‘ಬನಾರಸ್’ ಚಿತ್ರದಲ್ಲಿ ಸಂಪೂರ್ಣ ಹಳೆ ಕಾಶಿಯನ್ನು ನೋಡಬಹುದು - ನಿರ್ದೇಶಕ ಜಯತೀರ್ಥ

01-11-22 02:58 pm       Source: Vijayakarnataka   ಸಿನಿಮಾ

ಬನಾರಸ್‌ ಹಿಂದೂಗಳ ಪವಿತ್ರ ಕ್ಷೇತ್ರ. ಜೀವನ ಪರ್ಯಂತ ಮಾಡಿದ ಪಾಪವನ್ನೆಲ್ಲ ಕಾಶಿಗೆ ಹೋಗಿ ಕಳೆದುಕೊಳ್ಳಬಹುದು ಎಂಬ ಅಭಿಪ್ರಾಯ ಹಲವರಲ್ಲಿದೆ.

ಜಯತೀರ್ಥ ನಿರ್ದೇಶನದ 'ಬನಾರಸ್‌' ಸಿನಿಮಾ ಕಾವ್ಯಾತ್ಮಕ ಪ್ರೇಮಕಥೆ ಎಂದು ಈ ಹಿಂದೆ ನಿರ್ದೇಶಕರೇ ಹೇಳಿದ್ದರು. ಈ ಚಿತ್ರದಲ್ಲಿ ಪ್ರೇಮಕಥೆಯ ಜತೆಗೆ ಇದುವರೆಗೂ ಕನ್ನಡಿಗರು ಸಿನಿಮಾಗಳಲ್ಲಿ ನೋಡಿರದ ಕಾಶಿಯನ್ನು ತೋರಿಸಲಾಗಿದೆ ಎಂದಿದ್ದಾರೆ ಜಯತೀರ್ಥ. ಬನಾರಸ್‌ ಹಿಂದೂಗಳ ಪವಿತ್ರ ಕ್ಷೇತ್ರ. ಜೀವನ ಪರ್ಯಂತ ಮಾಡಿದ ಪಾಪವನ್ನೆಲ್ಲ ಕಾಶಿಗೆ ಹೋಗಿ ಕಳೆದುಕೊಳ್ಳಬಹುದು ಎಂಬ ಅಭಿಪ್ರಾಯ ಹಲವರಲ್ಲಿದೆ. ಇಂತಹ ಒಂದು ಕ್ಷೇತ್ರದಲ್ಲಿ ಇಡೀ ಸಿನಿಮಾವನ್ನು ಜಯತೀರ್ಥ ಚಿತ್ರೀಕರಣ ಮಾಡಿದ್ದಾರೆ.

'ಬನಾರಸ್‌ ಒಂದು ಸಾಂಸ್ಕೃತಿಕ ಶಕ್ತಿ ಕೇಂದ್ರ. ಈ ಸ್ಥಳದಲ್ಲಿ ಚಿತ್ರೀಕರಣ ಮಾಡುತ್ತಾ ಮಾಡುತ್ತಾ ಈ ಊರೇ ಒಂದು ಪಾತ್ರವಾಗಿ ಬಿಡ್ತು. ನನ್ನ ಸಿನಿಮಾದ ಕಥೆಯನ್ನು ಸಹ ಈ ಬನಾರಸ್‌ ಮೀರಿದೆ ಎಂದರೆ ತಪ್ಪಾಗುವುದಿಲ್ಲ. ಆ ಊರಿನಲ್ಲಿ ಒಂದು ದೈವತ್ವವಿದೆ. ಸಾಕಷ್ಟು ಜನರು ಪ್ರವಾಸಕ್ಕೆಂದು ಬನಾರಸ್‌ಗೆ ಹೋಗುತ್ತಾರೆ. ಅವರೆಲ್ಲರೂ ನೋಡದ ಹಲವು ಸ್ಥಳಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಅವರಾರಿಗೂ ಸಿಗದ ಕಾಶಿ ನನಗೆ ಸಿಕ್ಕಿದೆ. ನನ್ನ ಪ್ರಕಾರ ಈ ಸಿನಿಮಾದ ಅತಿ ಮುಖ್ಯ ಪಾತ್ರ ಬನಾರಸ್‌' ಎಂದಿದ್ದಾರೆ ಜಯತೀರ್ಥ.

Here's the first look of Jayathirtha's multilingual love story, 'Banaras' |  Kannada Movie News - Times of India

