ಈ ಭಾಗದ ಜನರಿಗೆ ಸತ್ಯ ಏನೆಂದು ಗೊತ್ತಿದೆ, ಸತ್ಯವನ್ನು ಎಲ್ಲಿ ಮುಟ್ಟಿಸಬೇಕೋ ಅಲ್ಲಿಗೆ ಮುಟ್ಟಿಸುತ್ತೇನೆ, ನಿಮ್ಮ ನಿರೀಕ್ಷೆಗೆ ತಕ್ಕಂತೆ ಪಕ್ಷ ನಿರ್ಧರಿಸುತ್ತದೆ ಎಂದ ಯತ್ನಾಳ್

19-05-23 03:38 pm       Mangalore Correspondent   ಕರಾವಳಿ

ಪೊಲೀಸರ ಅಮಾನವೀಯ ಕೃತ್ಯ ತಲೆ ತಗ್ಗಿಸುವಂಥದ್ದು. ಯಾವುದೇ ಆರೋಪಿಗಳನ್ನು ಮನಸೋ ಇಚ್ಛೆ ಹೊಡೆಯೋ ಅಧಿಕಾರ ಪೊಲೀಸರಿಗಿಲ್ಲ. ಈ ಭಾಗದ ಜನರಿಗೆ ಇದರ ಹಿಂದೆ ಏನಿದೆ ಅಂತ ಗೊತ್ತಿದೆ, ಆ ಆಳಕ್ಕೆ ಇಳಿಯಲು ನಾವು ಹೋಗಲ್ಲ.

ಪುತ್ತೂರು, ಮೇ 19 : ಪೊಲೀಸರ ಅಮಾನವೀಯ ಕೃತ್ಯ ತಲೆ ತಗ್ಗಿಸುವಂಥದ್ದು. ಯಾವುದೇ ಆರೋಪಿಗಳನ್ನು ಮನಸೋ ಇಚ್ಛೆ ಹೊಡೆಯೋ ಅಧಿಕಾರ ಪೊಲೀಸರಿಗಿಲ್ಲ. ಈ ಭಾಗದ ಜನರಿಗೆ ಇದರ ಹಿಂದೆ ಏನಿದೆ ಅಂತ ಗೊತ್ತಿದೆ, ಆ ಆಳಕ್ಕೆ ಇಳಿಯಲು ನಾವು ಹೋಗಲ್ಲ. ನಮಗೂ ನೋವಾಗಿದೆ, ಒಳಗಿನ ಸತ್ಯ ನಮಗೂ ಗೊತ್ತಾಗಿದೆ. ಆ ಸತ್ಯವನ್ನು ಎಲ್ಲಿ ಮುಟ್ಟಿಸಬೇಕೋ ಅಲ್ಲಿ ಮುಟ್ಟಿಸ್ತೇನೆ ಎಂದು ವಿಜಯಪುರ ಬಿಜೆಪಿ ಶಾಸಕ, ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 

ಪೊಲೀಸರಿಂದ ಹಲ್ಲೆಗೀಡಾದ ಕಾರ್ಯಕರ್ತರನ್ನು ಭೇಟಿಯಾದ ಯತ್ನಾಳ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಡಿವೈಎಸ್ಪಿ ಕೋಣೆಯಲ್ಲಿ ಕಾರ್ಯಕರ್ತರನ್ನು ಹೊಡೆಯಲಾಗಿದೆ. ಇದು ಪೊಲೀಸ್ ಇಲಾಖೆಗೆ ಗೌರವ ತರೋ ಕೆಲಸ ಅಲ್ಲ. ಇವರೇನು ತಾಲಿಬಾನಿಗಳಲ್ಲ, ದೇಶದ್ರೋಹದ ಕೆಲಸ ಮಾಡಿದವರಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣಿ, ಹೋರಾಟ, ಸಂಘರ್ಷ ಇರುತ್ತದೆ. ಆದರೆ ದೂರು ಬಂದಾಗ ತನಿಖೆ ಮಾಡಬೇಕು ವಿನಾ, ಪೊಲೀಸರಿಗೆ ಹೊಡೆಯೋ ಅಧಿಕಾರ ಇಲ್ಲ. ಇವರು ಕೊಲೆ ಮಾಡಿಲ್ಲ, ದೇಶ ವಿರೋಧಿ ಕೆಲಸ ಮಾಡಿಲ್ಲ. ಈ ಬಗ್ಗೆ ತನಿಖೆ ಆಗಬೇಕು, ಕೆಳ ಹಂತದ ಸಿಬ್ಬಂದಿ ಜೊತೆ ಡಿವೈಎಸ್ಪಿ ಮೇಲೂ ಕ್ರಮ ಆಗಬೇಕು. 

ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಕಾರ್ಯಕರ್ತರಿಗೆ ತುಂಬಾ ಸವಾಲಿದೆ. ಕಾಂಗ್ರೆಸ್ ಸರ್ಕಾರ ನಾಳೆಯಿಂದ ರಾಜ್ಯದಲ್ಲಿ ಬರ್ತಾ ಇದೆ. ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರ ಮಾರಣಹೋಮ ಆಗಿತ್ತು. ಇದೀಗ ಮತ್ತೆ ಅದೇ ನಾಯಕತ್ವದಲ್ಲಿ ಸರ್ಕಾರ ಬಂದಿದೆ. ಇದರಿಂದ ನಮ್ಮ ಕಾರ್ಯಕರ್ತರಿಗೆ ಭಯ ಮತ್ತು‌ ಅನಾಥ ಪ್ರಜ್ಞೆ ಮೂಡ್ತಾ ಇದೆ. ತಾಲಿಬಾನ್ ಸರ್ಕಾರ ಬರ್ತಾ ಇದೆ ಅಂತ ಹಿಂದೂ ಕಾರ್ಯಕರ್ತರು ಭಯಭೀತರಾಗಿದ್ದಾರೆ. ಹೀಗಾಗಿ ನಮ್ಮ ‌ಕಡೆಯಿಂದ ತಪ್ಪಾಗದಂತೆ ನಾವು ನೋಡಿಕೊಳ್ಳಬೇಕು. 

ನಾವು ಹಿಂದೂಗಳು ಯಾರಿಗೂ ತೊಂದರೆ ಕೊಡುವವರಲ್ಲ. ಯಾವುದೇ ಧರ್ಮದ ವಿರುದ್ದ ಅಲ್ಲ, ನಮ್ಮ ಹೋರಾಟ ಹಿಂದುತ್ವಕ್ಕೆ ಮಾತ್ರ. ಕೆಲವೊಂದು ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಬಂತು ಅಂತ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿದ್ರೆ ನಾವು ಅಂಥದ್ದನ್ನ ಸಹಿಸಲ್ಲ, ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಬೇರೆ ಅಲ್ಲ. ದೇಶದಲ್ಲಿ ಹಿಂದೂಗಳ ರಕ್ಷಣೆ ಮಾಡೋದು ಬಿಜೆಪಿ ಕೆಲಸ.‌ ಘಟನೆ ಮತ್ತು ಇಲ್ಲಿನ ಕಾರ್ಯಕರ್ತರ ಭಾವನೆಯನ್ನು ಕೇಂದ್ರದ ನಾಯಕರಿಗೆ ಹೇಳ್ತೇನೆ. ಹೊಡೆತಕ್ಕೆ ಒಳಗಾದ ಕಾರ್ಯಕರ್ತರಿಗೆ ಸರ್ಕಾರದಿಂದ ಪರಿಹಾರ ಸಿಗಬೇಕು. ನಾನು ವೈದ್ಯಕೀಯ ವೆಚ್ಚಕ್ಕೆ ಒಂದು ಲಕ್ಷ ವೈಯಕ್ತಿಕವಾಗಿ ನೀಡ್ತಾ ಇದೀನಿ. ಮತ್ತೊಂದು ವಿನಂತಿ ಮಾಡ್ತೇನೆ, ಇದನ್ನ ಮುಂದುವರೆಸೋದು ಬೇಡ. ನಮಗೂ ನೋವಾಗಿದೆ, ಒಳಗಿನ ಸತ್ಯ ನಮಗೂ ಗೊತ್ತಾಗಿದೆ. ಆ ಸತ್ಯವನ್ನು ಎಲ್ಲಿ ಮುಟ್ಟಿಸಬೇಕೋ ಅಲ್ಲಿ ಮುಟ್ಟಿಸ್ತೇನೆ. ನಾನು ಯಾವಾಗಲೂ ನಿಮ್ಮ ಜೊತೆಗೆ ಇರ್ತೇನೆ. ನಾನು ಬಂದ ಕ್ಷೇತ್ರವೂ‌ ಮುಸ್ಲಿಂ ಬಾಹುಳ್ಯದ ಪ್ರದೇಶ.‌

