ಡಾ. ಪುನೀತ್ ರಾಜ್‌ಕುಮಾರ್ ಸರಿಯಾಗಿ 1 ವರ್ಷದ ಹಿಂದೆ ಮಾಡಿದ್ದ ಟ್ವೀಟ್ ಈಗ ವೈರಲ್‌

27-10-22 02:37 pm       Source: Vijayakarnataka   ಸಿನಿಮಾ

'ಕರ್ನಾಟಕ ರತ್ನ' ಪುನೀತ್ ರಾಜ್‌ಕುಮಾರ್ ಕನಸಿನ 'ಗಂಧದ ಗುಡಿ' ಸಿನಿಮಾ ತೆರೆಕಾಣಲು ಕ್ಷಣಗಣನೆ ಆರಂಭವಾಗಿದೆ. ಪುನೀತ್ ರಾಜ್‌ಕುಮಾರ್ ಬಹಳ ಪ್ರೀತಿಯಿಂದ ಈ ಪ್ರಾಜೆಕ್ಟ್.

'ಕರುನಾಡ ಕಣ್ಮಣಿ' ಡಾ. ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ ಅಕ್ಟೋಬರ್ 29ಕ್ಕೆ ಸರಿಯಾಗಿ ಒಂದು ವರ್ಷ ತುಂಬಲಿದೆ. ಈಗಲೂ ಅವರ ಅಗಲಿಕೆಯ ನೋವಿನಲ್ಲಿ ಪುನೀತ್ ಫ್ಯಾನ್ಸ್ ಇದ್ದಾರೆ. ಇಂದಿಗೂ ಅವರ ಸಮಾಧಿ ಸ್ಥಳಕ್ಕೆ ಸಾವಿರಾರು ಜನರು ದಿನನಿತ್ಯ ಭೇಟಿ ನೀಡುತ್ತಾರೆ. ಅಂದಹಾಗೆ, ಇಂದು ಸೋಶಿಯಲ್ ಮೀಡಿಯಾದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಒಂದು ಹಳೆಯ ಪೋಸ್ಟ್ ವೈರಲ್ ಆಗಿದೆ. ಅಂದಹಾಗೆ, ಅದನ್ನು ಅವರು ಪೋಸ್ಟ್ ಮಾಡಿದ್ದು 2021ರ ಅಕ್ಟೋಬರ್ 27ರಂದು. ಇದೀಗ ಆ ಪೋಸ್ಟ್‌ಗೂ ಒಂದು ವರ್ಷ ತುಂಬಿದೆ. ಅಷ್ಟಕ್ಕೂ ಆ ಫೋಸ್ಟ್‌ನ್ಲಲಿ ಏನಿದೆ?

'ಗಂಧದ ಗುಡಿ' ಬಗ್ಗೆ ಪೋಸ್ಟ್ ಹಾಕಿದ್ದ ಅಪ್ಪು
'ಗಂಧದ ಗುಡಿ' ಎಂಬ ಪ್ರಾಜೆಕ್ಟ್ ಬಗ್ಗೆ ಅಪ್ಪು ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಆದರೆ 2021ರ ಅಕ್ಟೋಬರ್ 27ರಂದು ಮೊದಲ ಬಾರಿಗೆ ಅದರ ಬಗ್ಗೆ ಮಾತನಾಡಿದ್ದರು. ಒಂದು ಟ್ವೀಟ್ ಮಾಡಿದ್ದರು. ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು... ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು... ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು... ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ..' ಎಂದು ಬರೆದುದಕೊಂಡಿದ್ದರು. 2021ರ ನವೆಂಬರ್ 1ರಂದು 'ಗಂಧದ ಗುಡಿ' ಟೈಟಲ್ ಅನೌನ್ಸ್ ಮಾಡುವ ಬಗ್ಗೆಯೂ ಸುಳಿವು ನೀಡಿದ್ದರು. ಆದರೆ ಅಕ್ಟೋಬರ್ 29ರಂದು ಅವರು ನಿಧನರಾದರು.

Gandhada Gudi teaser out: Treat for all Puneeth Rajkumar's fans; check out  Appu's adventurous journey

ಅಕ್ಟೋಬರ್ 28ರಂದು 'ಗಂಧದ ಗುಡಿ' ರಿಲೀಸ್‌
ಪುನೀತ್ ರಾಜ್‌ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿರುವ 'ಗಂಧದ ಗುಡಿ' ಸಿನಿಮಾವನ್ನು ಅಕ್ಟೋಬರ್ 28ರಂದು ರಿಲೀಸ್ ಮಾಡುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಅಕ್ಟೋಬರ್ 27ರಂದೇ 'ಗಂಧದ ಗುಡಿ' ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋ ನಡೆಯಲಿದ್ದು, ಈಗಾಗಲೇ ಎಲ್ಲ ಟಿಕೆಟ್‌ ಸೋಲ್ಡ್ ಔಟ್ ಆಗಿವೆ. ಶುಕ್ರವಾರ (ಅ.28) ಮುಂಜಾನೆಯಿಂದಲೇ ಶೋಗಳು ಆರಂಭವಾಗಲಿವೆ. 'ಗಂಧದ ಗುಡಿ' ಸಿನಿಮಾದ ಪ್ರೀ-ರಿಲೀಸ್ ಇವೆಂಟ್‌ಗೆ ದಕ್ಷಿಣ ಭಾರತದ ಚಿತ್ರತಾರೆಯರು ಆಗಮಿಸಿದ್ದರು.