'ಸ್ಕ್ರೀನ್‌ ಪ್ಲೇಯಲ್ಲಿ ಪ್ರೇಮಕಥೆ ಹೇಳುತ್ತಾ ಹೋದಂತೆ, ಕಾಶಿಯ ಅನಾವರಣ ಆಗುತ್ತದೆ. ಒಂದು ಕೋಣೆಯಲ್ಲಿಯೂ ಪ್ರೇಮಕಥೆ ತೋರಿಸಬಹುದು. ಆದರೆ ನಾನು ವಾರಾಣಸಿ ನಗರವನ್ನು ಯಾಕೆ ಆಯ್ಕೆ ಮಾಡಿಕೊಂಡೆ ಎಂಬುದು ಚಿತ್ರ ನೋಡಿದವರಿಗೆ ತಿಳಿಯುತ್ತದೆ. ಹಲವು ದೃಶ್ಯಗಳಲ್ಲಿ ಡಿವೈನಿಟಿ ಸೇರಿಕೊಂಡಿದೆ. ಆ ರೀತಿಯ ಡಿವೈನಿಟಿ ನನಗೆ ವಾರಾಣಸಿಯಲ್ಲಿ ಚಿತ್ರೀಕರಣ ಮಾಡಿದ್ದರಿಂದ ಮಾತ್ರ ದೊರೆಯಿತು ಎನ್ನಬಹುದು. ಈ ಕಾರಣಕ್ಕೆ ಸಿನಿಮಾ ನೋಡುಗರನ್ನು ತನ್ನೊಳಗೆ ಇಳಿಸಿಕೊಳ್ಳುತ್ತದೆ' ಎಂದಿದ್ದಾರೆ ನಿರ್ದೇಶಕರು.

ಭಾರತ್‌ ಮಾತಾ ಮಂದಿರ: 'ವಾರಾಣಸಿಯಲ್ಲಿ ಭಾರತ್‌ ಮಾತಾ ಮಂದಿರ ಎಂಬ ಸ್ಥಳವಿದೆ. ಅಲ್ಲಿ ಅಖಂಡ ಭಾರತವನ್ನು ಅಮೃತ ಶಿಲೆಯಲ್ಲಿ ಕೆತ್ತಲಾಗಿದೆ. ಪ್ರತಿದಿನ ಭಾರತ ಭೂಪಟಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ಜಾಗವನ್ನು ಬಹಳ ಅದ್ಭುತವಾಗಿ ಇಲ್ಲಿ ತೋರಿಸಿದ್ದೇವೆ. ನಮ್ಮ ಕಥೆಗೆ ಮತ್ತು ಆ ದೃಶ್ಯಕ್ಕೆ ಅವಶ್ಯಕತೆ ಇದ್ದ ಕಾರಣ ತೋರಿಸಿದ್ದೇವೆ. ಭಾರತ್‌ ಮಾತಾ ಮಂದಿರವನ್ನು ಕಾಶಿಗೆ ಹೋಗುವ ಸಾಕಷ್ಟು ಮಂದಿ ನೋಡುವುದಿಲ್ಲ. ಈ ಭಾರತ್‌ ಮಂದಿರವನ್ನು ಯಾರೂ ಮಿಸ್‌ ಮಾಡಿಕೊಳ್ಳಬಾರದು' ಎಂದಿದ್ದಾರೆ ಜಯತೀರ್ಥ.

ಹಳೆ ಕಾಶಿ: ಸದ್ಯ ವಾರಾಣಸಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಳೆ ಕಾಶಿಯನ್ನು ಸಂಪೂರ್ಣವಾಗಿ ಒಡೆದು, ಹೊಸದಾಗಿ ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ 'ಬನಾರಸ್‌' ಸಿನಿಮಾ ಈ ನಿರ್ಮಾಣ ಕೆಲಸಗಳು ಆರಂಭವಾಗುವುದಕ್ಕೂ ಮುನ್ನ ಚಿತ್ರೀಕರಣ ಆದ ಕಾರಣ ಸಂಪೂರ್ಣ ಹಳೆ ಕಾಶಿಯನ್ನು ಇಲ್ಲಿ ನೋಡಬಹುದು. 'ಗಂಗಾರತಿಯ ಸಂದರ್ಭದಲ್ಲಿ ನಾಯಕ ಮತ್ತು ನಾಯಕಿಯ ಭೇಟಿಯ ದೃಶ್ಯಗಳಿವೆ. ಅದನ್ನು ಸಾಕಷ್ಟು ನೈಜವಾಗಿ ಸೆರೆ ಹಿಡಿದಿದ್ದು, ಇದೊಂದು ರೀತಿಯಲ್ಲಿ ದೃಶ್ಯಕಾವ್ಯದಂತೆ ಕಾಣುತ್ತದೆ. ಹಳೇ ಕಾಶಿಯಲ್ಲಿ ಚಿತ್ರೀಕರಣಗೊಂಡ ಕೊನೆಯ ಸಿನಿಮಾ 'ಬನಾರಸ್‌'. ಈ ಚಿತ್ರದಲ್ಲಿ ಕಾಣಸಿಗುವ ಕಾಶಿ ಈಗ ಅಲ್ಲಿಗೆ ಹೋದರೂ ನೋಡಲಾಗುವುದಿಲ್ಲ' ಎಂಬುದು ನಿರ್ದೇಶಕರ ಮಾತು. 'ಬನಾರಸ್‌' ಸಿನಿಮಾದಲ್ಲಿ ಝೈದ್‌ ಖಾನ್‌ ನಾಯಕರಾಗಿದ್ದು, ನಾಯಕಿಯಾಗಿ ಸೋನಲ್‌ ಮಂಥೆರೋ ನಟಿಸಿದ್ದಾರೆ.

Kashi Plays Very Important Role In Banaras Says Jayatheertha.