ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಒಬ್ಬ ರಾಷ್ಟ್ರದ್ರೋಹಿ ; ಕೆ.ಎಸ್.ಈಶ್ವರಪ್ಪ ಆಕ್ರೋಶ

14-08-20 05:35 pm       Shivamogga Reporter   ಕರ್ನಾಟಕ

ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಒಬ್ಬ ರಾಷ್ಟ್ರದ್ರೋಹಿ, ಜಮೀರ್ ಮುಸಲ್ಮಾನರ ನಾಯಕನಾಗಲು ಸ್ಪರ್ಧೆಯಲ್ಲಿದ್ದಾರೆ ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ , ಆಗಸ್ಟ್ 14: ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಒಬ್ಬ ರಾಷ್ಟ್ರದ್ರೋಹಿ, ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ.

ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರು, ಬೆಂಗಳೂರಿನ ಗಲಭೆಯಂತಹ ಸಂದರ್ಭ ಬಳಸಿಕೊಂಡು, ಜಮೀರ್ ಮುಸಲ್ಮಾನರ ನಾಯಕನಾಗಲು ಸ್ಪರ್ಧೆಯಲ್ಲಿದ್ದಾರೆ. ಪೊಲೀಸರನ್ನು ಕೊಲ್ಲಿ ಎನ್ನುವ, ದಾಂಧಲೆ ನಡೆಸುವವರ ಬೆಂಬಲಕ್ಕೆ ನಿಲ್ಲುತ್ತಾರೆ. ಇಂತಹವರನ್ನು ರಾಷ್ಟ್ರದ್ರೋಹಿ ಎನ್ನದೇ ಮತ್ತೇನಂತಾ ಕರೆಯೋಕಾಗುತ್ತೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಡೆದುಕೊಳ್ಳುತ್ತಿರುವ ರೀತಿ ನೋವು ತರುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಮೌಲ್ಯದ ರಾಜಕಾರಣ ಮಾಡಲಿ. ಶಂಕರಚಾರ್ಯರ ಪ್ರತಿಮೆ ಮೇಲೆ ಎಸ್.ಡಿ.ಪಿ.ಐ. ಧ್ವಜ ಹಾಕಿದರೆ ಈ ನಿಮಿಷದವರೆಗೂ ಯಾರು ಪ್ರತಿಕ್ರಿಯಿಸಿಲ್ಲ. ಮಾಧ್ಯಮಗಳ ಮೇಲೆ ಹಲ್ಲೆ ನಡೆಸಿದರೂ ಕಾಂಗ್ರೆಸ್ ನವರು ಸುಮ್ಮನೆ ಕೂತಿದ್ದಾರೆ. ಪೊಲೀಸ್ ಠಾಣೆ ಮತ್ತು ವಾಹನಗಳನ್ನು ಹಾಗೂ ಎಂ.ಎಲ್.ಎ. ಮನೆ ಸುಟ್ಟು ಹಾಕಿದ್ದಾರೆ. ಇಷ್ಟೆಲ್ಲ ಆದರೂ ಈ ಬಗ್ಗೆ ಕಾಂಗ್ರೆಸ್ ಖಂಡನೆ ವ್ಯಕ್ತಪಡಿಸಿಲ್ಲ ಎಂದು ದೂರಿದ್ದಾರೆ.