ಒಂದು ಮುತ್ತುವಿನ ಕಥೆ ಹೇಳಲಿದ್ದಾರೆ ನವೀನ್ ಸಜ್ಜು

18-12-20 03:00 pm       Source: News 18 Kannada   ಸಿನಿಮಾ

ನವೀನ್ ಸಜ್ಜು ಇದೀಗ ಹೀರೋ ಆಗಿ ಕಾಣಿಸಿಕೊಳ್ಳಲು ಸಕಲ ಸಿದ್ದತೆಯಲ್ಲಿದ್ದಾರೆ.

 

ಗಾಯಕ...ಬಿಗ್‌ಬಾಸ್‌ ರನ್ನರ್‌ ಅಪ್‌, ಸಂಗೀತ ನಿರ್ದೇಶಕ...ಹೀಗೆ ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನು ಹತ್ತಿರುವ ನವೀನ್ ಸಜ್ಜು ಇದೀಗ ಹೀರೋ ಆಗಿ ಕಾಣಿಸಿಕೊಳ್ಳಲು ಸಕಲ ಸಿದ್ದತೆಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟರಲ್ಲಾಗಲೇ ನವೀನ್ ಸಜ್ಜು ನಾಯಕನಾಗಿ ತೆರೆಮೇಲೆ ಕಾಣಿಸಿಕೊಳ್ಳಬೇಕಿತ್ತು. ಬಿಗ್ ಬಾಸ್​ನಿಂದ ಬಂದ ಬೆನ್ನಲ್ಲೇ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಜೋರಾಗಿ ಕೇಳಿ ಬಂದಿತ್ತು. ಆದರೆ ಆ ಸಿನಿಮಾ ಕಾರಣಾಂತರಗಳಿಂದ ಮುಂದಕ್ಕೆ ಹೋಗಲೇ ಇಲ್ಲ. ಇದಾದ ಬಳಿಕ ಕೆಮಿಸ್ಟ್ರಿ ಆಫ್‌ ಕರಿಯಪ್ಪ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಕುಮಾರ್ ಹೇಳಿದ ಕಥೆಗೆ ನವೀನ್ ಸಜ್ಜು ಓಕೆ ಅಂದಿದ್ದರು.

ಆ ಚಿತ್ರದ ಕಥೆ ಏನಾಯ್ತು? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ನವೀನ್ ಸಜ್ಜು ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾದ ಹೆಸರು ಮ್ಯಾನ್​ಷನ್ ಹೌಸ್ ಮುತ್ತು. ಅರೆರೆ ಇದೇನಪ್ಪಾ ವಿಭಿನ್ನ ಟೈಟಲ್ ಎಂದು ನೀವಂದುಕೊಂಡರೆ, ಕಥೆ ಕೂಡ ಅಷ್ಟೇ ವಿಭಿನ್ನವಾಗಿದೆ ಅಂತಾರೆ ನಿರ್ದೇಶಕರು. ಹೌದು, ಮ್ಯಾನ್​ಷನ್ ಹೌಸ್ ಮುತ್ತು  ಚಿತ್ರದ ಕಥೆ ನಡೆಯುವುದು ಒಂದು ಮನೆಯ ಸುತ್ತ ಮುತ್ತ ಎಂಬುದು ವಿಶೇಷ.

ಅಂದ್ರೆ ಇದು ದೆವ್ವ-ಪಿಶಾಚಿ ಚಿತ್ರನಾ ಎಂದು ನೀವು ಕೇಳಿದ್ರೆ ಸಜ್ಜು ಕಡೆಯಿಂದ ಸಿಗುವ ಉತ್ತರ ನೋ ನೋ. ಬದಲಾಗಿ ಪರಿಸರ ಪ್ರೇಮಿ ಮುತ್ತುವಿನ ಸುತ್ತ ನಡೆಯುವ ಕಥೆ. ಚಿತ್ರದಲ್ಲಿ ನಾಯಕನಿಗೆ ಪರಿಸರದ ಮೇಲೆ ವಿಪರೀತ ಪ್ರೀತಿ. ಅದರೊಂದಿಗೆ ಕಷ್ಟಕ್ಕೆ ಕರಗುವ ಮನಸ್ಸು...ಇಂತಹ ನಾಯಕನಿಗೆ ಎದುರಾಗುವ ಸಮಸ್ಯೆಗಳು, ಪರಿಸರವನ್ನು ಉಳಿಸಲು ಮಾಡುವ ಪ್ರಯತ್ನಗಳನ್ನು ಎಳೆ ಎಳೆಯಾಗಿ ಕಟ್ಟಿಕೊಡಲಿದ್ದಾರೆ ನಿರ್ದೇಶಕ ಕುಮಾರ್.



ಸದ್ಯ ಮ್ಯಾನ್​ಷನ್ ಮುತ್ತು ಚಿತ್ರವು 25 ದಿನಗಳ ಚಿತ್ರೀಕರಣವನ್ನು ಮುಗಿಸಿದ್ದು, ಮಡಿಕೇರಿಯ ಪ್ರಕೃತಿ ರಮಣೀಯ ಸ್ಥಳಗಳಲ್ಲಿ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇನ್ನು ಚಿತ್ರದ ಟೈಟಲ್​ನಿಂದಲೇ ನವೀನ್ ಸಜ್ಜು ಅವರ ಚೊಚ್ಚಲ ಚಿತ್ರದ ಬಗ್ಗೆ ಟಾಕುಗಳು ಶುರುವಾಗಿದ್ದು, ಸಜ್ಜು ಅವರ ಹೊಸ ಅವತಾರವನ್ನು ನೋಡಲು ಇತ್ತ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.

ಒಟ್ಟಿನಲ್ಲಿ ಎರಡನೇ ಚಿತ್ರದ ಮೂಲಕ ನಿರ್ದೇಶಕ ಕುಮಾರ್ ಹಾಗೂ ಮೊದಲ ಸಿನಿಮಾ ಮುಖಾಂತರ ನವೀನ್ ಸಜ್ಜು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದು, ಭಿನ್ನ ಕಥೆಯೊಂದಿಗೆ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ಜೊತೆ ಅತ್ಯುತ್ತಮ ಸಂದೇಶ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

This News Article is a Copy of News 18 Kannada