ಈ ಘಟನೆಯಲ್ಲಿ ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತರು ಅನ್ನೋ ಭಾವನೆ ಬೇಡ. ಇದಕ್ಕೆ ಕೆಲವೇ ದಿನಗಳಲ್ಲಿ ನಿಮ್ಮ ‌ಮನಸ್ಸಿನಲ್ಲಿ ಇರೋದಕ್ಕೆ ತಕ್ಕ ರೀತಿ ನಿರ್ಣಯ ಪಕ್ಷ ತೆಗೆದುಕೊಳ್ಳಲಿದೆ. ಯಾರೂ ಭಯ ಪಡೋ ಅಗತ್ಯ ಇಲ್ಲ, ಯಾರೂ ನೋವು ಪಡಬೇಡಿ. ಪಕ್ಷದಿಂದ ಆದ ನೋವನ್ನ ಸರಿ ಪಡಿಸೋ ಕೆಲಸ ಪಕ್ಷದ ಹೈಕಮಾಂಡ್ ಮಾಡಲಿದೆ. ರಾಜ್ಯಾಧ್ಯಕ್ಷರ ಹತ್ರ ನಿನ್ನೆ ಮಾತನಾಡಿದ್ದೇನೆ, ಹಂಗಾಮಿ ಸಿಎಂ ಬೊಮ್ಮಾಯಿ ಕೂಡ ಡಿಜಿಪಿ ಜೊತೆ‌ ಮಾತನಾಡಿದ್ದಾರೆ. ಅವರ ಪ್ರಯತ್ನ ಮಾಡ್ತಾ ಇದಾರೆ, ಇದು ನಮಗೆ ನೋವು ತರುವ ಮತ್ತು ತಲೆ ತಗ್ಗಿಸುವಂಥ ವಿಷಯ. 