ಗಂಧದ ಗುಡಿ ಬಗ್ಗೆ ಅಶ್ವಿನಿ ಹೇಳಿದ್ದೇನು?
'ಈ ಹಿಂದೆ ಬಂದ 'ಗಂಧದ ಗುಡಿ' ಸಿನಿಮಾಗಳಲ್ಲಿ ಅಪ್ಪಾಜಿ ಮತ್ತು ಶಿವಣ್ಣ ಮಾಡಿದ್ರು. ಅದರಲ್ಲಿ ಒಂದು ಕಥೆ ಇತ್ತು. ಒಮ್ಮೆ ಅಮೋಘ್ ಜೊತೆಗೆ ಚರ್ಚೆ ಮಾಡುವಾಗ 'ಗಂಧದ ಗುಡಿ' ಅಂತ ಟೈಟಲ್ ಇಡಬಹುದು ಅಂತ ನಿರ್ಧಾರ ಮಾಡಿದ್ವಿ. ಈ 'ಗಂಧದ ಗುಡಿ'ಯಲ್ಲಿ ಏನ್ ಡಿಫರೆಂಟ್ ಅಂದ್ರೆ, ಇದು ಪುನೀತ್ ಅವರ ಜರ್ನಿ. ಇಲ್ಲಿ ಎಲ್ಲವನ್ನು ಕ್ಯಾಪ್ಚರ್ ಮಾಡಲಾಗಿದೆ. ಪ್ಲ್ಯಾನ್ ಮಾಡಿ ಶೂಟ್ ಮಾಡಿಲ್ಲ. ಇದನ್ನು ನನ್ನ ಮೂಲಕ ಕನ್ನಡಿಗರಿಗೆ ತೋರಿಸಬೇಕು ಎಂದುಕೊಂಡಿದ್ದು ನನಗೆ ತುಂಬ ಹೆಮ್ಮೆ ನೀಡಿದೆ. ಇಲ್ಲಿ ಅವರು ಅವರಾಗಿಯೇ ಇದ್ರು. ಮೇಕಪ್ ಇರಲಿಲ್ಲ, ಜಾಸ್ತಿ ಜನರು ಇರಲಿಲ್ಲ. ಒಂದೊಂದು ಶೆಡ್ಯೂಲ್ ಶೂಟಿಂಗ್ ಮುಗಿಸಿದಾಗಲೂ ಅವರು ತುಂಬ ಖುಷಿಯಾಗಿದ್ರು.. ನಾನು ಕಾಳಿ ನದಿಯಲ್ಲಿ ಶೂಟಿಂಗ್ ನಡೆಯುವಾಗ ಹೋಗಿದ್ದೆ. ಅಲ್ಲಿ ಅವರಿಗೆ ನೆಟ್‌ವರ್ಕ್ ಸಿಕ್ಕಿರಲಿಲ್ಲ. ಬೆಟ್ಟ ಹತ್ತಿ ನಂಗೆ ಕಾಲ್ ಮಾಡಿದ್ರು. 'ನೋಡಿಲ್ಲಿ ನಿಂಗೆ ಕಾಲ್ ಮಾಡೋಕೆ ಅಂತ ಬೆಟ್ಟ ಹತ್ತಿದ್ದೀನಿ..' ಅಂತ ಹೇಳಿದ್ರು. 'ಅದೆಲ್ಲ ಗೊತ್ತಿಲ್ಲ, ನೀನು ಬರಲೇಬೇಕು ಇಲ್ಲಿಗೆ.. ನಾಳೆ ಬೆಳಗ್ಗೆ ನೀನು ಇಲ್ಲಿರಬೇಕು..' ಎಂದರು. ನಾನು ಒಂದೆರಡು ದಿನ ಆದ್ಮೇಲೆ ಹೋದೆ. ಟ್ರಕ್ಕಿಂಗ್ ಕೂಡ ಮಾಡಿದೆವು. ಬೆಳಗ್ಗೆ 4.30ರಿಂದ 6.30ರ ತನಕ ಟ್ರಕ್ಕಿಂಗ್ ಮಾಡಿದೆವು. ನಂತರ ಒಂದು ಹಳ್ಳಿಗೆ ಹೋಗಿ, ಊಟ ಮಾಡಿಕೊಂಡು ಬಂದೆವು' ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದಾರೆ.

Gandhada Gudi Movie Dr Puneeth Rajkumars Old Tweet Goes Viral.