ಬ್ರೇಕಿಂಗ್ ನ್ಯೂಸ್
09-12-24 12:17 pm HK News Desk ದೇಶ - ವಿದೇಶ
ಡಮಾಸ್ಕಸ್ (ಸಿರಿಯಾ), ಡಿ.9: ಸಿರಿಯಾದಲ್ಲಿ ಸುದೀರ್ಘ 54 ವರ್ಷಗಳ ವಂಶಾಡಳಿತಕ್ಕೆ ಕೊನೆಯಾಗಿದೆ. ಇದರೊಂದಿಗೆ ವರ್ಗ ಸಂಘರ್ಷ, ಐಸಿಸ್ ಬಂಡುಕೋರರ ಅಂತರ್ಯುದ್ಧವೂ ಅಂತ್ಯವಾಗುತ್ತಾ ಅಥವಾ ಬಾಂಗ್ಲಾ ರೀತಿಯಲ್ಲೇ ಮತ್ತೊಂದು ರೀತಿಯ ಅವಾಂತರಕ್ಕೆ ಸಾಕ್ಷಿಯಾಗುತ್ತಾ ಎನ್ನುವ ಕುತೂಹಲ ಎದುರಾಗಿದೆ. ರಾಜಧಾನಿ ಡಮಾಸ್ಕಸ್ ಅನ್ನು ಬಂಡುಕೋರರು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಸಿರಿಯಾ ಅಧ್ಯಕ್ಷ ಬಶರ್ ಅಸಾದ್ ದೇಶ ತೊರೆದಿದ್ದಾರೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಬಳಿಕ ಸಿರಿಯಾ ಕೂಡ ಬಂಡುಕೋರರ ವಶವಾಗಿದೆ.
ಇದೇ ವೇಳೆ, ಬಶರ್ ಅಸಾದ್ ಮತ್ತು ಬೆಂಬಲಿಗರು ದೇಶವನ್ನು ತೊರೆದು ರಷ್ಯಾ ಸೇರಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ವರದಿ ಪ್ರಕಾರ, ಇವರು ಪ್ರಯಾಣಿಸುತ್ತಿದ್ದ ವಿಮಾನವನ್ನು ಬಂಡುಕೋರರು ಹೊಡೆದುರುಳಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ ಇವರು ಸಾವನ್ನಪ್ಪಿದ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇಷ್ಟಕ್ಕೂ ಇವರೊಳಗಿನ ಸಂಘರ್ಷಕ್ಕೆ ಹೇತುವಾಗಿದ್ದೇ ವರ್ಗ ದ್ವೇಷ ಅನ್ನುವುದೇ ವಿಶೇಷ. ಸಿರಿಯಾದಲ್ಲಿ ಜನಸಂಖ್ಯೆ ಪ್ರಕಾರ ಬಹುತೇಕ ಸುನ್ನಿಗಳದ್ದೇ ಪ್ರಾಬಲ್ಯ. ಆದರೆ ದೇಶದಲ್ಲಿ ಸಿರಿವಂತಿಕೆ ಮತ್ತು ಅಧಿಕಾರದ ಹಿಡಿತ ಇದ್ದುದು ಶಿಯಾ ಪಂಗಡಕ್ಕೆ ಸೇರಿದ ಅಲವೈಟ್ ಸಮುದಾಯದ್ದು. ದೇಶದ ಹೆಚ್ಚಿನ ಸಂಪನ್ಮೂಲ ಇವರ ಕೈಯಲ್ಲೇ ಇತ್ತು. ಬಶರ್ ಅಸಾದ್ ಮತ್ತು ಅವರ ಕುಟುಂಬವೂ ಇವರದ್ದೇ ಪಂಗಡವಾಗಿತ್ತು. 1971ರಿಂದ ಸಿರಿಯಾವು ಅಧ್ಯಕ್ಷ ಹಫೀಜ್ ಅಲ್ ಅಸಾದ್ ಕೈಯಲ್ಲಿತ್ತು. ನಿರಂಕುಶ ಆಡಳಿತ, ಸುನ್ನಿಗಳ ಬಗ್ಗೆ ಅಸಹನೀಯ ನಿರ್ಲಕ್ಷ್ಯದಿಂದಾಗಿ ದೇಶದಲ್ಲಿ ವರ್ಗ ಸಂಘರ್ಷ ಕಾಣಿಸಿಕೊಂಡಿತ್ತು. ಸಂಖ್ಯೆಯಲ್ಲಿ ಸುನ್ನಿಗಳು ಹೆಚ್ಚಿದ್ದರೂ, ಇವರಿಗೆ ಹೊರಗಿನ ಬೆಂಬಲ ಇಲ್ಲದೇ ಇದ್ದುದರಿಂದ ದೇಶದ ಒಳಗಡೆಯೇ ಬಂಡುಕೋರ ಸಂಘಟನೆಗಳು ಹುಟ್ಟಿಕೊಂಡಿದ್ದವು.
