ರಜನಿಕಾಂತ್ ಪತ್ನಿ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲು!!

28-10-20 07:47 pm       Headline Karnataka News Network   ಸಿನಿಮಾ

ನಟ ರಜನಿಕಾಂತ್ ಪತ್ನಿ ವಿರುದ್ದ ಕೋಚಡೈಯಾನ್ ಸಿನಿಮಾ ರೈಟ್ಸ್ ಹಣಕಾಸಿನ ವಿವಾದಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಲಾಗಿದೆ.

ಬೆಂಗಳೂರು, ಅಕ್ಟೋಬರ್ .28 : ಕೋಚಡೈಯಾನ್ ಸಿನಿಮಾ ರೈಟ್ಸ್ ಹಣಕಾಸಿನ ವಿವಾದಕ್ಕೆ  ಸಂಬಂಧಪಟ್ಟಂತೆ ನಟ ರಜನಿಕಾಂತ್ ಪತ್ನಿ ವಿರುದ್ದ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಲಾಗಿದೆ.

 ಈ ಹಿಂದೆ ಕೆಳ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಿನಿಮಾ ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ  ನೀಡಿದ್ದು ಆದರೆ ಯಾರೊಬ್ಬರೂ ವಿಚಾರಣೆಗೆ ಹಾಜರಾಗಿರಲಿಲ್ಲ.ಹೀಗಾಗಿ ಆಯಡ್ ಬ್ಯೂರೊ ಜಾಹಿರಾತು ಕಂಪನಿಯಿಂದ ಕೋಚಡೈಯಾನ್ ಸಿನಿಮಾ ನಿರ್ಮಾಪಕರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿದೆ.  

ಕೋಚಡೈಯಾನ್ ಸಿನಿಮಾ ‌ ಬಿಡುಗಡೆಯಾದ ಬಳಿಕ 6.25 ಕೋಟಿ ರೂಪಾಯಿ ಹಣ ನೀಡದೆ ವಂಚನೆ ಎಸಗಿದ್ದಾರೆಂದು ಕೊಚ್ಚಾಡಿಯನ್ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್​​​​​ಗೆ ಹಣ ಹಾಕಿದ್ದ ಆಯಡ್ ಬ್ಯೂರೊ ಜಾಹಿರಾತು ಕಂಪನಿ ಲಿಮೆಟೆಡ್ ಆರೋಪ ಮಾಡಿತ್ತು. ಈ ಸಂಬಂಧ 2014ರಲ್ಲಿ ಲತಾ ರಜಿನಿಕಾಂತ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು. ಎಫ್‌ಐಆರ್ ರದ್ದು ಮಾಡುವಂತೆ ಲತಾ ರಜಿನಿಕಾಂತ್ ಹೈಕೋರ್ಟ್​ಗೆ ಅರ್ಜಿ ಹಾಕಿದ್ದರು.

ವಂಚನೆ ಪ್ರಕರಣ ಸಂಬಂಧ ಲತಾ ಅವರಿಗೆ ವಿಚಾರಣೆ ಎದುರಿಸುವಂತೆ ಸುಪ್ರೀಂ ಆದೇಶ ನೀಡಿತ್ತು. ಇದೇ ವಿಚಾರವಾಗಿ ಈಗ ಆಡ್ ಬ್ಯೂರೊ ಕಂಪನಿ ಲತಾ ರಜನಿಕಾಂತ್ ವಿರುದ್ಧ ಸಮನ್ಸ್ ಜಾರಿಮಾಡುವಂತೆ ಕೋರಿ ವಕೀಲ ಬಾಲನ್ ರವರಿಂದ  ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.