ಅವರು ನಾವು ಬೇರೆ ಬೇರೆ ಅಲ್ಲ, ಅವರೂ ಪಕ್ಷದ ಕಾರ್ಯಕರ್ತರೇ. ಕಾರಣಾಂತರಗಳಿಂದ ಮತ್ತು ಪಕ್ಷದ ಕೆಲ ನಿರ್ಣಯಗಳಿಂದ ಮನಸ್ಸಿಗೆ ನೋವಾಗಿರುತ್ತೆ.‌ ಚುನಾವಣೆ ಟಿಕೆಟ್ ವಿಚಾರದಲ್ಲಿ ಆದ ಅಸಮಾಧಾನದಿಂದ ಹೀಗಾಗಿದೆ. ಜನ ಅದಕ್ಕೂ ಗೌರವ ಕೊಡಬೇಕು, ಅರುಣ್ ಕುಮಾರ್ ಅವರಿಗೂ ಹೆಚ್ಚು ಮತ ಬಂದಿದೆ. ಅವರ ಮೇಲೆಯೂ ಗೌರವ ಇದೆ, ಇದು ಪೂರ್ತಿ ಕೇಂದ್ರದ ಗಮನಕ್ಕೆ ಬಂದಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಪಕ್ಷ ಒಳ್ಳೆಯ ರೀತಿಯಲ್ಲಿ ಸ್ಪಂದಿಸಲಿದೆ.‌ ನಮ್ಮ ಒಳ ಜಗಳ, ವೈಯಕ್ತಿಕ ಪ್ರತಿಷ್ಠೆ ಕಾರಣಕ್ಕೆ ಪುತ್ತೂರಿನಲ್ಲಿ ಸೋಲಾಗಿದೆ. ಮುಂದಿನ ದಿನಗಳು ನಮಗೆ ಕಠಿಣ ಇದೆ, ಅದಕ್ಕೆ ನಾವು ತಯಾರಾಗಬೇಕು. ಇನ್ನೊಂದಿಷ್ಟು ಕಾರ್ಯಕರ್ತರ ಮೇಲೆ ಹಲ್ಲೆ ಆಗಬಹುದು. ಎಲ್ಲರೂ ಆತ್ಮಾವಲೋಕನ ಮಾಡಿ ತಪ್ಪಿದ್ರೆ ಕ್ಷಮೆ ಕೇಳಬೇಕು ಎಂದರು ಯತ್ನಾಳ್. 

ನಾನು ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕನ ಸ್ಥಾನದ ಅಪೇಕ್ಷೆ ಮಾಡಿಲ್ಲ. ಪಕ್ಷ ಒಂದಾಗಬೇಕು, ಪಕ್ಷದಿಂದ ದೂರವಾದ ಒಳ್ಳೆಯ ಕಾರ್ಯಕರ್ತರು ಒಟ್ಟಾಗಬೇಕು. ಇವರನ್ನೆಲ್ಲ ಮತ್ತೆ ಪ್ರೀತಿಯಿಂದ ಕರೆದುಕೊಂಡು ಪಕ್ಷ ಕಟ್ಟಬೇಕಿದೆ. ನಾನು ಬಿರುಕು ಉಂಟು ಮಾಡಲು ಬಂದಿಲ್ಲ, ಕಾರ್ಯಕರ್ತರ ಸೇರಿಸಲು ಬಂದಿದ್ದೇನೆ. ಅನ್ಯಾಯ ಆಗಿದೆ, ನಿರ್ಣಯದಿಂದ ಮನಸ್ಸಿಗೆ ನೋವಾಗಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದು ಮುಗಿದು ಹೋಯ್ತು. ಇದರ ಪರಿಣಾಮ ತಿಳಿದುಕೊಂಡು ಸ್ವಪ್ರತಿಷ್ಠೆ ಬಿಟ್ಟು ನೋಡಬೇಕು. ಎಲ್ಲರೂ ಒಂದಾಗಿ ಹೋಗೋ ಹೊಸ ಸೂತ್ರ ಕಂಡು ಹಿಡಿಯಬೇಕು. ನಾನು ಪಕ್ಷದ ಪರ ಇರೋನು, ಆದರೆ ನನಗೆ ಮುಲಾಜಿಲ್ಲ. ಕಾರ್ಯಕರ್ತರು ಮತ್ತು ಹಿಂದುತ್ವದ ಪರ ಇರೋನು. ನನಗೆ ಅವಕಾಶ ಕೊಟ್ಟರೆ ‌ಪಕ್ಷವನ್ನ ಮತ್ತೆ ಪುನಶ್ಚೇತನ ಮಾಡ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.

Basangouda Patil Yatnal visits puttur hospital to see victims of Police atrocity in BJP banner row, promises of justice. Disappointed over losing the Hindu bastion of Puttur in Dakshina Kannada district to the Congress, BJP cadres have put up a banner featuring former Chief Minister D V Sadananda Gowda and MP and state BJP president Nalin Kumar Kateel with a garland of slippers.