2000ನೇ ಇಸವಿಯಲ್ಲಿ ಹಫೀಜ್ ಅಲ್ ಬಸಾದ್ ಸಾವನ್ನಪ್ಪುವ ಮೊದಲು ತನ್ನ ಹಿರಿಯ ಮಗ ಬಾಸಿಲ್ ನನ್ನು ಉತ್ತರಾಧಿಕಾರಿಯಾಗಿ ಬಿಂಬಿಸಿದ್ದರು. ಆದರೆ ಬಾಸಿಲ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಆಗ ಲಂಡನ್ನಲ್ಲಿ ಓದುತ್ತಿದ್ದ ಬಶರ್ ಅವರನ್ನು ಕರೆತಂದು ಸೇನಾ ತರಬೇತಿ ನೀಡಲಾಗಿತ್ತು. ತರಾತುರಿಯಲ್ಲಿ 34 ವರ್ಷದ ಬಶರ್ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಅಧ್ಯಕ್ಷರಾಗಲು ಕನಿಷ್ಠ 40 ವರ್ಷ ಆಗಿರಬೇಕೆಂಬ ನಿಯಮವನ್ನು ಬದಿಗೊತ್ತಿ, 34 ವರ್ಷಕ್ಕೆ ಆ ಮಿತಿಯನ್ನು ಇಳಿಸಲಾಗಿತ್ತು. ನಂತರ ಬಶರ್ ಚುನಾವಣೆ ಸ್ಪರ್ಧಿಸಿ ಜನಾದೇಶವನ್ನೂ ಪಡೆದಿದ್ದರು. ಆದರೆ, ಚುನಾವಣಾ ಕಣದಲ್ಲಿ ಬೇರೆಯವರು ಸ್ಪರ್ಧಿಸದಂತೆ ನೋಡಿಕೊಳ್ಳಲಾಗಿತ್ತು.
ಆದರೆ ಬಂಡುಕೋರರ ಸಂಘರ್ಷ ಮುಂದುವರಿದಿತ್ತು. ಸಿರಿಯಾ ಸೇನೆಗೆ ರಷ್ಯಾ ಬೆಂಬಲವೂ ಇದ್ದುದರಿಂದ ಎಷ್ಟೇ ಆಂತರಿಕ ಯುದ್ಧಗಳು ನಡೆದರೂ ಆಡಳಿತವನ್ನು ಕೊನೆಗಾಣಿಸಲು ಸಾಧ್ಯವಾಗಿರಲಿಲ್ಲ. 2015ರ ವೇಳೆಗೆ ಉತ್ತರ ಸಿರಿಯಾದ ಭಾಗಗಳಲ್ಲಿ ಬಂಡುಕೋರರು ಅಧಿಪತ್ಯ ಸ್ಥಾಪಿಸಿದ್ದರು. ಆದರೆ 2020ರ ವೇಳೆಗೆ ಸಾಧಾರಣ ಮಟ್ಟಿಗೆ ಬಂಡುಕೋರರನ್ನು ಬಗ್ಗುಬಡಿಯುವಲ್ಲಿ ಸೇನೆ ಯಶಸ್ಸು ಪಡೆದಿತ್ತು. ಸುದೀರ್ಘ ಕಾಲದ ಸಂಘರ್ಷದಲ್ಲಿ ಅಂದಾಜು 5 ಲಕ್ಷಕ್ಕೂ ಹೆಚ್ಚು ಜನರು ಸತ್ತಿದ್ದರು. ಅವೆಷ್ಟೋ ಸಾವಿರ ಜನರು ಅಂಗವೂನಕ್ಕೀಡಾಗಿದ್ದರು. ಇದರಿಂದಾಗಿ ಜನಸಾಮಾನ್ಯರು ಕೂಡ ಅಸಾದ್ ಆಡಳಿತದ ಪರವಾಗಿರಲಿಲ್ಲ. ನಿರಂತರ ಸಂಘರ್ಷ ನಡೆಸುತ್ತಿದ್ದ ಬಂಡುಕೋರರ ಗುಂಪಿಗೆ ಜನಬೆಂಬಲವೂ ದೊರೆತಿತ್ತು. ಅಸಾದ್ ಆಡಳಿತ ಕೊನೆಗಾಣಿಸುವುದೇ ಇವರ ಪ್ರಮುಖ ಗುರಿಯಾಗಿತ್ತು. ಇದಲ್ಲದೆ, ಕುರ್ದಿಶ್ ಬುಡಕಟ್ಟು ಜನರ ಪರವಾಗಿ ಹೋರಾಡುತ್ತಿದ್ದ ಸಿರಿಯನ್ ಡೆಮಾಕ್ರಟಿಕ್ ಫ್ರಂಟ್ ಕೂಡ ಹೋರಾಟ ಕಣಕ್ಕಿಳಿದಿತ್ತು. ಆದರೆ ಇವರಿಗೆ ಅಸಾದ್ ಬಶರ್ ಇಳಿಸುವುದು ಗುರಿಯಾಗಿರಲಿಲ್ಲ. ಮತ್ತೊಂದೆಡೆ ಟರ್ಕಿ ಪ್ರೇರಿತ ಸಿರಿಯನ್ ನೇಶನಲ್ ಆರ್ಮಿ ಉಗ್ರರು ಅಧ್ಯಕ್ಷ ಅಸಾದ್ ಮತ್ತು ಕುರ್ದಿಶ್ ಗಳನ್ನು ವಿರೋಧಿಸಿ ಸಂಘರ್ಷಕ್ಕಿಳಿದಿದ್ದರು.
ಇದೇ ವೇಳೆ, ಅಲ್ ಖೈದಾ ಉಗ್ರರ ಬೆಂಬಲಿತ ಇಸ್ಲಾಮಿಕ್ ಸ್ಟೇಟ್ಸ್ ಆಫ್ ಸಿರಿಯಾ (ಐಸಿಸ್) ಸ್ಥಾಪನೆಗಾಗಿ ನಿರಂತರ ಅಂತರ್ಯುದ್ಧ ನಡೆದಿತ್ತು. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಪ್ರಾಬಲ್ಯ ಮೆರೆದ ಬಳಿಕ ಐಸಿಸ್ ಉಗ್ರರ ಪರವಾಗಿ ಇತರೇ ರಾಷ್ಟ್ರಗಳ ಉಗ್ರವಾದಿ ಗುಂಪುಗಳು ಬೆಂಬಲ ಘೋಷಿಸಿದ್ದವು. ಕಳೆದ 15 ದಿನಗಳಲ್ಲಿ ಅಲ್ ಖೈದಾ ಪರವಾಗಿರುವ ಹಯಾತ್ ತಹ್ರೀರ್ ಅಲ್ ಶಾಮ್ (ಎಚ್ ಟಿಎಸ್) ಉಗ್ರರು ರಾಜಧಾನಿ ಡಮಾಸ್ಕಸ್ ಸೇರಿದಂತೆ ಆಸುಪಾಸಿನ ನಗರಗಳನ್ನು ಒಮ್ಮಿಂದೊಮ್ಮೆಲೇ ಆಕ್ರಮಿಸಿಕೊಂಡು ಅಧಿಪತ್ಯ ಸ್ಥಾಪಿಸಿದ್ದಾರೆ. ಇಷ್ಟಾಗುತ್ತಲೇ ಅಧ್ಯಕ್ಷ ಅಸಾದ್ ಬಶರ್ ಮತ್ತು ಆತನ ಸೇನಾಧಿಕಾರಿಗಳು ಜಾಗ ಖಾಲಿ ಮಾಡಿದ್ದಾರೆ. ಪ್ರತಿ ದಾಳಿಯನ್ನೂ ಮಾಡಲಾಗದೆ ದೇಶ ಬಿಟ್ಟು ಓಡಿ ಹೋಗಿದ್ದಾರೆ.
