್ಕಿಸಲು ಎಂಟು ಗಂಟೆ ತೆಗೆದುಕೊಳ್ಳುತ್ತದೆ ಎಂದರೆ ಇದರ ಔಚಿತ್ಯದ ಪ್ರಶ್ನೆ ಬರುತ್ತದೆ.‌ ಶಿರಾಡಿ ಘಾಟ್ ವಿಭಾಗದಲ್ಲಿ ಈ ರೈಲಿನ ವೇಗವೂ 20-25 ಕಿಮೀ ಇರುತ್ತದೆ. ಅಲ್ಲಿ ಒಂದೇ ಹಳಿ ಇರುವುದು ಮತ್ತು ಏರುಹಾದಿ ಆಗಿರುವ ಕಾರಣ ಅಪಾಯಕಾರಿ ಎನಿಸಿದೆ. ಪರ್ಯಾಯ ಮಾರ್ಗ ಇಲ್ಲದೆ ವಂದೇ ಭಾರತ್ ರೈಲನ್ನೂ ಇದೇ ಹಾದಿಯಲ್ಲಿ ಓಡಿಸಬೇಕಿದೆ. ಎರಡು ದಿನಗಳ ಹಿಂದೆ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಪಿ.ಅನಂತ್ ಅವರು ಸಕಲೇಶಪುರ- ಸುಬ್ರಹ್ಮಣ್ಯ ವಿಭಾಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಪರಿಶೀಲಿಸಿ, ಕಾಮಗಾರಿಗಳನ್ನು ಪರಿಶೀಲಿಸಿದರು.