ತೀವ್ರ ರಕ್ತದೊತ್ತಡ ಸಮಸ್ಯೆಯಿಂದ ನಟ ರಜನಿಕಾಂತ್‌ ಆಸ್ಪತ್ರೆಗೆ ದಾಖಲು! ಹೈದರಾಬಾದ್‌ನಲ್ಲಿ ಚಿಕಿತ್ಸೆ

25-12-20 03:09 pm       Source: vijaykarnataka   ಸಿನಿಮಾ

 ಕಳೆದ ಕೆಲವು ದಿನಗಳಿಂದ 'ಅಣ್ಣಾಥೆ' ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದ ನಟ ರಜನಿಕಾಂತ್‌ ಅವರಿಗೆ ತೀವ್ರ ರಕ್ತದೊತ್ತಡದ ಸಮಸ್ಯೆ ಎದುರಾಗಿದೆ.

ಹೈದರಾಬಾದ್, ಡಿ.25: ಕಳೆದ ಕೆಲವು ದಿನಗಳಿಂದ 'ಅಣ್ಣಾಥೆ' ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದ ನಟ ರಜನಿಕಾಂತ್‌ ಅವರಿಗೆ ತೀವ್ರ ರಕ್ತದೊತ್ತಡದ (ಬಿ.ಪಿ.) ಸಮಸ್ಯೆ ಎದುರಾಗಿದೆ. ಹಾಗಾಗಿ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ 'ತಲೈವಾ' ಆರೋಗ್ಯ ಹೇಗಿದೆ ಎಂಬ ಬಗ್ಗೆ ಆಸ್ಪತ್ರೆಯು ಹೇಳಿಕೆ ಬಿಡುಗಡೆ ಮಾಡಿದೆ.

ಬಹುನಿರೀಕ್ಷಿತ 'ಅಣ್ಣಾಥೆ' ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಕೆಲವರಿಗೆ ಇತ್ತೀಚೆಗಷ್ಟೇ ಕೊರೊನಾ ವೈರಸ್‌ ತಗುಲಿತ್ತು. ನಾಲ್ಕು ಜನರಿಗೆ ಪಾಸಿಟಿವ್‌ ವರದಿ ಬಂದ ಬಳಿಕ ರಜನಿಕಾಂತ್ ಅವರನ್ನೂ ಪರೀಕ್ಷೆಗೆ ಒಳಪಡಿಸಲಾಯಿತು. ಅದೃಷ್ಟವಶಾತ್‌ ಅವರಿಗೆ ನೆಗೆಟಿವ್‌ ವರದಿ ಬಂದಿದೆ. ಹಾಗಿದ್ದರೂ ಅವರು ಸದ್ಯ ಐಸೊಲೇಟ್‌ ಆಗಿದ್ದಾರೆ. ಈ ವೇಳೆ ಅವರಿಗೆ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿದೆ.

ಶುಕ್ರವಾರ (ಡಿ.25) ಬೆಳಗ್ಗೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ರಜನಿಕಾಂತ್‌ ದಾಖಲಾಗಿದ್ದಾರೆ. 'ಅವರಿಗೆ ಕೋವಿಡ್‌-19ನ ಯಾವುದೇ ಲಕ್ಷಣಗಳು ಕಾಣಿಸಿಲ್ಲ. ಆದರೂ ಅವರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ರಕ್ತದೊತ್ತಡ ಸಹಜ ಸ್ಥಿತಿಗೆ ಬರುವವರೆಗೂ ಅವರನ್ನು ಡಿಸ್ಚಾರ್ಜ್‌ ಮಾಡಲು ಸಾಧ್ಯವಿಲ್ಲ' ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶುಕ್ರವಾರ ಅವರಿಗೆ ಮತ್ತೊಮ್ಮೆ ಕೊರೊನಾ ಪರೀಕ್ಷೆ ಮಾಡಲಾಗಿದೆ.

'ಅಣ್ಣಾಥೆ' ಚಿತ್ರವನ್ನು 'ಸನ್‌ ಪಿಕ್ಚರ್ಸ್‌' ಸಂಸ್ಥೆ ನಿರ್ಮಾಣ ಮಾಡುತ್ತಿದೆ. 'ಚಿತ್ರತಂಡದ ನಾಲ್ಕು ಜನರಿಗೆ ಕೊರೊನಾ ಪಾಸಿಟಿವ್‌ ಆಗಿದೆ. ರಜನಿಕಾಂತ್ ಮತ್ತು ಇತರೆ ತಂತ್ರಜ್ಞರಿಗೆ ನೆಗೆಟಿವ್‌ ವರದಿ ಬಂದಿದೆ. ಎಲ್ಲರ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಚಿತ್ರೀಕರಣವನ್ನು ಮುಂದೂಡಲಾಗಿದೆ' ಎಂದು ಸನ್‌ ಪಿಕ್ಚರ್ಸ್‌ ಗುರುವಾರ ಟ್ವೀಟ್‌ ಮೂಲಕ ತಿಳಿಸಿದೆ.

This News Article is a Copy of vijaykarnataka