ರಾಜಧಾನಿ ಡಮಾಸ್ಕಸ್ ನಲ್ಲಿ ಸಂಭ್ರಮ !
ಭಾನುವಾರ ಸೂರ್ಯೋದಯವಾಗುತ್ತಲೇ ರಾಜಧಾನಿ ಡಮಾಸ್ಕಸ್ನಲ್ಲಿ ಜನರ ಸಂಭ್ರಮ ಗರಿಗೆದರಿತ್ತು. ಜನರು ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಆಯಕಟ್ಟಿನ ಸ್ಥಳಗಳಲ್ಲಿ ಗುಂಪುಗೂಡಿ ಸಂಭ್ರಮ ಆಚರಿಸತೊಡಗಿದರು. 'ದೇವರು ದೊಡ್ಡವನು' ಎಂಬ ಮಾತು ಗುಂಪಿನಿಂದ ಅನುರಣಿಸುತ್ತಿತ್ತು. ವಾಹನಗಳಲ್ಲಿ ಹಾರ್ನ್ ಮೊಳಗಿಸುತ್ತ ಜನರು, ಬಂಡುಕೋರರು ಸಂಭ್ರಮಿಸಿದರು. ಅಸಾದ್ ವಿರೋಧಿ ಘೋಷಣೆಗಳು ಕೇಳಿಬಂದವು. ಭದ್ರತಾ ಪಡೆಗಳವರು ಅಲ್ಲಲ್ಲಿ ಅನಾಥವಾಗಿ ಬಿಟ್ಟುಹೋಗಿದ್ದ ಶಸ್ತ್ರಾಸ್ತ್ರಗಳನ್ನು ಎತ್ತಿಕೊಂಡ ತರುಣರು ದಿಗಂತದತ್ತ ಗುಂಡು ಹಾರಿಸಿ ವಿಜಯೋತ್ಸವ ಆಚರಿಸಿದರು. ಇದೇ ವೇಳೆ, ಅಧ್ಯಕ್ಷರ ಅರಮನೆಗೂ ಲಗ್ಗೆಹಾಕಿದ ಜನರು, ಪದಚ್ಯುತ ಅಧ್ಯಕ್ಷರ ಭಾವಚಿತ್ರಗಳಿದ್ದ ಬೃಹತ್ ಪಟಗಳನ್ನು ಹರಿದು ಆಕ್ರೋಶ ಹೊರಹಾಕಿದರು.
ಸರ್ಕಾರದ ಪದಚ್ಯುತಿಯ ಒಡನೆಯೇ ಅನೇಕ ಯೋಧರು, ಪೊಲೀಸರು, ಅಧಿಕಾರಿಗಳು ತಮ್ಮ ಹುದ್ದೆ ತೊರೆದು ಓಡಿಹೋಗಿದ್ದಾರೆ. ರಕ್ಷಣಾ ಸಚಿವಾಲಯವನ್ನು ಲೂಟಿ ಮಾಡುತ್ತಿರುವ ಹಾಗೂ ಸಚಿವಾಲಯ, ಅಧ್ಯಕ್ಷರ ಅರಮನೆಯಿಂದ ಕೆಲ ವಸ್ತುಗಳನ್ನು ಜನರು ಒಯ್ಯುತ್ತಿರುವ ವಿಡಿಯೊಗಳು ಹರಿದಾಡುತ್ತಿವೆ. ಇದಲ್ಲದೆ, ಸಿರಿಯಾ ಪ್ರಧಾನಿ ಮೊಹಮ್ಮದ್ ಘಾಜಿ ಜಲಾಲಿ ಅವರನ್ನು ಸ್ಥಾನದಿಂದ ಬಂಡುಕೋರರು ಕಿತ್ತು ಹಾಕಿದ್ದಾರೆ. ಇದೇ ವೇಳೆ, ಇತಿಹಾಸದುದ್ದಕ್ಕೂ ಸರ್ಕಾರದ ಪರವಿದ್ದ ಸ್ಥಳೀಯ 'ಅಲ್ ವತನ್' ದಿನಪತ್ರಿಕೆಯು, 'ನಾವು ಸಿರಿಯಾದ ಹೊಸ ಪುಟ ನೋಡುತ್ತಿದ್ದೇವೆ. ಹೆಚ್ಚು ರಕ್ತಪಾತ ಆಗಲಿಲ್ಲ ಎಂಬುದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಸಿರಿಯಾ ಇನ್ನು ಎಲ್ಲ ಸಿರಿಯನ್ನರದು ಆಗಲಿದೆ ಎಂದು ಆಶಿಸುತ್ತೇವೆ' ಎಂದೂ ಬರೆದಿದೆ.
