ತಾಳ್ಮೆಯಿಂದ ಕಾಯಿರಿ, ಪತ್ರಿಕಾಗೋಷ್ಠಿ ಮಾಡುತ್ತೇನೆ; ನಟಿ ರಾಗಿಣಿ

08-02-21 03:09 pm       Source: FILMIBEAT   ಸಿನಿಮಾ

ಸರಿಯಾದ ಸಮಯದಲ್ಲಿ‌ ನಾನು ಪತ್ರಿಕಾಗೋಷ್ಠಿ ಮಾಡಿ ಮಾತನಾಡುತ್ತೇನೆ ಎಂದು ರಾಗಿಣಿ ಹೇಳಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಜೈಲ್ ಸೇರಿದ್ದ ರಾಗಿಣಿ ಜಾಮೀನಿನ ಮೇಲೆ ಬಂದಿದ್ದಾರೆ. ಸಿಸಿಬಿ ಕಚೇರಿಗೆ ಹಾಜರಾಗಿದ್ದ ನಟಿ ರಾಗಿಣಿ ಮಾಧ್ಯಮದ ಜೊತೆ ಮಾತನಾಡಿ, 'ತಾಳ್ಮೆಯಿಂದ ಕಾಯಿರಿ ಸರಿಯಾದ ಸಮಯದಲ್ಲಿ‌ ನಾನು ಪತ್ರಿಕಾಗೋಷ್ಠಿ ಮಾಡಿ ಮಾತಾಡುತ್ತೇನೆ' ಜಾಮೀನಿನ ಷರತ್ತಿನಂತೆ ನಟಿ ರಾಗಿಣಿ ಸಿಸಿಬಿ ಕಚೇರಿಗೆ ಹಾಜರಾಗಿದ್ದರು.

ತನಿಖಾಧಿಕಾರಿ ಪುನೀತ್ ಸಮಕ್ಷಮದಲ್ಲಿ ಸಹಿಮಾಡಿದ್ದಾರೆ. ಕಚೇರಿಯಿಂದ ಹೊರಬಂದು ಮಾಧ್ಯಮದವರ ಜೊತೆ ಮಾತನಾಡಿದ ರಾಗಿಣಿ, ' ನ್ಯಾಯಾಲಯ ಜಾಮೀನು ನೀಡುವಾಗ ವಿಧಿಸಿದ ಷರತ್ತಿನಂತೆ ಬಂದು ಸಹಿ ಮಾಡಿದ್ದೀನಿ ಅಷ್ಟೇ. ಬೇರೆ ಏನು ಇಲ್ಲ. ನಾನು ಬಿಡುಗಡೆಯಾದಾಗ ಪತ್ರಿಕಾಗೋಷ್ಠಿ ಮಾಡುತ್ತೇನೆ ಎಂದು ಹೇಳಿದ್ದೆ, ಈಗಲೂ ನಾನು ಅದನ್ನೇ ಹೇಳುತ್ತೇನೆ ತಾಳ್ಮೆಯಿಂದ ಕಾಯಿರಿ, ಸರಿಯಾದ ಸಮಯದಲ್ಲಿ‌ ನಾನು ಪತ್ರಿಕಾಗೋಷ್ಠಿ ಮಾಡಿ ಮಾತನಾಡುತ್ತೇನೆ' ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿ ಮಾಡಲು ರಾಗಿಣಿ ಯಾಕೆ ತಡಮಾಡುತ್ತಿದ್ದಾರೆ, ಯಾವೆಲ್ಲ ವಿಚಾರಗಳನ್ನು ಬಹಿರಂಗ ಪಡಿಸಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಅಂದಹಾಗೆ ರಾಗಿಣಿ ಸದ್ಯ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ರಾಗಿಣಿ ಮೊದಲ ಬಾರಿಗೆ ಕುಟುಂಬದ ಜೊತೆ ಪೂಜೆಯಲ್ಲಿ ಭಾಗಿಯಾಗಿದ್ದರು. ಪೂಜೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರೇ ಮಾಡಿದ್ದರು. ಇತ್ತೀಚಿಗೆ ರಾಗಿಣಿ ಅಪ್ಪ-ಅಮ್ಮನ ಜೊತೆಗೆ ಅಕ್ಕಿಪೇಟೆ ದರ್ಗಾಗೆ ಭೇಟಿ ನೀಡಿ ಅನ್ನದಾನ ಮಾಡಿದ್ದರು. ಈ ಸಮಯದಲ್ಲಿ ಮಾತನಾಡಿದ್ದ ರಾಗಿಣಿ ಸಿನಿಮಾಗಳ ಆಫರ್ ಗಳು ಬರುತ್ತಿವೆ. ಕಥೆಗಳನ್ನು ಕೇಳುತ್ತಿದ್ದೇನೆ, ಈ ತಿಂಗಳ ಅಂತ್ಯದಿಂದ ಚಿತ್ರೀಕರಣದಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ನಟಿ ರಾಗಿಣಿ ದ್ವಿವೇದಿ 143 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಅವರಿಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

This News Article is a Copy of FILMIBEAT