ಪದಚ್ಯುತ ಸಿರಿಯಾ ಅಧ್ಯಕ್ಷ ಬಶರ್ ಅಸಾದ್ ಅವರ ವಿರುದ್ಧ ಯುದ್ಧದ ಅವಧಿಯಲ್ಲಿ ಮನುಕುಲದ ಮೇಲೆ ಅಪರಾಧ ಎಸಗಿರುವ ಗಂಭೀರ ಆರೋಪಗಳಿವೆ. 2013ರಲ್ಲಿ ರಾಜಧಾನಿ ಹೊರವಲಯದಲ್ಲಿ ತಮ್ಮದೇ ಜನರ ವಿರುದ್ಧ ರಾಸಾಯನಿಕ ಶಸ್ತ್ರ ವಿಷಗಾಳಿಯಿಂದ ಸಾವಿರಾರು ಜನರನ್ನು ಕೊಂದು ಹಾಕಿದ ಆರೋಪವೂ ಇದೆ.
ಅಬು ಮೊಹಮ್ಮದ್ ಅಲ್ ಗೊಲಾನಿ ಯಾರು ?
ಅಬು ಮೊಹಮ್ಮದ್ ಅಲ್ ಗೊಲಾನಿ ಇವರು ಸಿರಿಯಾದ ವಂಶಾಡಳಿತ ಕೊನೆಗಾಣಿಸಿದ ಹಯಾತ್ ಅಲ್ ತಹ್ರೀರ್ ಬಂಡುಕೋರ ಗುಂಪಿನ ನಾಯಕ. 2011ರಲ್ಲಿ ಅಲ್ ಖೈದಾದ ಸಿರಿಯನ್ ಶಾಖೆಯಾದ ಜಭಾತ್ ಅಲ್ ನುಸ್ರಾ, ಈ ಬಂಡುಕೋರ ಸಂಘಟನೆಯನ್ನು ಆರಂಭಿಸಿತ್ತು. 2016ರಲ್ಲಿ ಇವರೊಳಗೆ ಬಿರುಕುಂಟಾಗಿ ಪ್ರತ್ಯೇಕಗೊಂಡಿದ್ದವು. ಜಭಾತ್ ಫತೇ ಅಲ್ ಶಾಮ್ ಎನ್ನುವ ಸಂಘಟನೆಯು ಮಧ್ಯಪ್ರಾಚ್ಯದ ಜೋರ್ಡಾನ್, ಇಸ್ರೇಲ್, ಸಿರಿಯಾ, ಪ್ಯಾಲೆಸ್ತೀನ್, ಲೆಬನಾನ್ ದೇಶಗಳನ್ನು ಒಗ್ಗೂಡಿಸುವ ಉದ್ದೇಶಕ್ಕಾಗಿ ಹೋರಾಟಕ್ಕಿಳಿದರೆ, ಹಯಾತ್ ಅಲ್ ತಹ್ರೀರ್ ಅಬು ಮೊಹಮ್ಮದ್ ಅಲ್ ಗೊಲಾನಿ ನೇತೃತ್ವದಲ್ಲಿ ಬಶರ್ ಅಸಾದ್ ಆಡಳಿತವನ್ನು ಕೊನೆಗಾಣಿಸುವುದೇ ಮುಖ್ಯ ಗುರಿಯೆಂದು ಹೋರಾಟ ಶುರು ಮಾಡಿತ್ತು. ಇದೀಗ 42 ವರ್ಷ ವಯಸ್ಸಿನ ಗೊಲಾನಿ 'ಜಿಹಾದಿ ಮೂಲಭೂತ'ವಾದಿ ಸ್ಥಾನದಿಂದ ದೇಶದ ಆಡಳಿತ ಹಿಡಿತಕ್ಕೆ ಪಡೆಯುವ ಹಂತ ತಲುಪಿದ್ದಾರೆ. ಅಮೆರಿಕ ಈತನನ್ನು ಭಯೋತ್ಪಾದಕ ಎಂದು ಘೋಷಿಸಿದೆ. 2003ರಿಂದಲೂ ಅಲ್ಖೈದಾ ನಿಕಟವರ್ತಿಯಾಗಿದ್ದು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಈತನ ಎಚ್ಟಿಎಸ್ ಗುಂಪಿನವರು ಬಹುತೇಕ ಐಸಿಸ್ ಪ್ರೇರಿತ ಜಿಹಾದಿಗಳೇ ಆಗಿದ್ದಾರೆ.
ಇನ್ನೊಂದೆಡೆ ಆಂತರಿಕ ಸಂಘರ್ಷದ ಕಾರಣ ದೇಶ ತೊರೆದಿದ್ದ ಅಸಂಖ್ಯಾತ ಸಿರಿಯನ್ನರು ಬಶರ್ ಆಡಳಿತ ಪತನದ ಹಿಂದೆಯೇ ದೇಶಕ್ಕೆ ಮರಳಲು ಮುಂದಾಗಿದ್ದಾರೆ. ಇದರಿಂದಾಗಿ ಲೆಬನಾನ್ಗೆ ಹೊಂದಿಕೊಂಡ ಗಡಿಯಲ್ಲಿ ಭಾನುವಾರ ನೂಕುನುಗ್ಗಲು ಉಂಟಾಗಿತ್ತು. ಲೆಬನಾನ್ ಗಡಿಭದ್ರತಾ ಪಡೆ ಭಾನುವಾರ ಬೆಳಗ್ಗೆಯೇ ಗಡಿಯನ್ನು ಮುಕ್ತಗೊಳಿಸಿದ್ದು ಮುಕ್ತವಾಗಿ ಸಿರಿಯಾಗೆ ಮರಳಲು ಅವಕಾಶ ಕಲ್ಪಿಸಿಕೊಟ್ಟಿದೆ. ಅಧಿಕೃತ ಅಂಕಿ ಅಂಶದ ಪ್ರಕಾರ ಲೆಬನಾನ್ ನಲ್ಲಿ 7.68 ಲಕ್ಷ ಸಿರಿಯಾ ವಲಸಿಗರಿದ್ದಾರೆ. ಇರಾನ್, ರಷ್ಯಾ ಸಿರಿಯಾ ಅಧ್ಯಕ್ಷ ಅಸಾದ್ ಪರವಾಗಿದ್ದರೆ, ಲೆಬನಾನಿನ ಹೆಜ್ಬುಲ್ಲಾ ಉಗ್ರರು ಕೂಡ ಜೊತೆಗಿದ್ದರು. ಇಸ್ರೇಲ್ ಮತ್ತು ಉಕ್ರೇನ್ ಜೊತೆಗಿನ ಸಂಘರ್ಷ ಈ ನೆರೆ ರಾಷ್ಟ್ರಗಳ ಜಂಘಾಬಲವನ್ನು ಉಡುಗಿಸಿತ್ತು.
ಬಂಡುಕೋರರು ದಿಢೀರ್ ಬಲಗೊಂಡಿದ್ದು ಹೇಗೆ ?
ಸರ್ಕಾರದ ವಿರುದ್ಧ ಬಂಡಾಯ, ಬಂಡುಕೋರರ ಪ್ರಾಬಲ್ಯ ಎಷ್ಟಿದ್ದರೂ 2018ರಿಂದಲೂ ಇವರಿಗೆ ರಾಜಧಾನಿ ಡಮಾಸ್ಕಸ್ ಪ್ರವೇಶಿಸಲು ಆಗಿರಲಿಲ್ಲ. ಸಿರಿಯಾ ಸೇನೆಯೇ ರಾಜಧಾನಿ ಹೊರವಲಯದಲ್ಲಿ ಬಂಡುಕೋರರಿಗೆ ದಿಗ್ಬಂಧನ ಹೇರಿತ್ತು. ಸಿರಿಯಾ ಸೇನೆಗೆ ರಷ್ಯಾ, ಇರಾನ್, ಫ್ರಾನ್ಸ್ ಬೆಂಬಲವೂ ಇತ್ತು. ಬಂಡುಕೋರ ಗುಂಪು ಬಲಗೊಂಡರೆ ತಮ್ಮ ದೇಶಕ್ಕೂ ಆಪತ್ತು ಎಂದು ಅವು ಇದೀಗ ಪರಿಗಣಿಸಿದ್ದವು. ಆದರೆ ಕೆಲವು ದಿನಗಳ ಹಿಂದೆ ಸಿರಿಯಾದ 3ನೇ ಅತಿದೊಡ್ಡ ನಗರ ಎನಿಸಿರುವ ಹೋಮ್ಸ್ ಅನ್ನು ಬಂಡುಕೋರರು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. ಈ ನಗರ ರಾಜಧಾನಿ ಡಮಾಸ್ಕಸ್ ಮತ್ತು ಕರಾವಳಿ ಪ್ರಾಂತ್ಯದ ಲಟಾಕಿಯ ನಡುವೆ ಸಂಪರ್ಕ ಸೇತುವಂತಿದೆ. ಇಲ್ಲಿಯೇ ಸಿರಿಯಾ ನಾಯಕರ ನೆಲೆ ಮತ್ತು ರಷ್ಯಾದ ನೌಕಾಪಡೆ ನೆಲೆ ಇದೆ. ಅತ್ತ ಉಕ್ರೇನ್ ಜೊತೆಗಿನ ಯುದ್ಧದಿಂದ ಸಾಕಷ್ಟು ಬಲಹೀನವಾಗಿರುವ ರಷ್ಯಾ ಸೇನೆ ಇತ್ತೀಚಿನ ದಿನಗಳಲ್ಲಿ ಸಿರಿಯಾ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಶಸ್ತ್ರಾಸ್ತ್ರ ಪೂರೈಕೆಯನ್ನೂ ನಿಲ್ಲಿಸಿತ್ತು. ಇದನ್ನೇ ಅಸ್ತ್ರ ಮಾಡಿಕೊಂಡ ಬಂಡುಕೋರ ಗುಂಪು ನ.27 ಬಳಿಕ ನೇರವಾಗಿ ರಾಜಧಾನಿ ಡಮಾಸ್ಕಸ್ ನುಗ್ಗಿದ್ದು ಸುಪರ್ದಿಗೆ ಪಡೆಯಲು ಮುಂದಾಗಿದ್ದರು. ಸಿರಿಯಾದ ಬೆಳವಣಿಗೆ ಬಗ್ಗೆ ರಷ್ಯಾ, ಇರಾನ್ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅಮೆರಿಕವು, ಸಿರಿಯಾದಲ್ಲಿ ಹೊಸ ಸರ್ಕಾರ ಸ್ಥಾಪನೆಗೆ ಅವಕಾಶ ಒದಗಿದೆ ಎಂದು ಹೇಳಿದೆ.
Rebels in Syria announced on Sunday that they had seized control of the capital, Damascus, in a swift offensive, and proclaimed the end of President Bashar al-Assad's decades-long "tyranny". Assad's whereabouts remain unknown, with some reports suggesting he has fled to an undisclosed location.
07-06-25 06:57 pm
Bangalore Correspondent
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
RCB Manager Arrest, Court; ಸಿಎಂ ಸೂಚನೆಯಂತೆ ತನಿ...
06-06-25 05:32 pm
07-06-25 07:10 pm
HK News Desk
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
MP Brijesh Chowta, Delegation: ಐದು ದೇಶಗಳಲ್ಲಿ...
03-06-25 10:10 pm
07-06-25 05:37 pm
Mangalore Correspondent
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
Magalore Bus Accident, Bangalore: ಮಂಗಳೂರು- ಬೆ...
07-06-25 11:46 am
ಮಂಗಳೂರಿನ ಹುಡುಗ ಜಾಗತಿಕ ವೇದಿಕೆಯತ್ತ ಹೆಜ್ಜೆ ; ಜೂನ...
06-06-25 09:29 pm
Mangalore Minister Mankal Vaidya: ನಾಪತ್ತೆಯಾದ...
06-06-25 07:20 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm